ಮತ್ತೆ ಸಂಸತ್ಗೆ ಬರಲಿದ್ದಾರೆ ಮನಮೋಹನ್ ಸಿಂಗ್
ಜೈಪುರ, ಆಗಸ್ಟ್ 13: ಮಾಜಿ ಪ್ರಧಾನಿ, ಆರ್ಥಿಕ ತಜ್ಞ ಮನಮೋಹನ್ ಸಿಂಗ್ ಅವರು ಮತ್ತೆ ಸಂಸತ್ಗೆ ಬರಲಿದ್ದಾರೆ. ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡಿ ಕಳುಹಿಸಲು ಕಾಂಗ್ರೆಸ್ ಪಕ್ಷ ನಿರ್ಧರಿಸಿದೆ.
ಮನಮೋಹನ್ ಸಿಂಗ್ ಅವರು ರಾಜಸ್ಥಾನ ವಿಧಾನಸಭೆಯಿಂದ ರಾಜ್ಯಸಭೆಯ ಒಂದು ಸ್ಥಾನಕ್ಕೆ ಇದೇ ತಿಂಗಳ 26 ಕ್ಕೆ ಉಪಚುನಾವಣೆ ನಡೆಯಲಿದ್ದು, ಅದಕ್ಕಾಗಿ ಇಂದು ಜೈಪುರದಲ್ಲಿ ಮನಮೋಹನ್ ಸಿಂಗ್ ಅವರು ನಾಮಪತ್ರ ಸಲ್ಲಿಸಲಿದ್ದಾರೆ.
ಮನಮೋಹನ್ ಸಿಂಗ್ ಅವರನ್ನು ರಾಜಸ್ಥಾನ ವಿಧಾನಸಭೆಯಿಂದ ರಾಜ್ಯಸಭೆಗೆ ಆಯ್ಕೆ ಮಾಡಿಕಳುಹಿಸುವುದಾಗಿ ನಿರ್ಧರಿಸಲಾಗಿದೆ ಎಂದು ರಾಜಸ್ಥಾನ ಉಪಮುಖ್ಯಮಂತ್ರಿ ಸಚಿನ್ ಪೈಲೆಟ್ ಅವರು ನಿನ್ನೆ ತಿಳಿಸಿದ್ದಾರೆ.
ರಾಜಸ್ಥಾನ ವಿಧಾನಸಭೆಯಿಂದ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆ ಆಗಿದ್ದ ಮದನ್ ಲಾಲ್ ಸೈನಿ ಅವರು ನಿಧನಹೊಂದಿದ ಕಾರಣ ಆ ಸ್ಥಾನ ಖಾಲಿ ಇದ್ದು, ಅದಕ್ಕಾಗಿ ಈಗ ಉಪಚುನಾವಣೆ ನಡೆಯುತ್ತಿದೆ.
ಮನಮೋಹನ್ ಸಿಂಗ್ ಅವರು ಮೂರು ದಶಕಗಳಿಂದ ರಾಜ್ಯಸಭೆ ಎಂಪಿ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಅವರು ಅಸ್ಸಾಂನಿಂದ ರಾಜ್ಯಸಭೆಗೆ ಎಂಪಿ ಆಗಿ ಆಯ್ಕೆ ಆಗುವ ಖಾಯಂ ಅಭ್ಯರ್ಥಿ ಆಗಿದ್ದರು. ಆದರೆ ಈ ಬಾರಿ ಅಸ್ಸಾಂನಲ್ಲಿ ಕಾಂಗ್ರೆಸ್ನ ಶಕ್ತಿ ಕುಂದಿರುವ ಕಾರಣ ಮನಮೋಹನ್ ಸಿಂಗ್ ಅವರನ್ನು ರಾಜ್ಯಸಭೆಗೆ ಕಳುಹಿಸಲು ಆಗಿರಲಿಲ್ಲ.
ರಾಜಸ್ಥಾನದಲ್ಲಿ ಪ್ರಸ್ತುತ ಕಾಂಗ್ರೆಸ್ ಸರ್ಕಾರವಿದ್ದು, ಶಾಸಕರ ಸಂಖ್ಯಾಬಲದ ಪ್ರಕಾರ ಮನಮೋಹನ್ ಸಿಂಗ್ ಅವರು ರಾಜ್ಯಸಭೆ ಸದಸ್ಯರಾಗಿ ಆಯ್ಕೆ ಆಗುವುದು ಖಾಯಂ ಆಗಿದೆ. ಮನಮೋಹನ್ ಸಿಂಗ್ ಅವರು ರಾಜ್ಯಸಭೆಗೆ ಆಯ್ಕೆ ಆದರೆ ಅವರ ಅವಧಿಯು ಏಪ್ರಿಲ್ 03, 2024 ಕ್ಕೆ ಅಂತ್ಯವಾಗಲಿದೆ.
86 ವರ್ಷದ ಮನಮೋಹನ್ ಸಿಂಗ್ ಅವರನ್ನು ಮತ್ತೆ ರಾಜ್ಯಸಭೆಗೆ ಕಳುಹಿಸುವ ನಿರ್ಧಾರ ಹೊಸ ಮಧ್ಯಂತರ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರದ್ದು ಎನ್ನಲಾಗುತ್ತಿದೆ.