ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜಸ್ಥಾನ ಬಿಕ್ಕಟ್ಟು; ರಾಜೀನಾಮೆ ನೀಡಲು ಸಿದ್ಧರಾದ 90ಕ್ಕೂ ಹೆಚ್ಚು ಶಾಸಕರು

|
Google Oneindia Kannada News

ಜೈಪುರ್, ಸೆ. 25: ರಾಜಸ್ಥಾನ ಸರಕಾರಕ್ಕೆ ಮತ್ತೊಮ್ಮೆ ಮಹಾ ಬಿಕ್ಕಟ್ಟು ಶುರುವಾಗಿದೆ. ಅಶೋಕ್ ಗೆಹ್ಲೋಟ್ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿರುವಂತೆಯೇ ಅವರ ಸಿಎಂ ಸ್ಥಾನ ಯಾರಿಗೆ ಹೋಗುತ್ತೆ ಎಂಬ ಪ್ರಶ್ನೆಯೇ ಈಗ ಬಿಕ್ಕಟ್ಟಿಗೆ ಕಾರಣವಾಗಿದೆ.

ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಬೆಂಬಲಿಗರಾದ 90ಕ್ಕೂ ಹೆಚ್ಚು ಶಾಸಕರು ರಾಜೀನಾಮೆ ನೀಡುವ ಬೆದರಿಕೆ ಹಾಕಿದ್ದಾರೆ. ಒಬ್ಬ ವ್ಯಕ್ತಿ ಒಂದು ಹುದ್ದೆ ನೀತಿಗೆ ಬದ್ಧರಾಗಬೇಕೆಂದು ರಾಹುಲ್ ಗಾಂಧಿ ಸೂಚಿಸಿದ ಹಿನ್ನೆಲೆಯಲ್ಲಿ ಈ ಪ್ರತಿರೋಧ ವ್ಯಕ್ತವಾಗುತ್ತಿದೆ.

ರಾಹುಲ್ ಗಾಂಧಿ ಸೂಚನೆ ಪ್ರಕಾರ ಅಶೋಕ್ ಗೆಹ್ಲೋಟ್ ಒಂದು ವೇಳೆ ಎಐಸಿಸಿ ಅಧ್ಯಕ್ಷರಾದರೆ ರಾಜಸ್ಥಾನ ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟುಕೊಡಬೇಕಾಗುತ್ತದೆ. ಆದರೆ, ಗೆಹ್ಲೋತ್ ಅವರಿಗೆ ಈ ವಿಚಾರದಲ್ಲಿ ವಿನಾಯಿತಿ ನೀಡಬೇಕು. ಅವರು ಎರಡೂ ಹುದ್ದೆಗಳನ್ನು ಏಕಕಾಲದಲ್ಲಿ ಹೊಂದಲು ಅವಕಾಶ ನೀಡಬೇಕು ಎಂದು 90ಕ್ಕೂ ಹೆಚ್ಚು ಶಾಸಕರು ಪಟ್ಟುಹಿಡಿದಿದ್ದಾರೆ.

ಇವರೆಲ್ಲರೂ ರಾಜಸ್ಥಾನ್ ವಿಧಾಸಸಭಾ ಸ್ಪೀಕರ್ ಅವರನ್ನು ಭೇಟಿ ಮಾಡಿ ರಾಜೀನಾಮೆ ನೀಡಲು ಸಿದ್ಧವಾಗಿದ್ದಾರೆ.

Over 90 MLAs of Rajasthan Threaten to Resign

ಸಚಿನ್ ಪೈಲಟ್ ಭಯ
ರಾಜಸ್ಥಾನದಲ್ಲಿ ಸಿಎಂ ಅಶೋಕ್ ಗೆಹ್ಲೋತ್ ಮತ್ತು ಸಚಿನ್ ಪೈಲಟ್ ಮಧ್ಯೆ ವೈರತ್ವ ಇರುವುದು ಹಳೆಯ ವಿಷಯವಾಗಿದೆ. ಈಗ ಒಂದು ವೇಳೆ ಅಶೋಕ್ ಗೆಹ್ಲೋತ್ ಕಾಂಗ್ರೆಸ್ ಅಧ್ಯಕ್ಷರಾಗಿ ರಾಜಸ್ಥಾನ ಸಿಎಂ ಸ್ಥಾನ ಬಿಟ್ಟುಕೊಟ್ಟರೆ ಅದು ಸಚಿನ್ ಪೈಲಟ್ ಪಾಲಾಗಬಹುದು ಎಂಬುದು ಗೆಹ್ಲೋತ್ ಬೆಂಬಲಿಗರ ಭಯವಾಗಿದೆ. ಹೀಗಾಗಿ, ಗೆಹ್ಲೋತ್ ಅವರೆಯೇ ಸಿಎಂ ಆಗಿ ಮುಂದುವರಿಯಲಿ ಎಂಬುದು ಅವರ ಒತ್ತಾಯ.

ಹಾಗೊಂದು ವೇಳೆ, ಸಿಎಂ ಸ್ಥಾನ ಬಿಟ್ಟುಕೊಡಲೇ ಬೇಕು ಎಂದಾದಲ್ಲಿ ಗೆಹ್ಲೋತ್‌ಗೆ ನಿಷ್ಠರಾಗಿರುವ ನಾಯಕರಲ್ಲಿ ಒಬ್ಬರಿಗೆ ಸಿಎಂ ಸ್ಥಾನ ಕೊಡಬೇಕು ಎಂಬ ಬೇಡಿಕೆಯೂ ಇದೆ.

ಇದೇ ವೇಳೆ, ತಮ್ಮ ಬೆಂಬಲಿಗರಾಗಿರುವ 90ಕ್ಕೂ ಹೆಚ್ಚು ಶಾಸಕರು ರಾಜೀನಾಮೆ ನೀಡಲು ಮುಂದಾಗಿರುವ ವಿಚಾರದ ಬಗ್ಗೆ ಕೇಂದ್ರೀಯ ನಾಯಕ ಕೆಸಿ ವೇಣುಗೋಪಾಲ್ ಜೊತೆ ದೂರವಾಣಿಯಲ್ಲಿ ಮಾತನಾಡಿದ ಅಶೋಕ್ ಗೆಹ್ಲೋತ್, "ನನ್ನ ಕೈಯಲ್ಲಿ ಏನೂ ಇಲ್ಲ" ಎಂಬ ಅಸಹಾಯಕತೆಯ ಮಾತುಗಳನ್ನು ಆಡಿದರೆನ್ನಲಾಗಿದೆ.

Over 90 MLAs of Rajasthan Threaten to Resign

ಭಾನುವಾರ ಸಂಜೆ ಗೆಹ್ಲೋತ್ ಬೆಂಬಲಿಗ ಶಾಸಕರು ಸಭೆ ನಡೆಸಿ ಈ ವಿದ್ಯಮಾನಗಳ ಕುರಿತು ಚರ್ಚಿಸಿದ್ದಾರೆ. 2020ರಲ್ಲಿ ಸರಕಾರದ ವಿರುದ್ಧ ದಂಗೆ ಎದ್ದಿದ್ದ ಸಚಿನ್ ಪೈಲಟ್ ಕೈಗೆ ಸರಕಾರ ಬೀಳುವುದು ಬೇಡ. ಮುಖ್ಯಮಂತ್ರಿಗಳಿಗೆ ಕಷ್ಟಕಾಲದಲ್ಲಿ ಬೆಂಬಲ ನೀಡಿದವರಲ್ಲಿ ಒಬ್ಬರು ಸಿಎಂ ಆಗಲಿ ಎಂಬ ಅಭಿಪ್ರಾಯ ಈ ಸಭೆಯಲ್ಲಿ ಕೇಳಿಬಂದಿದೆ. ಶಾಸಕ ಶಾಂತಿ ದಾರಿವಾಲ್ ಮನೆಯಲ್ಲಿ ನಡೆದ ಈ ಸಭೆಯಲ್ಲಿ ಈ ಬಗ್ಗೆ ನಿರ್ಣಯ ಕೂಡ ಹೊರಡಿಸಲಾಗಿದೆ.

"ಶಾಸಕರ ಇಚ್ಛೆಯಂತೆ ನಿರ್ಧಾರ ತೆಗೆದುಕೊಳ್ಳದೇ ಹೋದಲ್ಲಿ ಸರಕಾರ ಹೇಗೆ ನಡೆಯುತ್ತದೆ? ಸರಕಾರ ಪತನವಾಗುತ್ತದೆ" ಎಂದು ಪಕ್ಷೇತರ ಶಾಸಕ ಸಾನ್ಯಂ ಲೋಧಾ ಎಚ್ಚರಿಕೆ ನೀಡಿದ್ದಾರೆ.

ರಾಜಸ್ಥಾನ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಭಾನುವಾರ ಬೆಳಗ್ಗೆ ನಡೆಯಬೇಕಿತ್ತು. ಮಲ್ಲಿಕಾರ್ಜುನ ಖರ್ಗೆ, ಅಜಯ್ ಮಾಕೆನ್ ಮೊದಲಾದ ನಾಯಕರು ಈ ಸಭೆಯಲ್ಲಿ ಪಾಲ್ಗೊಳ್ಳಬೇಕಿತ್ತು. ಆದರೆ ಅದ ನಡೆಯಲಿಲ್ಲ. ಬದಲಾಗಿ ಅಶೋಕ್ ಗೆಹ್ಲೋತ್ ಅವರು ಖರ್ಗೆ ಮತ್ತು ಮಾಕೆನ್ ಜೊತೆ ಫೈವ್ ಸ್ಟಾರ್ ಹೋಟೆಲ್‌ವೊಂದರಲ್ಲಿ ಭೇಟಿಯಾಗಿ ಚರ್ಚಿಸಿದ್ದು ತಿಳಿದುಬಂದಿದೆ.

ಇದಾದ ಬಳಿಕ ಅಶೋಕ್ ಗೆಹ್ಲೋತ್ ತಮ್ಮ ಸ್ವಪಕ್ಷೀಯ ರಾಜಕೀಯ ಎದುರಾಳಿ ಸಚಿನ್ ಪೈಲಟ್ ಮತ್ತವರ ಬೆಂಬಲಿಗರನ್ನು ಭೇಟಿ ಮಾಡುವ ನಿರೀಕ್ಷೆ ಇದೆ.

ದಿವಂಗತ ಕಾಂಗ್ರೆಸ್ ಮುಖಂಡ ರಾಜೇಶ್ ಪೈಲಟ್ ಮಗ ಸಚಿನ್ ಪೈಲಟ್ ರಾಜಸ್ಥಾನ ಸಿಎಂ ಕುರ್ಚಿಯ ಮೇಲೆ ಕಣ್ಣಿಟ್ಟಿವರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿನಲ್ಲಿ ಸಚಿನ್ ಪೈಲಟ್ ಪಾತ್ರ ಮಹತ್ವದ್ದು ಎನ್ನಲಾಗುತ್ತದೆ. ಆಗಲೇ ಅವರು ಸಿಎಂ ಸ್ಥಾನದ ಆಕಾಂಕ್ಷಿಯಾಗಿದ್ದರು. ಆದರೆ, ರಾಹುಲ್ ಗಾಂಧಿ ಒತ್ತಾಯದ ಮೇರೆಗೆ ಅಶೋಕ್ ಗೆಹ್ಲೋಟ್‌ಗೆ ಸಿಎಂ ಸ್ಥಾನ ಬಿಟ್ಟುಕೊಡಬೇಕಾಯಿತು. 2020ರಲ್ಲಿ ಅವರು ಬಂಡಾಯ ಕೂಡ ಎದ್ದಿದ್ದರು. ಆಗಲೂ ಕೂಡ ರಾಹುಲ್ ಗಾಂಧಿ ಮಾತಿಗೆ ಕಟ್ಟುಬಿದ್ದು ಸುಮ್ಮನಾಗಿದ್ದರು.

ಈಗ ಅಶೋಕ್ ಗೆಹ್ಲೋಟ್ ಒಂದು ವೇಳೆ ಎಐಸಿಸಿ ಅಧ್ಯಕ್ಷರಾಗಿ ಸಿಎಂ ಸ್ಥಾನ ತ್ಯಜಿಸಬೇಕಾಗಿ ಬಂದರೆ ಸಚಿನ್ ಪೈಲಟ್ ಮುಖ್ಯಮಂತ್ರಿಯಾಗಲು ಪ್ರಯತ್ನಿಸುವುದಿಲ್ಲ ಎನ್ನಲು ಸಾಧ್ಯವಿಲ್ಲ.

ಅಕ್ಟೋಬರ್ 17ರಂದು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ. ಅಶೋಕ್ ಗೆಹ್ಲೋತ್ ಮತ್ತು ಶಶಿ ತರೂರ್ ಅವರು ಸ್ಪರ್ಧೆಯಲ್ಲಿದ್ದಾರೆ.

ಇನ್ನು, ರಾಜಸ್ಥಾನದ 200 ಸದಸ್ಯ ಬಲದ ವಿಧಾನಸಭೆಯಲ್ಲಿ ಕಾಂಗ್ರೆಸ್ 108 ಸ್ಥಾನಗಳನ್ನು ಹೊಂದಿದೆ. ಬಿಜೆಪಿ 70, ಪಕ್ಷೇತರರು 14 ಹಾಗೂ ಇತರ ಪಕ್ಷಗಳ 8 ಸದಸ್ಯರಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಗೆಹ್ಲೋಟ್ ನಿಷ್ಠಾವಂತರು 90ಕ್ಕೂ ಹೆಚ್ಚಿದ್ದಾರೆ. ಗೆಹ್ಲೋಟ್ ಪರವಾಗಿ ಕೆಲ ಪಕ್ಷೇತರರೂ ಇದ್ದಾರೆ. ಸಚಿನ್ ಪೈಲಟ್ ಬೆಂಬಲಿಗರು 15ಕ್ಕಿಂತ ಹೆಚ್ಚು ಇಲ್ಲ ಎನ್ನಲಾಗುತ್ತಿದೆ. ಒಂದು ವೇಳೆ ಪೈಲಟ್ ಮತ್ತೆ ಬಂಡಾಯ ಎದ್ದರೂ ಸರಕಾರವನ್ನು ಪತನಗೊಳಿಸಲು ಸಾಧ್ಯವಿಲ್ಲ. ಅಥವಾ ಗೆಹ್ಲೋಟ್ ಬೆಂಬಲಿಗರು ಬಂಡಾಯ ಎದ್ದರೆ ಸಚಿನ್ ಪೈಲಟ್ ಸರಕಾರ ರಚಿಸಲು ಸಾಧ್ಯವಾಗುವುದಿಲ್ಲ.

(ಒನ್ಇಂಡಿಯಾ ಸುದ್ದಿ)

English summary
More than 90 MLAs, who are from Rajasthan CM Ashok Gehlot's group, are ready to resign if the latter is made to leave CM position.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X