ರಾಜಸ್ಥಾನದ ಅಲ್ವಾರ್ನಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಿರ್ಭಯಾ ರೀತಿ ಅತ್ಯಾಚಾರ
ಜೈಪುರ ಜನವರಿ 13: ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ 16 ವರ್ಷದ ಬಾಲಕಿಯ ಮೇಲೆ ನಿರ್ಭಯಾ ರೀತಿಯಲ್ಲಿ ಸಾಮೂಹಿಕ ಅತ್ಯಾಚಾರ ನಡೆದಿದೆ. ಆರೋಪಿಯು ಆಕೆಯ ಖಾಸಗಿ ಭಾಗಗಳಲ್ಲಿ ಚೂಪಾದ ವಸ್ತುಗಳನ್ನು ಸೇರಿಸಿ ನಗರದ ಮೇಲ್ಸೇತುವೆಯಿಂದ ಎಸೆದಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಶೇಷ ಸಾಮರ್ಥ್ಯವುಳ್ಳ ಬಾಲಕಿ ಈ ವಾರದ ಆರಂಭದಲ್ಲಿ ಅಲ್ವಾರ್ನ ತಿಜಾರಾ ಮೇಲ್ಸೇತುವೆಯ ಕೆಳಗೆ ರಕ್ತದ ಮಡುವಿನಲ್ಲಿ ಬಿದ್ದಿದ್ದಳು. ಮಂಗಳವಾರ ಸಂತ್ರಸ್ತೆಯನ್ನು ಅಲ್ವಾರ್ನ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ವೈದ್ಯರು ರಕ್ತಸ್ರಾವವನ್ನು ನಿಲ್ಲಿಸಲು ಪ್ರಯತ್ನಿಸಿದರು ಆದರೆ ಸಾಧ್ಯವಾಗಲಿಲ್ಲ. ಆಕೆಯನ್ನು ಬುಧವಾರ ಚಿಕಿತ್ಸೆಗಾಗಿ ಜೈಪುರದ ಜೆಕೆ ಲೋನ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಸುಮಾರು ಎರಡೂವರೆ ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿದ ನಂತರ, ಸಂತ್ರಸ್ತೆಯ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಅಪ್ರಾಪ್ತ ಬಾಲಕಿಯ ದೇಹದ ಭಾಗಗಳಿಗೆ ಚೂಪಾದ ವಸ್ತುಗಳನ್ನು ಸೇರಿಸಲಾಗಿದ್ದು, ಆಕೆಯ ಆಂತರಿಕ ಅಂಗಗಳಿಗೆ ಗಂಭೀರ ಗಾಯಗಳಾಗಿವೆ ಎಂದು ವೈದ್ಯರು ಬಹಿರಂಗಪಡಿಸಿದ್ದಾರೆ. ಮಾಹಿತಿಯ ಪ್ರಕಾರ, ಬಾಲಕಿಯ ಆಂತರಿಕ ಅಂಗಗಳು ಹಾನಿಗೊಳಗಾಗಿದ್ದು, ಪ್ರಸ್ತುತ ಆಕೆ ಜೆಕೆ ಲೋನ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿದ್ದಾಳೆ.
ವೈದ್ಯರು ಬಾಲಕಿಯ ಸ್ಥಿತಿಯನ್ನು ಗಮನಿಸುತ್ತಿದ್ದಾರೆ ಎಂದು ಜೈಪುರದ ಜೆಕೆ ಲೋನ್ ಆಸ್ಪತ್ರೆಯ ಡಾ.ಅರವಿಂದ್ ಶುಕ್ಲಾ ತಿಳಿಸಿದ್ದಾರೆ. ಜೊತೆಗೆ ಆರೋಪಿಗಳನ್ನು ಬಂಧಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. 25 ಕಿಮೀ ವ್ಯಾಪ್ತಿಯಲ್ಲಿ ಅಳವಡಿಸಲಾಗಿರುವ 300ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದೇವೆ. ಆದರೆ ಯಾವುದೇ ಪುರಾವೆಗಳು ಕಂಡುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳನ್ನು ಶೀಘ್ರವೇ ಹಿಡಿಯಲಾಗುವುದು ಎಂದು ರಾಜಸ್ಥಾನದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಮಮತಾ ಭೂಪೇಶ್ ಭರವಸೆ ನೀಡಿದ್ದಾರೆ. ಮಮತಾ ಭೂಪೇಶ್ ಅವರು ಬಾಲಕಿಯ ಕುಟುಂಬಕ್ಕೆ 6 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. 6 ಲಕ್ಷದಲ್ಲಿ 5 ಲಕ್ಷ ರೂ.ಗಳನ್ನು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು 1 ಲಕ್ಷವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ನೀಡಿದೆ. ಸಾಮಾಜಿಕ ನ್ಯಾಯ ಸಚಿವ ಟಿಕಾರಾಂ ಜೂಲಿ ಅಲ್ವಾರ್ನಲ್ಲಿ ಸಂತ್ರಸ್ತೆಯ ಕುಟುಂಬ ಸದಸ್ಯರಿಗೆ 3.5 ಲಕ್ಷ ರೂಪಾಯಿ ಆರ್ಥಿಕ ನೆರವು ಘೋಷಿಸಿದ್ದಾರೆ. ಸಂತ್ರಸ್ತೆಯ ಪೋಷಕರು ಕೂಲಿ ಕೆಲಸ ಮಾಡುತ್ತಿದ್ದು ಆಕೆಗೆ ಸಹೋದರ ಮತ್ತು ಸಹೋದರಿ ಇದ್ದಾರೆ.
ಕಳೆದ ಹತ್ತು ವರ್ಷಗಳ ಹಿಂದೆ ನಿರ್ಭಯಾ ಪ್ರಕರಣ ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿತ್ತು. ಡಿ. 16, 2012 ನಿರ್ಭಯಾ ಅಂದು ತನ್ನ ಭಾವಿ ಪತಿಯೊಂದಿಗೆ ಸಿನಿಮಾಕ್ಕೆ ತೆರಳಿ ಸಂಜೆ ಕತ್ತಲಾಗುವ ಹೊತ್ತಿಗೆ ಮನೆಗೆ ಮರಳುವ ವೇಳೆ ಖಾಸಗಿ ಬಸ್ ನಲ್ಲಿ ಆಕೆಯ ಮೇಲೆ ಅತ್ಯಾಚಾರವಾಗಿತ್ತು. ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾತ್ರವಲ್ಲ, ಮನುಷ್ಯತ್ವಕ್ಕೇ ಅಪಮಾನವಾಗುವಂಥ ರೀತಿಯಲ್ಲಿ ಆ ಯುವತಿಯ ಮೇಲೆ ಅತ್ಯಂತ ಕ್ರೂರವಾಗಿ ಅತ್ಯಾಚಾರ ನಡೆಸಲಾಗಿತ್ತು. ಈ ಸಾಮೂಹಿಕ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣಕ್ಕೆ 7 ವರ್ಷಗಳ ಬಳಿಕ ಕೊನೆಗೂ ನ್ಯಾಯ ಸಿಕ್ಕಿದೆ. ನಾಲ್ವರಿಗೆ ಸುಪ್ರೀಂಕೋರ್ಟ್ ಮರಣದಂಡನೆ ವಿಧಿಸಿತ್ತು. ಈ ಪ್ರಕರಣದ ಅಪರಾಧಿಗಳ ಪೈಕಿ ನಾಲ್ವರನ್ನು ಮಾರ್ಚ್ 20ರಂದು ಬೆಳಗ್ಗೆ 5.30ಕ್ಕೆ ಗಲ್ಲಿಗೇರಿಸಲಾಗಿದೆ.
ಇದಾದ ಬಳಿಕವೂ ಕ್ರೂರ ಅತ್ಯಾಚಾರ ಪ್ರಕರಣಗಳು ನಿಂತಿಲ್ಲ. ನಿರ್ಭಯದಂತೆಯೇ ದೇಶದಲ್ಲಿ ಪ್ರಕರಣಗಳು ಆಗಾಗ ಬೆಳಕಿಗೆ ಬರುತ್ತಲೇ ಇವೆ. ಅಪಾರಾಧಿಗಳಿಗೆ ಗಲ್ಲಿಗೇರಿಸುವಂತ ಶಿಕ್ಷೆಗಳ ನಡುವೆಯೂ ಕಾಮುಕರು ಯಾವುದೇ ಕಾನೂನಿನ ಅಂಜಿಕೆ ಅಳುಕಿಲ್ಲದೇ ಇಂತ ಕ್ರೂರ ಕೃತ್ಯಗಳನ್ನು ಎಸಗುತ್ತಲೇ ಇದ್ದಾರೆ. ಹೀಗಾಗಿ ಮಹಿಳೆಯರ ಮೇಲೆ ಕಣ್ಣಾಕುವ ಕಾಮುಕರಿಗೆ ಕ್ರೂರವಾಗಿ ಶಿಕ್ಷೆಯಾಗಬೇಕು ಎನ್ನುವ ಕೂಗುಗಳು ಕೇಳಿ ಬರುತ್ತಿವೆ.