ಕೊರೊನೋತ್ತರ ಆರೋಗ್ಯ ಸಮಸ್ಯೆ: ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಆಸ್ಪತ್ರೆಗೆ ದಾಖಲು
ಜೈಪುರ, ಆಗಸ್ಟ್ 27: ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ಗೆ ಕೊರೊನೋತ್ತರ ಸಮಸ್ಯೆಗಳು ಕಾಣಿಸಿಕೊಂಡಿರುವ ಪರಿಣಾಮ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶುಕ್ರವಾರ ಬೆಳಗ್ಗೆ ಜೈಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಎದೆಯಲ್ಲಿ ನೋವು ಕಾಣಿಸಿಕೊಂಡ ಕಾರಣ ಸವಾಯ್ ಮಾನ್ ಸಿಂಗ್ ಆಸ್ಪತ್ರೆಗೆ ಕರೆತರಲಾಗಿದೆ. ಇದೀಗ ಅವರ ತೋವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ.
ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಅವರಿಗೆ ಕೊರೊನಾ ಪಾಸಿಟಿವ್
ಆಸ್ಪತ್ರೆ ವೈದ್ಯ ಸುಧೀರ್ ಭಂಡಾರಿ ನೀಡಿರುವ ಮಾಹಿತಿ ಪ್ರಕಾರ, ಅವರನ್ನು ಸಿಸಿಯುನಲ್ಲಿ ಇರಿಸಲಾಗಿದೆ, ಸ್ಕ್ಯಾನಿಂಗ್ ಮಾಡಿದಾಗ ಆರ್ಟರಿ(ಅಪಧಮನಿ) ಶೇ.90ರಷ್ಟು ಬ್ಲಾಕ್ ಆಗಿರುವುದು ತಿಳಿದುಬಂದಿದೆ.
ಗೆಹ್ಲೋಟ್ ಅವರು ಟ್ವೀಟ್ ಮಾಡಿದ್ದು, ಕೋವಿಡ್ನಿಂದ ಚೇತರಿಸಿಕೊಂಡ ಬಳಿಕ, ಹಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಿವೆ, ಎದೆನೋವು ಕಾಣಿಸಿಕೊಂಡ ಕಾರಣ ಆಸ್ಪತ್ರೆಗೆ ದಾಖಲಾಗಿದ್ದೇನೆ. ಆಂಜಿಯೋಪ್ಲಾಸ್ಟಿ ಮಾಡಲಾಗಿದೆ. ನಾನು ಆರೋಗ್ಯವಾಗಿದ್ದೇನೆ ಆದಷ್ಟು ಬೇಗ ಆಸ್ಪತ್ರೆಯಿಂದ ಬಿಡುಗಡೆಯಾಗುತ್ತೇನೆ ಎಂದು ಹೇಳಿಕೊಂಡಿದ್ದಾರೆ.
ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರಿಗೆ ಏಪ್ರಿಲ್ನಲ್ಲಿ ಕೊರೊನಾ ಸೋಂಕು ದೃಢಪಟ್ಟಿತ್ತು.
ಈ ಕುರಿತು ಸ್ವತಃ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರೇ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿ ಮಾಹಿತಿ ನೀಡಿದ್ದರು.
ಇಂದು ನಡೆಸಿದ ಕೊರೊನಾ ಪರೀಕ್ಷೆಯಲ್ಲಿ ನನಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ನನಗೆ ಯಾವುದೇ ರೀತಿಯ ಲಕ್ಷಣಗಳೂ ಕಂಡು ಬಂದಿಲ್ಲ. ನನ್ನ ಆರೋಗ್ಯ ಸ್ಥಿರವಾಗಿದೆ. ಕೊರೋನಾ ನಿಯಮ ಪಾಲನೆ ಮಾಡಬೇಕಾದ ಹಿನ್ನೆಲೆಯಲ್ಲಿ ನಾನು ಐಸೋಲೇಷನ್ ಒಳಗಾಗಲಿದ್ದು, ಐಸೋಲೇಷನ್ ನಲ್ಲಿಯೇ ನನ್ನ ಕಾರ್ಯವನ್ನು ಮುಂದುವರೆಸುತ್ತೇನೆಂದು ಎಂದು ಹೇಳಿದ್ದರು.
ಗೆಹ್ಲೋಟ್ ಅವರ ಪತ್ನಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಈ ಕುರಿತು ಟ್ವಿಟರ್ ನಲ್ಲಿ ಮಾಹಿತಿ ನೀಡಿದ್ದ ಗೆಹ್ಲೋಟ್ ಅವರು, ಪತ್ನಿ ಸುನಿತಾ ಗೆಹ್ಲೋಟ್ಗೆ ಕೋವಿಡ್ ತಗುಲಿರುವುದು ದೃಢಪಟ್ಟಿದೆ.
ಹೀಗಾಗಿ ಕೋವಿಡ್ ಮಾರ್ಗಸೂಚಿ ಪ್ರಕಾರ ಹಾಗೂ ಮುನ್ನೆಚ್ಚರಿಕಾ ಕ್ರಮವಾಗಿ ಮನೆಯಲ್ಲೇ ಪತ್ಯೇಕವಾಸ ಆರಂಭಿಸಿದ್ದೇನೆ ಎಂದು ತಿಳಿಸಿದ್ದರು. ಇದೀಗ ಕೊರೊನೋತ್ತರ ಸಮಸ್ಯೆಗಳು ಅವರನ್ನು ಕಾಡುತ್ತಿದೆ.