ಅಳ್ವಾರ್ ಅತ್ಯಾಚಾರ ಸಂತ್ರಸ್ತೆ ಭೇಟಿ ಮಾಡಿದ ರಾಹುಲ್, ನ್ಯಾಯದ ಭರವಸೆ
ಅಳ್ವಾರ್ (ರಾಜಸ್ಥಾನ), ಮೇ 16: ರಾಜಸ್ಥಾನದ ಅಳ್ವಾರ್ನಲ್ಲಿ ಸಾಮೂಹಕ ಅತ್ಯಾಚಾರಕ್ಕೆ ಗುರಿಯಾಗಿದ್ದ ಸಂತ್ರಸ್ತೆಯನ್ನು ಇಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಭೇಟಿ ಆಗಿ ಧೈರ್ಯ ತುಂಬಿದರು, ನ್ಯಾಯ ಕೊಡಿಸುವಾಗಿ ಭರವಸೆಯನ್ನೂ ಕೊಡಿಸಿದರು.
ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, ನಾನು ಇಲ್ಲಿ ರಾಜಕೀಯ ಮಾಡಲು ಬಂದಿಲ್ಲ, ಇದು ನನಗೆ ಭಾವನಾತ್ಮಕವಾಗಿ ಕಾಡಿದ ವಿಷಯ. ಹಾಗಾಗಿ ಸಂತ್ರಸ್ತೆಯನ್ನು ಹಾಗೂ ಕುಟುಂಬವನ್ನು ಭೇಟಿ ಮಾಡಲು ಬಂದಿದ್ದೇನೆ ಎಂದು ಹೇಳಿದರು.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ಏಪ್ರಿಲ್ 30 ರಂದು ತನ್ನ ಪತಿಯೊಂದಿಗೆ ಬೈಕ್ನಲ್ಲಿ ಹೋಗುತ್ತಿದ್ದ ದಲಿತ ಯುವತಿಯನ್ನು ಮೋಟಾರ್ ಬೈಕ್ನಲ್ಲಿ ಬಂದ ಕೆಲವರು ಅಜ್ಞಾತ ಸ್ಥಳಕ್ಕೆ ಕರೆದುಕೊಂಡು ಹೋಗಿ, ಇಬ್ಬರನ್ನೂ ಬೆತ್ತಲೆ ಮಾಡಿ, ಪತಿಯ ಮುಂದೆಯೇ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದರು.
ಆದರೆ ಈ ಪ್ರಕರಣದ ಬಗ್ಗೆ ಎಫ್ಐಆರ್ ದಾಖಲಿಸಲು ಪೊಲೀಸರು ತಡ ಮಾಡಿದ್ದಾರೆಂದು ಆರೋಪಿಸಲಾಗಿದೆ. ರಾಜಸ್ಥಾನದಲ್ಲಿ ಆ ಸಂದರ್ಭದಲ್ಲಿ ಮತದಾನ ಇದ್ದಿದ್ದರಿಂದ ಮತದಾನದ ಮಾರನೇಯ ದಿನ ಅಂದರೆ ಮೇ 7 ರಂದು ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ ಎನ್ನಲಾಗಿದೆ.
ಆಳ್ವಾರ್ ಮಹಿಳೆಗೆ ಕಾಂಗ್ರೆಸ್ ಅನ್ಯಾಯ ಮಾಡಿದೆ : ನರೇಂದ್ರ ಮೋದಿ ಕಿಡಿ
ಆದರೆ ಇಂದು ರಾಹುಲ್ ಗಾಂಧಿ ಅವರ ಜೊತೆಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಅವರು, ಮೇ 2ರಂದೇ ಎಫ್ಐಆರ್ ದಾಖಲಿಸಲಾಗಿದೆ ಎಂದರು. ಆರೋಪಿಗಳನ್ನೂ ಬಂಧಿಸಲಾಗಿದೆ ಎಂದು ನುಡಿದರು.
ಕೆಲವು ದಿನಗಳ ಹಿಂದಷ್ಟೆ ರಾಜಸ್ಥಾನದಲ್ಲಿ ಭಾಷಣ ಮಾಡಿದ್ದ ಮೋದಿ, ರಾಜಸ್ಥಾನ ಸರ್ಕಾರವು ರಾಜಕೀಯ ಲಾಭಕ್ಕಾಗಿ ಅಳ್ವಾರ್ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸುತ್ತಿದೆ ಎಂದು ಆರೋಪಿಸಿದ್ದರು, ಸಮಾಜವಾದಿ ಪಕ್ಷ ಸಹ ಇದೇ ಮಾದರಿಯ ಹೇಳಿಕೆಯನ್ನು ನೀಡಿತ್ತು.