ನ್ಯೂಸ್ ನೇಷನ್ ಸಮೀಕ್ಷೆ : ರಾಜಸ್ಥಾನದಲ್ಲಿ ಮೋದಿಗೇ ಜೈ, ಗಾಂಧಿಗೆ ಬೈ
Recommended Video
2018ರ ಡಿಸೆಂಬರ್ ನಲ್ಲಿ ನಡೆದ ಐದು ರಾಜ್ಯಗಳ ಚುನಾವಣೆಯಲ್ಲಿ, ಹಿಂದಿ ಭಾಷಿಕರು ಹೆಚ್ಚಾಗಿರುವ ರಾಜ್ಯಗಳಾದ ಮಧ್ಯ ಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್ ಗಢದಲ್ಲಿ ಭಾರತೀಯ ಜನತಾ ಪಕ್ಷ ಅಧಿಕಾರ ಕಳೆದುಕೊಂಡರೂ, ರಾಜಸ್ಥಾನದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆ ಇನ್ನೂ ಕುಗ್ಗಿಲ್ಲ.
ಇದು ನ್ಯೂಸ್ ನೇಷನ್ ನಡೆಸಿದ ಸಮೀಕ್ಷೆಯಲ್ಲಿ ಬಹಿರಂಗವಾಗಿದೆ. ಈ ಸಮೀಕ್ಷೆಯ ಪ್ರಕಾರ, ಪ್ರಧಾನಿ ನರೇಂದ್ರ ಮೋದಿ ಅವರು ಶೇ.47ರಷ್ಟು ಮತಗಳನ್ನು ಪಡೆದು, ಈಗಲೂ ಬಹುಜನರ ಆಯ್ಕೆಯ ಪ್ರಧಾನಿ ಅಭ್ಯರ್ಥಿಯಾಗಿದ್ದಾರೆ. ಶೇ.31ರಷ್ಟು ಮಾತ್ರ ಮತ ಪಡೆದಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗಿಂತ ಮೋದಿಯವರು ಸಾಕಷ್ಟು ಮುಂದಿದ್ದಾರೆ.
ರಾಜಸ್ಥಾನದ ಸಮೀಕ್ಷೆ: ಲೋಕಸಭೆ ಸಮರದಲ್ಲಿ ಕೇಸರಿ ಪಡೆಗೆ ಜಯ
ಈ ಬಾರಿ ಪ್ರದಾನಿ ಹುದ್ದೆ ಮಹಾಘಟಬಂಧನ್ ನ ಹಲವು ನಾಯಕರ ಕಣ್ಣಿದ್ದರೂ, ಪೈಪೋಟಿ ಇರುವುದು ಪ್ರಧಾನಿ ನರೇಂದ್ರ ಮೋದಿ ಮತ್ತು ರಾಹುಲ್ ಗಾಂಧಿ ಅವರ ನಡುವೆ ಮಾತ್ರ ಎಂಬುದು ಈ ಸಮೀಕ್ಷೆಯಿಂದ ಸಾಬೀತಾಗಿದೆ. ಶೇ.23ರಷ್ಟು ಜನರು ಮಾತ್ರ ಇವರಿಬ್ಬರಿಗಿಂತ ಬೇರೆಯವರು ಪ್ರಧಾನಿಯಾಗಲಿ ಎಂದು ಅಭಿಮತ ವ್ಯಕ್ತಪಡಿಸಿದ್ದಾರೆ.
ರಾಜಸ್ಥಾನದಲ್ಲಿ ನಡೆಸಿರುವ ಈ ಸಮೀಕ್ಷೆ ಹಲವಾರು ಆಸಕ್ತಿಕರ ಸಂಗತಿಗಳನ್ನು ಹೊರಹಾಕಿದೆ. ಕಳೆದ ಚುನಾವಣೆಗೆ ಹೋಲಿಸಿದರೆ ಭಾರತೀಯ ಜನತಾ ಪಕ್ಷ ಈ ಬಾರಿ ಕಳಪೆ ಪ್ರದರ್ಶನ ತೋರಲಿರುವುದು ಸಮೀಕ್ಷೆಯಿಂದ ಮನದಟ್ಟಾಗಿದೆ. ಆದರೆ, ಸಮಸ್ಯೆಗಳ ಪರಿಹಾರದ ವಿಷಯಕ್ಕೆ ಬಂದಾಗ ಜನರಿಗೆ ಇನ್ನೂ ಬಿಜೆಪಿ ಮೇಲೆಯೇ ಪ್ರೇಮವಿರುವುದು ತಿಳಿದುಬಂದಿದೆ. ಲೋಕಸಭೆ ಚುನಾವಣೆಯಲ್ಲಿ ರಾಜಸ್ಥಾನದಲ್ಲಿ ಬಿಜೆಪಿಯ ಕೈಯೇ ಮೇಲಾಗಲಿದ್ದರೂ, ಕಾಂಗ್ರೆಸ್ ಗೆದ್ದುಬರಲು ಹರಸಾಹಸ ಪಡಬೇಕಿದೆ.
ಬಿಜೆಪಿ ಗೆಲ್ಲರಿರುವ ಸೀಟುಗಳೆಷ್ಟು?
ಇದರ ಜೊತೆ ಬಿಜೆಪಿಗೆ ಸ್ವಲ್ಪ ಕಹಿಯುಣ್ಣಿಸುವಂಥ ಸುದ್ದಿಯನ್ನೂ ಈ ಸಮೀಕ್ಷೆ ನೀಡಿದೆ. ಅದೇನೆಂದರೆ, 2014ರ ಲೋಕಸಭೆ ಚುನಾವಣೆಗೆ ಹೋಲಿಸಿದರೆ ರಾಜಸ್ಥಾನದಲ್ಲಿ ಬಿಜೆಪಿ 9 ಸೀಟುಗಳನ್ನು ಕಡಿಮೆ ಗೆಲ್ಲಲಿದೆ. ಅಂದರೆ, ಹಲವಾರು ಪ್ರಮುಖ ಕ್ಷೇತ್ರಗಳಲ್ಲಿ ಚುನಾವಣೆಯಲ್ಲಿ ಬಿಜೆಪಿ ಸೋಲಲಿದ್ದು, ಕೇವಲ 16 ಸೀಟುಗಳನ್ನು ಮಾತ್ರ ಗೆಲ್ಲಲು ಬಿಜೆಪಿ ಯಶಸ್ವಿಯಾಗಲಿದೆ. ಕಾಂಗ್ರೆಸ್ 9 ಸ್ಥಾನಗಳನ್ನು ಪಡೆಯಲಿದೆ ಎಂದು ಹೇಳಿದ್ದರೆ, ಉಳಿದ ಪಕ್ಷಗಳು ಆಟಕ್ಕುಂಟು ಲೆಕ್ಕಕ್ಕಿಲ್ಲದಂತಾಗಲಿವೆ. ಆದರೆ, ಮತ ಹಂಚಿಕೆಯಲ್ಲಿ, ಬಿಜೆಪಿ ಶೇ.40ರಷ್ಟು ಮತಗಳನ್ನು ಕಬಳಿಸಲಿದ್ದರೆ, ಕಾಂಗ್ರೆಸ್ ಶೇ.35ರಷ್ಟು ಮತಗಳನ್ನು ತನ್ನ ಬುಟ್ಟಿಗೆ ಹಾಕಿಕೊಳ್ಳಲಿದೆ.
ಕಳೆದ ಬಾರಿ ಕಾಂಗ್ರೆಸ್ಸಿಗೆ ಹೀನಾಯ ಸೋಲು
2014ರಲ್ಲಿ ನಡೆದಿದ್ದ ಲೋಕಸಭೆ ಚುನಾವಣೆಯಲ್ಲಿ ಇರುವ 25 ಸೀಟುಗಳಲ್ಲಿ ಭಾರತೀಯ ಜನತಾ ಪಕ್ಷ 24ರಲ್ಲಿ ಗೆದ್ದು ಮೆರೆದಾಡಿತ್ತು. ಕಾಂಗ್ರೆಸ್ ಒಂದೂ ಸೀಟು ಗೆಲ್ಲದೆ ಮೂಲೆಗುಂಪಾಗಿತ್ತು. ಆದರೆ, ಈಬಾರಿ ಮತದಾರರು ಭಾರತೀಯ ಜನತಾ ಪಕ್ಷಕ್ಕೆ ರಾಜಸ್ಥಾನದಲ್ಲಿ ಭಾರೀ ಹೊಡೆತ ನೀಡಲಿದ್ದಾರೆ ಎಂದು ನ್ಯೂಸ್ ನೇಷನ್ ನಡೆಸಿದ ಸಮೀಕ್ಷೆ ತಿಳಿಸಿದೆ. ಬಿಜೆಪಿ ಕಳೆದುಕೊಳ್ಳಲಿರುವ ಎಲ್ಲ 9 ಕ್ಷೇತ್ರಗಳು ಕಾಂಗ್ರೆಸ್ ಪಾಲಾಗಲಿವೆ. ಇದೆಲ್ಲದರ ನಡುವೆ ನರೇಂದ್ರ ಮೋದಿ ಅವರು ಜನಪ್ರಿಯತೆ ಉಳಿಸಿಕೊಂಡಿದ್ದು ಬಿಜೆಪಿ ಪಾಲಿಗೆ ಪಾಲಿಗೆ ಸಿಕ್ಕಿದ್ದು ಪಂಚಾಮೃತದಂತೆ ಆಗಿದೆ.
ಟೈಮ್ಸ್ ನೌ ಸಮೀಕ್ಷೆ : ದಕ್ಷಿಣ ಭಾರತದಲ್ಲಿ ಎನ್ಡಿಎ ವಿರುದ್ಧ ಯುಪಿಎಗೆ ಜಯ
ನಿರುದ್ಯೋಗವೇ ಪ್ರಧಾನ, ಜಿಎಸ್ಟಿ ನಿಧಾನ
ಅಚ್ಚರಿಯಲ್ಲದ ಸಂಗತಿಯೆಂದರೆ, ನಿರುದ್ಯೋಗವೇ ರಾಜಸ್ಥಾನದಲ್ಲಿ ಪ್ರಮುಖ ಚರ್ಚೆಯ ವಿಷಯವಾಗಲಿದೆ. ಶೇ.16ರಷ್ಟು ಜನ ನಿರುದ್ಯೋಗ ತಮ್ಮನ್ನು ಕಾಡುತ್ತಿದೆ, ತಾವು ನಿರುದ್ಯೋಗದಿಂದ ತತ್ತರಿಸಿದ್ದೇವೆ ಎಂದು ಉತ್ತರಿಸಿದ್ದಾರೆ. ಶೇ.15ರಷ್ಟು ಮತದಾರರು ಹಣದುಬ್ಬರ, ಬೆಲೆ ಏರಿಕೆಯಿಂದ ತಾವು ತತ್ತರಿಸಿದ್ದೇವೆ ಎಂದಿದ್ದರೆ, ಶೇ.12ರಷ್ಟು ಜನ ಭ್ರಷ್ಟಾಚಾರ ನಿರ್ಮೂಲನೆಯಾಗಬೇಕು ಎಂದಿದ್ದಾರೆ. ಉಳಿದಂತೆ ಸರಕು ಮತ್ತು ಸೇವಾ ತೆರಿಗೆ (ಜಿ ಎಸ್ ಟಿ) ವಿಷಯಕ್ಕೆ ಶೇ.8ರಷ್ಟು ಮತದಾರರು ಕೆಂಗಣ್ಣು ಬೀರಿದ್ದಾರೆ.
ಸಮಸ್ಯೆಗಳಿಗೆ ಬಿಜೆಪಿಯಿಂದಲೇ ಪರಿಹಾರ
ಈ ಸಮಸ್ಯೆಗಳೇನೇ ಇದ್ದರೂ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲು ಕಂಡಿದ್ದರೂ, ಈ ಮೇಲಿನ ಎಲ್ಲ ಸಮಸ್ಯೆಗಳಿಗೆ ಭಾರತೀಯ ಜನತಾ ಪಕ್ಷವೇ ಸೂಕ್ತ ಪರಿಹಾರ ದೊರಕಿಸಿ ಕೊಡಲಿದೆ ಎಂದು ಇಲ್ಲಿನ ಜನರು ನಂಬಿದ್ದಾರೆ. ಹಾಗೆ ಹೇಳಿದವರು, ಬಿಜೆಪಿ ಮೇಲೆ ಇನ್ನೂ ನಂಬಿಕೆ ಇಟ್ಟವರು ಶೇ.43ರಷ್ಟಿದ್ದಾರೆ. ಆಡಳಿತದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಈ ಸಮಸ್ಯೆಗಳಿಗೆ ಪರಿಹಾರ ನೀಡಬಲ್ಲದು ಎಂದಿರುವವರು ಶೇ.39ರಷ್ಟು ಮಂದಿ. ಜೊತೆಗೆ, ಈಗಿರುವ ಕಾಂಗ್ರೆಸ್ ಪಕ್ಷದ ಆಡಳಿತದಿಂದ ತಮಗೆ ಯಾವುದೇ ತೊಂದರೆಯಿಲ್ಲ ಎಂದವರು ಶೇ.52ರಷ್ಟು ಮಂದಿ. ತಮಗೆ ಈ ಸರಕಾರ ಭರವಸೆ ಮೂಡಿಸಿಲ್ಲ ಅಂದವರು ಶೇ.42ರಷ್ಟು.
ರಾಜಸ್ಥಾನದಲ್ಲಿ ಬಿಜೆಪಿಗೆ ಮುಖಭಂಗ : ಸೋಲಿಗೆ 5 ಕಾರಣಗಳು
ಮೋದಿ ಆಡಳಿತಕ್ಕೆ ಜೈ ಎಂದ ರಾಜಸ್ಥಾನಿಗಳು
ಇನ್ನು ಕೇಂದ್ರದಲ್ಲಿರುವ ಎನ್ಡಿಎ ಆಡಳಿತಕ್ಕೆ ಬಂದರೆ, ಶೇ.49ರಷ್ಟು ಮತದಾರರು ತಾವು ನರೇಂದ್ರ ಮೋದಿ ಅವರ ನೇತೃತ್ವದ ಆಡಳಿತದಿಂದ ಸಂತುಷ್ಟರಾಗಿದ್ದೇವೆ ಎಂದಿದ್ದರೆ, ಶೇ.37ರಷ್ಟು ಮಂದಿ ತಮಗೆ ಕೇಂದ್ರದಲ್ಲಿರುವ ಬಿಜೆಪಿ ಆಡಳಿತ ಅಷ್ಟು ಹಿತಕರವಾಗಿಲ್ಲ ಎಂದು ಅಭಿಮತ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಆಡಳಿತ ಇತ್ತೀಚೆಗೆ ಜಾರಿಗೆ ತಂದಿರುವ ಮೇಲ್ವರ್ಗದ ಜಾತಿಗೆ ಶೇ.10ರಷ್ಟು ಮೀಸಲಾತಿ ನೀಡಿದ್ದು ಬಿಜೆಪಿಗೆ ಸಹಾಯಕವಾಗಲಿದೆಯೆ ಎಂಬ ಪ್ರಶ್ನೆಗೆ ಶೇ.51ರಷ್ಟು ಮಂದಿ ಹೌದು ಎಂದಿದ್ದಾರೆ, ಶೇ.35ರಷ್ಟು ಜನ ಇದರಿಂದ ಬಿಜೆಪಿಗೆ ಲಾಭವಾಗುವುದಿಲ್ಲ ಎಂದು ತಿಳಿಸಿದ್ದಾರೆ.
ಫಸ್ಟ್ ನ್ಯೂಸ್ ಸಮೀಕ್ಷೆ: ಮೋದಿ-ಅತ್ಯಂತ ವಿಶ್ವಾಸಾರ್ಹ ರಾಜಕೀಯ ನಾಯಕ
ರಫೇಲ್ : ರಾಹುಲ್ ಆರೋಪದಲ್ಲಿ ಹುರುಳಿದೆ
ಮತ್ತೊಂದು ಅಚ್ಚರಿಯ ಸಂಗತಿಯೆಂದರೆ, ರಫೇಲ್ ಡೀಲ್ ಗೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಅವರು ನರೇಂದ್ರ ಮೋದಿ ಸರಕಾರದ ಮೇಲೆ ಮಾಡಿರುವ ಆರೋಪದಲ್ಲಿ ಹುರುಳಿದೆ ಎಂದವರು ಶೇ.42ರಷ್ಟು ಮಂದಿ. ಅದರ ಹಿಂದೆಯೆ, ಶೇ.40ರಷ್ಟು ಮಂದಿ ರಾಹುಲ್ ಅವರು ಮೋದಿಯವರ ಮೇಲೆ ಅನಗತ್ಯವಾಗಿ ಆರೋಪಗಳ ಸುರಿಮಳೆ ಸುರಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಶೇ.18ರಷ್ಟು ಜನ ತಮಗೂ ಅದಕ್ಕೂ ಸಂಬಂಧವಿಲ್ಲ ಎಂದು ತಟಸ್ಥರಾಗಿದ್ದಾರೆ. ಇದನ್ನೆಲ್ಲ ನೋಡಿದರೆ, ಲೋಕಸಭೆ ಚುನಾವಣೆಯಲ್ಲಿ ರಫೇಲ್ ಡೀಲ್ ಪ್ರಮುಖ ಸಂಗತಿಯಾಗುವುದರಲ್ಲಿ ಸಂದೇಹವೇ ಇಲ್ಲ.