ಲಸಿಕೆ ಪಡೆದ 5 ದಿನಗಳ ನಂತರ ವೈದ್ಯಕೀಯ ಸಿಬ್ಬಂದಿ ಸಾವು: ಕಾರಣ ಬಯಲು
ಜೈಪುರ್, ಜನವರಿ.22: ಕೊರೊನಾವೈರಸ್ ಲಸಿಕೆ ಪಡೆದುಕೊಂಡು 5 ದಿನಗಳ ನಂತರ ಪ್ರಾಣ ಬಿಟ್ಟ ವೈದ್ಯಕೀಯ ಸಿಬ್ಬಂದಿ ಸಾವಿನ ಹಿಂದಿನ ರಹಸ್ಯ ಬಯಲಾಗಿದೆ. ಕಿಡ್ನಿ ವೈಫಲ್ಯ, ಮೆದುಳಿನಲ್ಲಿ ರಕ್ತಸ್ರಾವ ಆಗಿರುವುದೇ ಸಾವಿಗೆ ಕಾರಣ ಎಂಬುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ.
ರಾಜಸ್ಥಾನದ ಚಿತ್ತೊರ್ ಘರ್ ನಲ್ಲಿ ಸಹಾಯಕ ಆಡಳಿತ ಅಧಿಕಾರಿಯಾಗಿ ಸುರೇಶ್ ಚಂದ್ರ ಶರ್ಮಾ ಅವರು ಸೇವೆ ಸಲ್ಲಿಸುತ್ತಿದ್ದರು. ಕೊವಿಡ್ ಲಸಿಕೆ ಪಡೆದು 5 ದಿನಗಳ ನಂತರ ಜ.21ರಂದು ಉದಯಪುರ್ ಜಿಲ್ಲೆಯ ಗೀತಾಂಜಲಿ ವೈದ್ಯಕೀಯ ಕಾಲೇಜಿನಲ್ಲಿ ಪ್ರಾಣ ಬಿಟ್ಟಿದ್ದರು.
ಒಮ್ಮೆ ಕೊರೊನಾ ಲಸಿಕೆ ಪಡೆದ ನಂತರ ಮುಂದೆ ಏನು ಮಾಡಬೇಕು?
ಸುರೇಶ್ ಚಂದ್ರ ಶರ್ಮಾ ಹೆಚ್ಚಿನ ರಕ್ತದೊತ್ತಡ ಸಮಸ್ಯೆ ಎದುರಿಸುತ್ತಿದ್ದು, ಕಿಡ್ನಿ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದರು. ಗುಜರಾತಿನ ನಡಿಯಡ್ ನಲ್ಲಿ ಕಿಡ್ನಿ ಸಂಬಂಧಿತ ಕಾಯಿಲೆಗೆ ಕಳೆದ ಮೂರು ವರ್ಷಗಳಿಂದ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಮದುಳಿನಲ್ಲಿ ತೀವ್ರ ರಕ್ತಸ್ರಾವ, ಕಿಡ್ನಿ ವೈಫಲ್ಯ ಮತ್ತು ರಕ್ತದೊತ್ತಡದಿಂದ ಶರ್ಮಾ ಮೃತಪಟ್ಟಿದ್ದಾರೆ. ಅವರ ಸಾವಿಗೂ ಕೊವಿಡ್-19 ಲಸಿಕೆಗೂ ಯಾವುದೇ ಸಂಬಂಧವಿಲ್ಲ ಎಂದು ಚಿತ್ತೋರ್ ಘರ್ ಜಿಲ್ಲೆಯ ವೈದ್ಯಕೀಯ ಮತ್ತು ಆರೋಗ್ಯ ಇಲಾಖೆ ಮುಖ್ಯಸ್ಥರು ಸ್ಪಷ್ಟಪಡಿಸಿದ್ದಾರೆ.
ರಾಜಸ್ಥಾನದಲ್ಲಿ ಅನಾರೋಗ್ಯ ಪ್ರಕರಣ ಸಂಖ್ಯೆ:
ದೇಶದಲ್ಲಿ ಜನವರಿ.16ರಂದು ಕೊರೊನಾವೈರಸ್ ಲಸಿಕೆ ನೀಡುವ ಅಭಿಯಾನಕ್ಕೆ ಚಾಲನೆ ನೀಡಲಾಗಿತ್ತು. ರಾಜಸ್ಥಾನದಲ್ಲಿ ಅಂದಿನಿಂದ ಇಂದಿನವರೆಗೂ ಆರು ದಿನಗಳಲ್ಲಿ ಲಸಿಕೆ ಪಡೆದ 44 ವೈದ್ಯಕೀಯ ಸಿಬ್ಬಂದಿ ಆರೋಗ್ಯ ಸ್ಥಿತಿಯಲ್ಲಿ ವ್ಯತ್ಯಾಸ ಕಂಡು ಬಂದಿದೆ. ಲಸಿಕೆ ಹಾಕಿಸಿಕೊಂಡವರ ರೋಗ ನಿರೋಧಕ ಶಕ್ತಿ ಮೇಲೆ ಪರಿಣಾಮ ಬೀರಿರುವುದು ಸ್ಪಷ್ಟವಾಗಿದೆ ಎಂದು ರೋಗ ನಿರೋಧಕ ಶಕ್ತಿ ಸಮಿತಿಯು ತಿಳಿಸಿದೆ. ರಾಜಸ್ಥಾನದಲ್ಲಿ ಜನವರಿ.19ರವರೆಗೂ 32,379 ಜನರು ಲಸಿಕೆ ಹಾಕಿಸಿಕೊಂಡ ನಂತರದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಜಗತ್ತಿನಲ್ಲೇ ಮೊದಲ ಬಾರಿಗೆ ಕ್ಷಿಪ್ರಗತಿಯಲ್ಲಿ ಲಸಿಕೆ ಅಭಿಯಾನ ನಡೆಸಲಾಗುತ್ತಿದ್ದು, 6 ದಿನಗಳಲ್ಲೇ 10 ಲಕ್ಷ ವೈದ್ಯಕೀಯ ಸಿಬ್ಬಂದಿಗೆ ಲಸಿಕೆ ನೀಡಲಾಗಿದೆ. ಇದೇ 10 ಲಕ್ಷ ಜನರಿಗೆ ಲಸಿಕೆ ನೀಡಲು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ ಮತ್ತು ಇಸ್ರೇಲ್ ನಲ್ಲಿ 10 ದಿನಗಳನ್ನು ತೆಗೆದುಕೊಳ್ಳಲಾಗಿದೆ.