ರಾಜಸ್ಥಾನ ಬಿಕ್ಕಟ್ಟು; ಸಂವಿಧಾನ ಮತ್ತು ಪಕ್ಷಾಂತರ ನಿಷೇಧ ಕಾಯ್ದೆ
ಜೈಪುರ, ಜುಲೈ 28 : ರಾಜಸ್ಥಾನದ ಕಾಂಗ್ರೆಸ್ ಬಿಕ್ಕಟ್ಟು ನ್ಯಾಯಾಲಯದ ಮೆಟ್ಟಿಲೇರಿದೆ. ಸಂವಿಧಾನದ 10ನೇ ಪರಿಚ್ಛೇಧ ಮತ್ತು ಪಕ್ಷಾಂತರ ವಿರೋಧಿ ಕಾಯ್ದೆ ಬಗ್ಗೆ ರಾಜ್ಯದಲ್ಲಿ ಚರ್ಚೆಗಳು ಆರಂಭವಾಗಿವೆ. ಶಾಸಕರನ್ನು ಯಾವಾಗ ಅನರ್ಹಗೊಳಿಸಬಹುದು ಎಂಬುದು ಚರ್ಚೆಯ ಮುಖ್ಯಾಂಶವಾಗಿದೆ.
ಕಾಂಗ್ರೆಸ್ ಬಂಡಾಯ ನಾಯಕ ಸಚಿನ್ ಪೈಲೆಟ್ ಮತ್ತು ಇತರ 18 ಶಾಸಕರು ಸ್ಪೀಕರ್ ನೀಡಿರುವ ಅನರ್ಹತೆ ನೋಟಿಸ್ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಪಕ್ಷಾಂತರ ನಿಷೇಧ ಕಾಯ್ದೆ ಬಗ್ಗೆ ಚರ್ಚೆ ನಡೆದಿದೆ. ವಕೀಲರು ವಾದದ ಸಮಯದಲ್ಲಿ ಹಲವು ಅಂಶಗಳನ್ನು ಹೇಳಿದ್ದಾರೆ.
ರಾಜಸ್ಥಾನ ವಿಧಾನಸಭೆ ಅಧಿವೇಶನ ಕರೆಯಲು ರಾಜ್ಯಪಾಲರ ಆದೇಶ
ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಸಚಿನ್ ಪೈಲೆಟ್ ವರ ವಕೀಲರು ನ್ಯಾಯಾಲಯಕ್ಕೆ ಪಕ್ಷದ ಸದಸ್ಯತ್ವವನ್ನು ಬಿಡುತ್ತೇವೆ ಎಂದು ಎಲ್ಲಿಯೂ ಶಾಸಕರು ಹೇಳಿಲ್ಲ. ಪಕ್ಷಾಂತರ ನಿಷೇಧ ಕಾಯ್ದೆ ಪ್ಯಾರಾ (2) (1) ಎ ಅಡಿಯಲ್ಲಿ ಇದು ಬರುವುದಿಲ್ಲ. ಆದ್ದರಿಂದ, ಅನರ್ಹಗೊಳಿಸಲು ಸಾಧ್ಯವಿಲ್ಲ ಎಂದು ವಾದಿಸಿದ್ದರು.
ಶಾಸಕರ ಅನರ್ಹತೆ: ಸಂವಿಧಾನದ 10ನೇ ಪರಿಚ್ಛೇಧದಡಿ ಎರಡು ರೀತಿಯಲ್ಲಿ ಶಾಸಕರನ್ನು ಅನರ್ಹಗೊಳಿಸಬಹುದು. ಶಾಸಕ/ಶಾಸಕಿ ಸ್ವಯಂ ಪ್ರೇರಿತವಾಗಿ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರೆ ಅವರನ್ನು ಅನರ್ಹಗೊಳಿಸಬಹುದು. ಪ್ಯಾರಾ 2 (1) (ಬಿ) ಅಡಿಯಲ್ಲಿ ಪಕ್ಷ ನೀಡಿದ ಸೂಚನೆಗೆ ವಿರುದ್ಧವಾಗಿ ವಿಧಾನಸಭೆಯಲ್ಲಿ ಮತ ಚಲಾವಣೆ ಮಾಡಿದರೆ ಆಗ ಸಹ 10ನೇ ಪರಿಚ್ಛೇಧದಡಿ ಅನರ್ಹಗೊಳಿಸಲು ಅವಕಾಶವಿದೆ.
ರಾಜಸ್ಥಾನ ಕಾಂಗ್ರೆಸ್ ಬಿಕ್ಕಟ್ಟಿಗೆ ತಿರುವು; ಸ್ಪೀಕರ್ ಅರ್ಜಿ ವಾಪಸ್
ರಾಜಸ್ಥಾನ ಕಾಂಗ್ರೆಸ್ ಬಿಕ್ಕಟ್ಟಿನ ಸಂದರ್ಭದಲ್ಲಿ ಬಿಎಸ್ಪಿ ಪಕ್ಷದ ವಿಚಾರವೂ ಚರ್ಚೆಗೆ ಬಂದಿದೆ. ಆರು ಶಾಸಕರಿಗೆ ಪಕ್ಷ ನೀಡಿದ ವಿಪ್ ಬಗ್ಗೆ ಚರ್ಚೆ ಆಗುತ್ತಿದೆ. ಅಶೋಕ್ ಗೆಹ್ಲೋಟ್ ಸರ್ಕಾರದ ವಿರುದ್ಧ ಮತ ಚಲಾವಣೆ ಮಾಡುವಂತೆ ಬಿಎಸ್ಪಿ ವಿಪ್ ನೀಡಿತ್ತು. ವಿಪ್ ಉಲ್ಲಂಘನೆ ಮಾಡಿದರೆ ಅನರ್ಹಗೊಳಿಸುವುದಾಗಿ ತಿಳಿಸಲಾಗಿತ್ತು.
2019ರ ಸೆಪ್ಟೆಂಬರ್ನಲ್ಲಿ ರಾಜಸ್ಥಾನದ 6 ಬಿಎಸ್ಪಿ ಶಾಸಕರು ನಾವು ಕಾಂಗ್ರೆಸ್ ಪಕ್ಷದ ಜೊತೆ ವಿಲೀನವಾಗಿದ್ದೇವೆ ಎಂದು ಘೋಷಣೆ ಮಾಡಿದ್ದರು. ಸ್ಪೀಕರ್ ಸಹ ಇದಕ್ಕೆ ಒಪ್ಪಿಗೆ ನೀಡಿದ್ದರು. ಆದರೆ, ಬಿಎಸ್ಪಿ ಇದನ್ನು ಚುನಾವಣಾ ಆಯೋಗದಲ್ಲಿ ಪ್ರಶ್ನೆ ಮಾಡಿದೆ, ತೀರ್ಪು ಇನ್ನೂ ಪ್ರಕಟವಾಗಿಲ್ಲ.
ಬಿಜೆಪಿ ಲೆಕ್ಕಾಚಾರ ಉಲ್ಟಾ; ಪ್ರಿಯಾಂಕಾ ಜೊತೆ ಸಚಿನ್ ಮಾತುಕತೆ!
ಸೋಮವಾರ ಬಿಜೆಪಿ ಶಾಸಕರೊಬ್ಬರು ಕಾಂಗ್ರೆಸ್-ಬಿಎಸ್ಪಿ ವಿಲೀನವನ್ನು ರಾಜಸ್ಥಾನ ಹೈಕೋರ್ಟ್ನಲ್ಲಿ ಪ್ರಶ್ನೆ ಮಾಡಿದರು. ಆದರೆ, ನ್ಯಾಯಾಲಯ ಅರ್ಜಿಯನ್ನು ವಜಾಗೊಳಿಸಿದೆ. ರಾಜಸ್ಥಾನ ವಿಧಾನಸಭೆ ಅಧಿವೇಶನ ಕರೆಯಲು ರಾಜ್ಯಪಾಲ ಕಲ್ರಾಜ್ ಮಿಶ್ರಾ ಒಪ್ಪಿಗೆ ನೀಡಿದ್ದಾರೆ. ಸದನದಲ್ಲಿ ವಿಶ್ವಾಸಮತ ಯಾಚನೆ ಮಾಡಲಾಗುತ್ತದೆಯೇ? ಎಂಬುದು ಸದ್ಯದ ಪ್ರಶ್ನೆ.
ಯಾವಾಗ ವಿಪ್ ನೀಡಬಹುದು?: ಪಕ್ಷಗಳು ವಿಪ್ ನೀಡುವ ಬಗ್ಗೆ ಕಾನೂನು ಪಂಡಿತರಲ್ಲಿಯೇ ಎರಡು ವಾದಗಳು ಇವೆ. ವಿಧಾನಸಭೆ ಅಧಿವೇಶನ ಆರಂಭವಾಗುವುದಕ್ಕೂ ಮೊದಲೇ ವಿಪ್ ನೀಡಬೇಕು ಎಂಬುದು ಮೊದಲನೆಯದ್ದು. ಈ ವಾದ ಒಪ್ಪುವುದಾದದರೆ ಬಿಎಸ್ಪಿ ನೀಡಿರುವ ವಿಪ್ ಮಾನ್ಯ ಮಾಡಬೇಕು.
ಬಿಜೆಪಿ ವಾದವೇ ಬೇರೆ: ಬಿಎಸ್ಪಿ ಮತ್ತು ಕಾಂಗ್ರೆಸ್ ವಿಲೀನದ ವಿಚಾರದಲ್ಲಿ ಬಿಎಸ್ಪಿ ವಾದವೇ ಬೇರೆ. ಬಿಎಸ್ಪಿ ರಾಷ್ಟ್ರೀಯ ಪಕ್ಷ ರಾಜ್ಯ ಮಟ್ಟದಲ್ಲಿ ಅದು ಕಾಂಗ್ರೆಸ್ ಜೊತೆ ವಿಲೀನವಾಗಲು ಸಾಧ್ಯವಿಲ್ಲ. ಹಾಗೆ ಆಗುವುದಾದದರೆ ರಾಷ್ಟ್ರೀಯ ಮಟ್ಟದಲ್ಲಿಯೂ ವಿಲೀನವಾಗಬೇಕು.
ಬಿಎಸ್ಪಿಯ ರಾಷ್ಟ್ರೀಯ ನಾಯಕರು ಒಪ್ಪಿಗೆ ನೀಡದ ಹೊರತು ಪಕ್ಷ ರಾಜ್ಯ ಮಟ್ಟದಲ್ಲಿ ಕಾಂಗ್ರೆಸ್ ಜೊತೆ ವಿಲೀನ ಹೊಂದುವುದು ಸಾಧ್ಯವಿಲ್ಲ ಎಂದು ಬಿಜೆಪಿ ವಾದಿಸುತ್ತಿದೆ. ಇದು ಸಂವಿಧಾನ ತಜ್ಞರು ಇನ್ನು ಹೆಚ್ಚು ಅಧ್ಯಯನ ಮಾಡುವಂತೆ ಮಾಡಿದೆ.
ವಿಲೀನಕ್ಕೆ ಅವಕಾಶವಿದೆ: ಕಾಂಗ್ರೆಸ್ ಪ್ರತಿನಿಧಿಸುವ ವಕೀಲ ಸುನೀಲ್ ಫರ್ನಾಂಡೀಸ್, "ಎರಡೂ ಸಹ ರಾಷ್ಟ್ರೀಯ ಪಕ್ಷಗಳು ಆಗಿದ್ದಲ್ಲಿ ರಾಜ್ಯ ಮಟ್ಟದಲ್ಲಿ ವಿಲೀನಕ್ಕೆ ಅವಕಾಶವಿದೆ. ತಿಂಗಳುಗಳ ಹಿಂದೆ ಈ ವಿಲೀನ ನಡೆದಿದೆ. ಈಗ ಈ ಬಗ್ಗೆ ಏಕೆ ಪ್ರಶ್ನೆ ಮಾಡಲಾಗುತ್ತಿದೆ?" ಎಂದು ಪ್ರಶ್ನೆ ಮಾಡಿದ್ದಾರೆ.
ಯಾವುದೇ ಒಂದು ಪಕ್ಷದಲ್ಲಿ 3/1 ಭಾಗದಷ್ಟು ಶಾಸಕರು ಸಮ್ಮತಿ ನೀಡಿದರೆ ಅವರು ಬೇರೆ ಪಕ್ಷದ ಜೊತೆ ವಿಲೀನಗೊಳ್ಳಬಹುದು. ಆಗ ಅವರನ್ನು ಅನರ್ಹಗೊಳಿಸಲು ಸಾಧ್ಯವಿಲ್ಲ. 2003ರಲ್ಲಿ ಎನ್ಡಿಎ ಸರ್ಕಾರವಿದ್ದಾಗ ಈ ಕುರಿತು ಸಂವಿಧಾನದ 10ನೇ ಪರಿಚ್ಛೇಧಕ್ಕೆ ತಿದ್ದುಪಡಿ ತರಲಾಗಿದೆ ಎಂಬುದು ವಕೀಲರ ವಾದವಾಗಿದೆ.