ವಾವ್! ಕ್ವಾರಂಟೈನ್ ಕೇಂದ್ರದಲ್ಲಿ ಸುಮ್ಮನೆ ಕೂರಲಿಲ್ಲ ಈ ಕಾರ್ಮಿಕರು
ಜೈಪುರ್, ಏಪ್ರಿಲ್ 22: ಕೊರೊನಾ ಹಾವಳಿಯಿಂದ ಇಡೀ ದೇಶವೇ ಲಾಕ್ಡೌನ್ ಆಗಿ ಕುಳಿತಿದೆ. ಇಂತಹ ಸಮಯದಲ್ಲಿ ದೊಡ್ಡ ದೊಡ್ಡ ನಗರಗಳಲ್ಲಿನ ವಲಸೆ ಕಾರ್ಮಿಕರ ಬದುಕು ಹೇಳತೀರದಾಗಿದೆ.
ನಗರಗಳಲ್ಲಿ ಇರಲಿಕ್ಕಾಗದೇ ಕಾರ್ಮಿಕರು ಊರಿಗೆ ಹೊರಟರೆ, ಸರ್ಕಾರ ಕೊರೊನಾ ತಡೆಗಟ್ಟುವ ನಿಯಮಾವಳಿಗಳ ಪ್ರಕಾರ ಕಾರ್ಮಿಕರನ್ನು ಕ್ವಾರಂಟೈನ್ ಕೇಂದ್ರಗಳಲ್ಲಿ ಕೂಡಿ ಹಾಕುತ್ತಿದೆ. ಹೀಗಾಗಿ ದೇಶದ ಅನೇಕ ಕಡೆ ಕಾರ್ಮಿಕರು ಕ್ವಾರಂಟೈನ್ ಕೇಂದ್ರಗಳಲ್ಲಿ ಕಾಲ ಕಳೆಯುತ್ತಿದ್ದಾರೆ. ಈ ಸಮಯದಲ್ಲಿ, ಕೆಲ ಕಾರ್ಮಿಕರು ಕ್ವಾರಂಟೈನ್ ಕೇಂದ್ರಗಳಲ್ಲಿ ಅಧಿಕಾರಿಗಳೊಂದಿಗೆ ಜಗಳ ನಡೆಸಿರುವುದು, ನಾಪತ್ತೆಯಾಗಿರುವುದು ನಡೆಯುತ್ತಿದೆ.
ಲಾಕ್ಡೌನ್ ನಿಯಮ ಉಲ್ಲಂಫಿಸಿದ ಜನ: 4 ರಾಜ್ಯಗಳ ಸ್ಥಿತಿ ಗಂಭೀರ
ಆದರೆ, ರಾಜಸ್ತಾನದ ಕ್ವಾರಂಟೈನ್ ಕೇಂದ್ರದಲ್ಲಿದ್ದ ವಲಸೆ ಕಾರ್ಮಿಕರು ಇಡೀ ದೇಶವೇ ಮೆಚ್ಚುವಂತಹ ಕೆಲಸ ಮಾಡಿ ಗಮನ ಸೆಳೆದಿದ್ದಾರೆ. ತಾವು ಉಳಿದುಕೊಂಡಿದ್ದ ಶಾಲೆಯನ್ನು ಬಣ್ಣ ಬಳಿದು ಕಂಗೊಳಿಸುವಂತೆ ಮಾಡಿದ್ದಾರೆ. ಮುಂದೆ ಓದಿ...
ಎರಡು ದಶಕದಿಂದ ಬಣ್ಣ ಕಂಡಿರಲಿಲ್ಲ
ರಾಜಸ್ಥಾನದ ಸೀಕರ್ ಜಿಲ್ಲೆಯ ಪಾಲಸಾನ್ ಎಂಬ ಹಳ್ಳಿಯೊಂದರ ಪ್ರಾಥಮಿಕ ಶಾಲೆಯಲ್ಲಿ ಗುಜರಾತ್, ಮಧ್ಯ ಪ್ರದೇಶದ ಕಾರ್ಮಿಕರನ್ನು ಕ್ವಾರಂಟೈನಲ್ಲಿ ಇಡಲಾಗಿತ್ತು. ಆ ಶಾಲೆ ಎರಡು ದಶಕಗಳಿಂದ ಸುಣ್ಣ ಬಣ್ಣ ಕಾಣದನ್ನು ಮನಗಂಡ ಕಾರ್ಮಿಕರು ಆ ಶಾಲೆಗೆ ಬಣ್ಣ ಹಚ್ಚುವುದಾಗಿ ಆ ಗ್ರಾಮದ ಸರಪಂಚರ ಮುಂದೆ ಪ್ರಸ್ಥಾಪಿಸಿದರು.
ಕಂಗೊಳಿಸುವಂತೆ ಕಾಣುತ್ತಿದೆ ಶಾಲೆ
ಕಾರ್ಮಿಕರ ಬೇಡಿಕೆಗೆ ಸೂಕ್ತವಾಗಿ ಸ್ಪಂದಿಸಿದ ಸರಪಂಚರು, ಬಣ್ಣ ಹಚ್ಚಲು ಬೇಕಾಗುವ ಬ್ರಷ್,ಪೇಂಟ್ ಮುಂತಾದ ಸರಕುಗಳನ್ನು ತಂದು ಕೊಟ್ಟರು. ಕಾರ್ಮಿಕರ ಕ್ವಾರಂಟೈನ ಅವಧಿ ಮುಗಿಯುವುದರಲ್ಲೇ ಶಾಲೆ ಶೃಂಗಾರಗೊಂಡು ಕಂಗೊಳಿಸುತಿತ್ತು.
ಭಾರತ ಲಾಕ್ ಡೌನ್ ನಡುವೆ 'ಗೂಡು' ಬಿಟ್ಟವರ ಗತಿಯೇನು?
ಹಣ ನಿರಾಕರಿಸಿದರು
ಬಣ್ಣ ಹಚ್ಚಿದ್ದಕ್ಕೆ ಹಣ ನೀಡಲು ಸರಪಂಚರು ಮುಂದಾದಾಗ ಕಾರ್ಮಿಕರು, ಈ ಹಳ್ಳಿ ನಮಗೆ ನಿತ್ಯ ಉಚಿತ ಊಟ ವಸತಿ ನೀಡಿದೆ. ನಾವು ಏನಾದರೂ ವಾಪಸ್ಸು ಈ ಹಳ್ಳಿಗೆ ಕೊಡಬೇಕಲ್ಲವೇ? ಎಂದು ಹಣವನ್ನು ನಿರಾಕರಿಸಿದ್ದಾರೆ.
ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ
ಕಾರ್ಮಿಕರ ಈ ಕೆಲಸಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸಂದಿಗ್ದ ಸಮಯದಲ್ಲಿ ಸಕಾರಾತ್ಮಕವಾಗಿ ಯೋಚಿಸುವುದಕ್ಕೆ ಇದಕ್ಕಿಂತ ಮತ್ತೊಂದು ಉದಾಹರಣೆ ಬೇಕಾ ಎಂದು ಮೆಚ್ಚುಗೆ ಸೂಚಿಸಿದ್ದಾರೆ. ಒಟ್ಟಿನಲ್ಲಿ ಕೊರೊನಾ ಲಾಕ್ಡೌನ್ ಸಂಕಟದ ನಡುವೆಯೂ ಕಾರ್ಮಿಕರ ಈ ಕೆಲಸ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.