ಗೆಹ್ಲೋಟ್-ಪೈಲಟ್ ಜಟಾಪಟಿ; ರಾಜಸ್ತಾನ ಸಚಿವ ಪಟ್ಟಿ ಬಂತು ಮಧ್ಯರಾತ್ರಿ
ಜೈಪುರ್, ಡಿಸೆಂಬರ್ 27: ರಾಜಸ್ತಾನ ಸಚಿವರ ಪಟ್ಟಿಯನ್ನು ಕಾಂಗ್ರೆಸ್ ಹೈ ಕಮಾಂಡ್ ಬುಧವಾರ ಮಧ್ಯರಾತ್ರಿ 2.30ಕ್ಕೆ ಬಿಡುಗಡೆ ಮಾಡಿದೆ. ಅದು ಕೂಡ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮಧ್ಯಪ್ರವೇಶಿಸಿದ ನಂತರ ಇದು ಸಾಧ್ಯವಾಗಿದೆ. ಪ್ರಮುಖ ಖಾತೆಗಳಾದ ಗೃಹ ಹಾಗೂ ಹಣಕಾಸು ಇಲಾಖೆಗೆ ಸಂಬಂಧಿಸಿದ ಯಾರಿಗೆ ನೀಡಬೇಕು ಎಂಬ ಬಗ್ಗೆ ಸಿಎಂ ಅಶೋಕ್ ಗೆಹ್ಲೋಟ್ ಹಾಗೂ ಡಿಸಿಎಂ ಸಚಿನ್ ಪೈಲಟ್ ಮಧ್ಯೆ ತಿಕ್ಕಾಟ ನಡೆದಿತ್ತು.
ಹಣಕಾಸು, ಗೃಹ ಖಾತೆ ಸೇರಿ ಒಂಬತ್ತು ಇಲಾಖೆಗಳನ್ನು ಅಶೋಕ್ ಗೆಹ್ಲೋಟ್ ತಮ್ಮ ಸುಪರ್ದಿಯಲ್ಲಿ ಇರಿಸಿಕೊಳ್ಳಲಿದ್ದಾರೆ. ಅಬಕಾರಿ, ಯೋಜನೆ, ಸಾಮಾನ್ಯ ಆಡಳಿತ, ಮಾಹಿತಿ ತಂತ್ರಜ್ಞಾನ ಹೀಗೆ ಗೆಹ್ಲೋಟ್ ತಮ್ಮ ಬಳಿಯಿರಿಸಿಕೊಳ್ಳುವ ಇಲಾಖೆಗಳ ಪಟ್ಟಿ ಬೆಳೆಯುತ್ತದೆ.
ರಾಜಸ್ಥಾನಕ್ಕೆ ಅಶೋಕ್ ಗೆಹ್ಲೋಟ್ ಮುಖ್ಯಮಂತ್ರಿ, ಅಧಿಕೃತ ಘೋಷಣೆ
ಇನ್ನು ಸಚಿನ್ ಪೈಲಟ್ ಬಳಿ ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್, ವಿಜ್ಞಾನ ಮತ್ತು ತಂತ್ರಜ್ಞಾನ, ಸಾಂಖ್ಯಿಕ ಇಲಾಖೆ ಇರಲಿವೆ. ರಾಜಸ್ತಾನದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ ನಂತರ ಗದ್ದುಗೆಗಾಗಿ ಇಬ್ಬರ ಮಧ್ಯ್ ಪೈಪೋಟಿ ಏರ್ಪಟ್ಟಿತ್ತು.
ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ಅಶೋಕ್ ಗೆಹ್ಲೋಟ್ ಅಂತೂ ಸಿಎಂ ಎಂದು ತೀರ್ಮಾನ ಆಯಿತು. ಇದಕ್ಕೂ ಮುನ್ನ ರಾಹುಲ್ ಗಾಂಧಿ ಅವರು ಪೈಲಟ್-ಗೆಹ್ಲೋಟ್ ಜತೆಗೆ ಸುದೀರ್ಘ ಮಾತುಕತೆ ನಡೆಸಿದ್ದರು. ಮುಂದಿನ ಲೋಕಸಭೆ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ಸಚಿವ ಸ್ಥಾನಕ್ಕೆ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ.
ರಾಜಸ್ಥಾನ : ಸಚಿನ್ ಪೈಲಟ್ ಅತ್ಯಂತ ಕಿರಿಯ ವಯಸ್ಸಿನ ಡಿಸಿಎಂ
ಪ್ರಬಲ ಜಾತಿಗಳಿಗೆ ಪ್ರಾತಿನಿಧ್ಯ, ಮೈತ್ರಿ ಪಕ್ಷಕ್ಕೆ ಸ್ಥಾನ ಎಲ್ಲವೂ ಗಮನದಲ್ಲಿ ಇಟ್ಟುಕೊಂಡು ಲೆಕ್ಕಾಚಾರ ನಡೆದಿದೆ. ಮುಖ್ಯಮಂತ್ರಿ ಮತ್ತು ಇತರ ಮೂವರು ಸಚಿವರ ಪ್ರಮಾಣವಚನ ವಾರದ ಹಿಂದೆಯೇ ನಡೆದಿದ್ದರೂ ಖಾತೆ ಹಂಚಿಕೆ ಅಂತಿಮಗೊಳಿಸಲು ಸಾಧ್ಯವಾಗಿರಲಿಲ್ಲ. ಗೆಹ್ಲೋಟ್ ಹಾಗೂ ಪೈಲಟ್ ಮಧ್ಯೆ ಈ ವಿಚಾರವಾಗಿಯೇ ಭಿನ್ನಾಭಿಪ್ರಾಯಗಳು ಇದ್ದುದರಿಂದ ಕೆಲ ದಿನಗಳ ಕಾಲ ಮುಂದಕ್ಕೆ ಹೋಗಿತ್ತು.
ಅಂತೂ ಭಿನ್ನಮತ ಶಮನಗೊಳಿಸುವಲ್ಲಿ ರಾಹುಲ್ ಗಾಂಧಿ ಸಫಲರಾಗಿದ್ದಾರೆ. ಖಾತೆಗಳ ಹಂಚಿಕೆ ಕೂಡ ಅಂತಿಮವಾಗಿದೆ.