ರಾಜಸ್ಥಾನದಲ್ಲಿ ನಾಲ್ವರ ಜೀವ ತೆಗೆದ ನಕಲಿ ಮದ್ಯ
ಜೈಪುರ್, ಜನವರಿ.29: ನಕಲಿ ಮದ್ಯವನ್ನು ಸೇವಿಸಿದ ಓರ್ವ ಮಹಿಳೆ ಸೇರಿದಂತೆ ನಾಲ್ವರು ಮೃತಪಟ್ಟಿರುವ ಘಟನೆ ರಾಜಸ್ಥಾನದ ಭಿಲ್ವಾರ್ ಜಿಲ್ಲೆಯಲ್ಲಿ ನಡೆದಿದೆ. ಮದ್ಯ ಸೇವನೆ ಮಾಡಿದ ಇನ್ನೈವರು ಅಸ್ವಸ್ಥಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮಂದಾಲಘರ್ ಪೊಲೀಸ್ ಠಾಣಾ ವ್ಯಾಪ್ತಿಯ ಸರನ್ ಕಾ ಖೇದ್ ಗ್ರಾಮದಲ್ಲಿ ಗುರುವಾರ ಈ ಘಟನೆ ನಡೆದಿರುವ ಬಗ್ಗೆ ತಿಳಿದು ಬಂದಿದೆ. ನಕಲಿ ಮದ್ಯ ಸೇವನೆಯಿಂದ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಅಬಕಾರಿ ಮತ್ತು ಪೊಲೀಸ್ ಇಲಾಖೆಯ 12 ಸಿಬ್ಬಂದಿಯನ್ನು ವಜಾಗೊಳಿಸಿ ರಾಜಸ್ಥಾನ ಸರ್ಕಾರವು ಆದೇಶಿಸಿದೆ.
ಸಮವಸ್ತ್ರದಲ್ಲಿ ಮದ್ಯ ಸೇವನೆ; ಮೂವರು ಪೊಲೀಸರು ಅಮಾನತು
ನಕಲಿ ಮದ್ಯ ಸೇವಿಸಿ ಅಸ್ವಸ್ಥಗೊಂಡ ಐವರನ್ನು ಭಿಲ್ವಾರಾ ಜಿಲ್ಲಾ ಕೇಂದ್ರದಲ್ಲಿರುವ ಮಹಾತ್ಮ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಐವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಇನ್ನು, ಮೃತಪರನ್ನು ಹಜಾರಿ ಭೈರವಾ, ಸರ್ದಾರ್ ಭಟ್, ದಲೂಲ್ ಸಿಂಗ್ ಮತ್ತು ಮಹಿಳೆಯನ್ನು ಸತೂರಿ ಎಂದು ಗುರುತಿಸಲಾಗಿದೆ. ಬೇರೆ ಬೇರೆ ಕಾಲದಲ್ಲಿ ನಾಲ್ವರು ಮದ್ಯ ಸೇವನೆ ಮಾಡಿದ್ದರು ಎಂದು ತಿಳಿದು ಬಂದಿದೆ.
ಮೃತರ ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ ಘೋಷಣೆ:
ನಕಲಿ ಮದ್ಯ ಸೇವನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಸಾವಿಗೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸಂತಾಪ ಸೂಚಿಸಿದ್ದಾರೆ. ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂಪಾಯಿ ಮತ್ತು ಗಾಯಗೊಂಡವರ ಚಿಕಿತ್ಸೆಗೆ 50 ಸಾವಿರ ರೂಪಾಯಿ ಪರಿಹಾರ ಘೋಷಿಸಿದ್ದಾರೆ.
ಕಳೆದ ಜನವರಿ.13ರಂದು ನಕಲಿ ಮದ್ಯ ಸೇವಿಸಿ ಎಂಟು ಮಂದಿ ಪ್ರಾಣ ಬಿಟ್ಟಿದ್ದು, ಹಲವರು ದೃಷ್ಟಿ ಕಳೆದುಕೊಂಡಿದ್ದರು. ಈ ಘಟನೆ ಬೆನ್ನಲ್ಲೇ ಜಿಲ್ಲೆಯ ಹಲವು ಕಡೆಗಳಲ್ಲಿ ದಾಳಿ ನಡೆಸಿದ ಪೊಲೀಸರು ಮತ್ತು ಅಬಕಾರಿ ಇಲಾಖೆ ಅಧಿಕಾರಿಗಳು ನಕಲಿ ಮದ್ಯವನ್ನು ವಶಕ್ಕೆ ಪಡೆದು ನಾಶಪಡಿಸಿದ್ದರು.