'ಲವ್ ಜಿಹಾದ್' ಕೋಮು ವಿಭಜನೆಗಾಗಿ ಬಿಜೆಪಿಯೇ ಸೃಷ್ಟಿಸಿದ ಪದ: ಗೆಹ್ಲೋಟ್
ಜೈಪುರ, ನವೆಂಬರ್ 21: 'ಲವ್ ಜಿಹಾದ್' ಕುರಿತಾದ ವಿವಾದಗಳ ಬಗ್ಗೆ ಹರಿಹಾಯ್ದಿರುವ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ದೇಶವನ್ನು ಕೋಮು ದ್ವೇಷದ ಮಾರ್ಗದಲ್ಲಿ ವಿಭಜಿಸಲು ಈ ಪದವನ್ನು ಬಿಜೆಪಿ ಸೃಷ್ಟಿಸಿದೆ ಎಂದು ಆರೋಪಿಸಿದ್ದಾರೆ. ಅಂತರ್ ಧರ್ಮೀಯ ಒಕ್ಕೂಟಗಳು ಸೇರಿದಂತೆ ಮದುವೆಗಳು ವೈಯಕ್ತಿಕ ಸ್ವಾತಂತ್ರ್ಯದ ವಿಚಾರಗಳಾಗಿವೆ. ಅವುಗಳನ್ನು ಹತ್ತಿಕ್ಕಲು ರೂಪಿಸುವ ಯಾವುದೇ ಕಾನೂನುಗಳು ನ್ಯಾಯಾಲಯದಲ್ಲಿ ನಿಲ್ಲಲಾರವು ಎಂದಿದ್ದಾರೆ.
ಬಿಜೆಪಿ ಆಡಳಿತದ ರಾಜ್ಯಗಳಾದ ಕರ್ನಾಟಕ, ಮಧ್ಯಪ್ರದೇಶ, ಉತ್ತರ ಪ್ರದೇಶ ಮತ್ತು ಹರಿಯಾಣಗಳಲ್ಲಿ 'ಲವ್ ಜಿಹಾದ್' ನಿಯಂತ್ರಿಸಲು ನಿರ್ದಿಷ್ಟ ಕಾನೂನುಗಳನ್ನು ರೂಪಿಸುವುದಾಗಿ ಸರ್ಕಾರಗಳು ಮುಂದಾಗಿರುವುದರ ನಡುವೆ ಅವರು ಈ ಹೇಳಿಕೆ ನೀಡಿದ್ದಾರೆ.
ಲವ್ ಜಿಹಾದ್: ರಾಜ್ಯ ಬಿಜೆಪಿ ಸರ್ಕಾರದ ಮಹತ್ವದ ತೀರ್ಮಾನ!
'ಲವ್ ಜಿಹಾದ್ ಎನ್ನುವುದು ದೇಶವನ್ನು ಬಿಭಜಿಸಲು ಮತ್ತು ಕೋಮು ಸೌಹಾರ್ದತೆಯನ್ನು ಕೆಡಿಸಲು ಬಿಜೆಪಿ ಹುಟ್ಟುಹಾಕಿರುವ ಪದ. ಮದುವೆ ಎನ್ನುವುದು ವೈಯಕ್ತಿಕ ಸ್ವಾತಂತ್ರ್ಯದ ವಿಚಾರ. ಅದನ್ನು ಹತ್ತಿಕ್ಕಲು ಕಾನೂನು ತರುವುದು ಸಂಪೂರ್ಣವಾಗಿ ಅಸಾಂವಿಧಾನಿಕ ಮತ್ತು ಅದು ಯಾವುದೇ ಕಾನೂನಿನ ನ್ಯಾಯಾಲಯದಲ್ಲಿ ನಿಲ್ಲಲಾರದು. ಲವ್ನಲ್ಲಿ ಜಿಹಾದ್ಗೆ ಜಾಗವೇ ಇರುವುದಿಲ್ಲ' ಎಂದು ಗೆಹ್ಲೋಟ್ ಟ್ವಿಟ್ಟರ್ನಲ್ಲಿ ಹೇಳಿದ್ದಾರೆ.
'ಇದು ಕೋಮು ಸಾಮರಸ್ಯವನ್ನು ಕದಡಲು, ಸಾಮಾಜಿಕ ಸಂಘರ್ಷಕ್ಕೆ ಎಣ್ಣೆ ಸುರಿಯುವಂತೆ ಮಾಡಲು ಮತ್ತು ಸರ್ಕಾರವು ಯಾವುದೇ ನೆಲೆಯಲ್ಲಿ ನಾಗರಿಕರ ಮೇಲೆ ತಾರತಮ್ಯ ಮಾಡಬಾರದು ಎಂಬ ಸಾಂವಿಧಾನಿಕ ನಿಯಮಗಳನ್ನು ಉಲ್ಲಂಘಿಸುವ ಸಂಚಿನಂತೆ ಕಾಣುತ್ತದೆ' ಎಂದು ಆರೋಪಿಸಿದ್ದಾರೆ.
ಲವ್ ಜಿಹಾದ್: ಕಾನೂನು ರಚನೆಗೆ ಉ.ಪ್ರದೇಶ ಗೃಹ ಸಚಿವಾಲಯದಿಂದ ಪ್ರಸ್ತಾವನೆ
ಗೆಹ್ಲೋಟ್ ಅವರಿಗೆ ತಿರುಗೇಟು ನೀಡಿರುವ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೆಖಾವತ್, ಲವ್ ಜಿಹಾದ್ ಎನ್ನುವುದು ಒಂದು ಬಲೆಯಂತೆ ಎಂದಿದ್ದಾರೆ. 'ಆತ್ಮೀಯ ಅಶೋಕ್ ಅವರೇ, ಲವ್ ಜಿಹಾದ್ ಒಂದು ಬಲೆಯಾಗಿದ್ದು, ಮದುವೆ ವೈಯಕ್ತಿಕ ವ್ಯವಹಾರ ಎಂದು ನಂಬಿದ ಸಾವಿರಾರು ಯುವ ಮಹಿಳೆಯರು ಬಳಿಕ ಅದು ಹಾಗಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳುತ್ತಾರೆ. ಅದು ವೈಯಕ್ತಿಕ ಸ್ವಾತಂತ್ರ್ಯದ ವಿಚಾರವಾಗಿದ್ದರೆ, ಮಹಿಳೆಗೆ ಏಕೆ ಅವರ ಮೂಲ ಹೆಸರು ಅಥವಾ ಧರ್ಮವನ್ನು ಉಳಿಸಿಕೊಳ್ಳಲು ಬಿಡುವಷ್ಟು ಸ್ವಾತಂತ್ರ್ಯ ನೀಡುತ್ತಿಲ್ಲ?' ಎಂದು ಪ್ರಶ್ನಿಸಿದ್ದಾರೆ.