ಶ್ರಮಿಕ್ ರೈಲಿನಲ್ಲಿ ವಲಸೆ ಕಾರ್ಮಿಕ ಸಾವು: ಮೃತದೇಹದೊಂದಿಗೆ 8 ಗಂಟೆ ಪ್ರಯಾಣ ಮಾಡಿದವರಿಗೆ ಆತಂಕ!
ಜೈಪುರ, ಜೂನ್ 1: ರಾಜಸ್ಥಾನದಿಂದ ಪಶ್ಚಿಮ ಬಂಗಾಳಕ್ಕೆ ಸಂಚರಿಸಿದ ಶ್ರಮಿಕ್ ವಿಶೇಷ ರೈಲಿನಲ್ಲಿ 50 ವರ್ಷ ವಯಸ್ಸಿನ ವಲಸೆ ಕಾರ್ಮಿಕ ಮೃತಪಟ್ಟಿದ್ದು, ಎಂಟು ಗಂಟೆಗಳಿಗೂ ಅಧಿಕ ಕಾಲ ರೈಲಿನಲ್ಲಿದ್ದ ಮೃತದೇಹದೊಂದಿಗೆ ಪ್ರಯಾಣಿಸಿದ ಇತರೆ ಪ್ರಯಾಣಿಕರಲ್ಲಿ ಆತಂಕ ಉಂಟಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ವ್ಯಕ್ತಿಯನ್ನು ಬುದ್ಧ ಪರಿಹಾರ್ ಎಂದು ಗುರುತಿಸಲಾಗಿದೆ. ಮಾಲ್ಡಾ ಜಿಲ್ಲೆಯ ಹರಿಶ್ಚಂದ್ರಪುರ್ ಮೂಲದ ಬುದ್ಧ ಪರಿಹಾರ್, ಕಳೆದ 20 ವರ್ಷಗಳಿಂದ ರಾಜಸ್ಥಾನದ ಬಿಕಾನೆರ್ ನಲ್ಲಿ ಹೋಟೆಲ್ ವೊಂದರಲ್ಲಿ ಕೆಲಸ ಮಾಡುತ್ತಿದ್ದರು.
ರೈಲು ಶೌಚಾಲಯದಲ್ಲಿ ವಲಸೆ ಕಾರ್ಮಿಕನ ಮೃತದೇಹ ಪತ್ತೆ.!
ಮಹಾಮಾರಿ ಕೊರೊನಾ ವೈರಸ್ ತಡೆಗಟ್ಟಲು ಲಾಕ್ ಡೌನ್ ಘೋಷಣೆ ಆದ್ಮೇಲೆ ಬುದ್ಧ ಪರಿಹಾರ್ ಕೆಲಸ ಕಳೆದುಕೊಂಡರು. ಕೈಲಿ ಕಾಸು, ಹೊಟ್ಟೆಗೆ ಆಹಾರವಿಲ್ಲದ ಕಾರಣ ಮೇ 29 ರಂದು ಬುದ್ಧ ಪರಿಹಾರ್ ಶ್ರಮಿಕ್ ಸ್ಪೆಷಲ್ ರೈಲು ಹತ್ತಿದರು.
ಶನಿವಾರ ರಾತ್ರಿ 10 ಗಂಟೆ ಸುಮಾರಿಗೆ ರೈಲಿನಲ್ಲಿ ಬುದ್ಧ ಪರಿಹಾರ್ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಬುದ್ಧ ಪರಿಹಾರ್ ಸಾವಿನಿಂದಾಗಿ ಅದೇ ಕಂಪಾರ್ಟ್ಮೆಂಟ್ ನಲ್ಲಿ ಪ್ರಯಾಣ ಮಾಡುತ್ತಿದ್ದ ಇತರೆ ಪ್ರಯಾಣಿಕರಿಗೆ ಭೀತಿ ಶುರುವಾಗಿದೆ. ಕೋವಿಡ್-19 ನಿಂದಲೇ ಬುದ್ಧ ಪರಿಹಾರ್ ಮೃತಪಟ್ಟಿರಬಹುದು ಎಂಬ ಅನುಮಾನ ಕೂಡ ವ್ಯಕ್ತವಾಗಿದೆ.
'ಶ್ರಮಿಕ'ರ ಮನಕಲಕುವ ಘಟನೆ: ಹಾಲು ತರುವಷ್ಟರಲ್ಲಿ ಕೊನೆಯುಸಿರೆಳೆದ ಕಂದಮ್ಮ
ಭಾನುವಾರ ಬೆಳಗ್ಗೆ 6.40ಕ್ಕೆ ರೈಲು ಮಾಲ್ಡಾ ನಿಲ್ದಾಣಕ್ಕೆ ಬಂದು ತಲುಪುತ್ತಿದ್ದಂತೆಯೇ ರೈಲ್ವೇ ವೈದ್ಯರು ಮತ್ತು ಇತರೆ ಸಿಬ್ಬಂದಿ ಮೃತದೇಹವನ್ನು ಪರಿಶೀಲಿಸಿದ್ದಾರೆ. ಬಳಿಕ ರೈಲ್ವೇ ಪೊಲೀಸರಿಗೆ ಮೃತದೇಹವನ್ನು ಹಸ್ತಾಂತರಿಸಲಾಗಿದೆ.
ಟಿಬಿ ಖಾಯಿಲೆಯಿಂದ ಬಳಲುತ್ತಿದ್ದ ಬುದ್ಧ ಪರಿಹಾರ್, ರೈಲಿನಲ್ಲಿ ಪ್ರಯಾಣ ಮಾಡುತ್ತಿರುವಾಗ ಆರೋಗ್ಯದಲ್ಲಿ ಏರುಪೇರು ಉಂಟಾಗಿ ಸಾವನ್ನಪ್ಪಿದ್ದಾರೆ ಎಂದು ರೈಲ್ವೇ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.