ಪ್ರಧಾನಿ ನರೇಂದ್ರ ಮೋದಿ ಸೋದರನಿಂದ ಪೊಲೀಸ್ ಠಾಣೆ ಎದುರು ಧರಣಿ
ಜೈಪುರ್ (ರಾಜಸ್ತಾನ್), ಮೇ 15: ತನಗೆ ಬೆಂಗಾವಲಿಗೆ ಬರುವ ಪೊಲೀಸರಿಗೆ ಪ್ರತ್ಯೇಕ ವಾಹನ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿ ಪ್ರಧಾನಿ ನರೇಂದ್ರ ಮೋದಿ ಅವರ ಸೋದರ ಪ್ರಹ್ಲಾದ್ ಮೋದಿ ಮಂಗಳವಾರದಂದು ಪೊಲೀಸ್ ಠಾಣೆ ಎದುರು ಧರಣಿ ನಡೆಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರಹ್ಲಾದ್ ಮೋದಿ ಜೈಪುರ್ ಪ್ರವಾಸದಲ್ಲಿ ಇದ್ದರು. ಜೈಪುರ್- ಅಜ್ಮೇರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಇರುವ ಬಗ್ರು ಪೊಲೀಸ್ ಠಾಣೆ ಎದುರು ಅವರು ಧರಣಿ ನಡೆಸಿದ್ದಾರೆ. ಜೈಪುರ್ ಪೊಲೀಸ್ ಕಮಿಷನರ್ ಆನಂದ್ ಶ್ರೀವಾಸ್ತವ ಮಾತನಾಡಿ, ಇಬ್ಬರು ವೈಯಕ್ತಿಕ ಭದ್ರತಾ ಸಿಬ್ಬಂದಿ (ಪಿಎಸ್ ಒಗಳು) ಅವರ ಜತೆ ತೆರಳಲು ಬಗ್ರು ಪೊಲೀಸ್ ಠಾಣೆಯಲ್ಲಿ ಕಾಯುತ್ತಿದ್ದರು. ನಿಯಮದ ಪ್ರಕಾರ ಅವರ ವಾಹನದಲ್ಲೇ ಕೂರಬೇಕು ಎಂದಿದ್ದಾರೆ.
ಇಬ್ಬರು ಪಿಎಸ್ ಒ ಒದಗಿಸುವ ಬಗ್ಗೆ ಪ್ರಹ್ಲಾದ್ ಮೋದಿ ಅವರಿಗೆ ಆದೇಶ ತೋರಿಸಿದೆವು. ಅವರ ವಾಹನದಲ್ಲೇ ತೆರಳಬೇಕಿತ್ತು. ಆದರೆ ಅದಕ್ಕೆ ಪ್ರಹ್ಲಾದ್ ಒಪ್ಪಲಿಲ್ಲ. ಪಿಎಸ್ ಒಗಳನ್ನು ಪ್ರತ್ಯೇಕ ವಾಹನದಲ್ಲೇ ಕಳುಹಿಸುವಂತೆ ಒತ್ತಾಯ ಮಾಡಿದರು ಎಂದು ಶ್ರೀವಾಸ್ತವ ತಿಳಿಸಿದ್ದಾರೆ.
ಆ ನಂತರ ಪ್ರಹ್ಲಾದ್ ಮೋದಿ ಅವರು ಒಪ್ಪಿಕೊಂಡರು ಹಾಗೂ ನಿಯಮದ ಪ್ರಕಾರ ಅವರ ಜತೆಗೆ ಪಿಎಸ್ ಒಗಳ ತೆರಳಿದರು. ಅಷ್ಟರಲ್ಲಿ ಒಂದು ಗಂಟೆಗೂ ಹೆಚ್ಚು ಸಮಯ ಧರಣಿ ನಡೆಸಿದರು ಎಂದು ಹೇಳಿದ್ದಾರೆ.