ಒಲಿಂಪಿಯನ್ ಕ್ರೀಡಾಪಟುಗಳಿಲ್ಲಿ ಚುನಾವಣಾ ಎದುರಾಳಿಗಳು
ಏಪ್ರಿಲ್ 3: ರಾಜಸ್ಥಾನದ ಜೈಪುರ ಗ್ರಾಮಾಂತರ ಲೋಕಸಭೆ ಕ್ಷೇತ್ರ ಸಾಕಷ್ಟು ಕುತೂಹಲ ಕೆರಳಿಸಿದೆ. ಸಾಮಾನ್ಯವಾಗಿ ಎಲ್ಲ ಕಡೆ ರಾಜಕಾರಣಿಗಳ ಚುನಾವಣಾ ಜಿದ್ದಿಜಿದ್ದಿ ಇದ್ದರೆ, ಇಲ್ಲಿ ಮಾಜಿ ಕ್ರೀಡಾಪಟುಗಳ ಪೈಪೋಟಿ ನಡೆಯಲಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಕಾಂಗ್ರೆಸ್ನ ಅಭ್ಯರ್ಥಿಯಾಗಿರುವ ಹಾಲಿ ಶಾಸಕಿ ಕೃಷ್ಣ ಪೂನಿಯಾ ಮತ್ತು ಕೇಂದ್ರ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋರ್ ಜೈಪುರ ಗ್ರಾಮಾಂತರ ಕ್ಷೇತ್ರದಲ್ಲಿ ಪರಸ್ಪರ ಸ್ಪರ್ಧಿಸುತ್ತಿದ್ದಾರೆ. 2004ರ ಅಥೆನ್ಸ್ ಒಲಿಂಪಿಕ್ಸ್ನಲ್ಲಿ ರಾಥೋರ್ ಶೂಟಿಂಗ್ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದಿದ್ದರೆ, 2012ರ ಲಂಡನ್ ಗೇಮ್ಸ್ನಲ್ಲಿ ಕೃಷ್ಣ ಪೂನಿಯಾ ಡಿಸ್ಕಸ್ ಥ್ರೋ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಿದ ಆರನೇ ಸ್ಥಾನ ಪಡೆದುಕೊಂಡಿದ್ದರು.
ಲೋಕಸಭೆ ಚುನಾವಣೆ 2019: ಬಿಜೆಪಿಯ ಮೊದಲ ಪಟ್ಟಿಯಲ್ಲಿ ಅಚ್ಚರಿ
ಬಿಜೆಪಿ ಪ್ರಕಟಿಸಿದ ಮೊದಲ ಪಟ್ಟಿಯಲ್ಲಿ ರಾಥೋರ್ ಅವರ ಹೆಸರಿತ್ತು. ಕೇಂದ್ರ ಸಚಿವರಾಗಿರುವ ರಾಥೋರ್ ಕಣಕ್ಕಿಳಿಯುವುದು ನಿರೀಕ್ಷಿತವಾಗಿತ್ತು. ಆದರೆ, ಕಳೆದ ವರ್ಷವಷ್ಟೇ ವಿಧಾನಸಭೆ ಪ್ರವೇಶಿಸಿರುವ ಕೃಷ್ಣ ಪೂನಿಯಾ ಅವರ ಹೆಸರು ಅಚ್ಚರಿಯ ಆಯ್ಕೆಯಾಗಿದೆ.
'ನನಗೂ ಕೂಡ ಈ ವಿಚಾರ ತಿಳಿದಿದ್ದು ಕಳೆದ ರಾತ್ರಿಯಷ್ಟೇ' ಎಂದು ಕೃಷ್ಣ ಪೂನಿಯಾ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇದು ನನಗೊಂದು ಅವಕಾಶವಾಗಿದೆ ಎಂದು ಸವಾಲನ್ನು ಸ್ವೀಕರಿಸಿರುವುದಾಗಿ ಅವರು ತಿಳಿಸಿದ್ದಾರೆ.
ನಾನು ಎಸಿ ಹಾಲ್ನಲ್ಲಿ ಆಡಿದವಳಲ್ಲ
'ನಾನೊಬ್ಬಳು ರೈತನ ಮಗಳು. ನನಗೆ ಗ್ರಾಮೀಣ ಜನರ ಸಮಸ್ಯೆಗಳು ಅರ್ಥವಾಗುತ್ತದೆ. ಹಳ್ಳಿಗಳಲ್ಲಿ ಯುವಜನರು ಆಡುವ ಕ್ರೀಡೆಯನ್ನು ನಾನು ಆಯ್ದುಕೊಂಡವಳು. ಹವಾ ನಿಯಂತ್ರಿತ ಹಾಲ್ನಲ್ಲಿ ಆಡಿ ಪದಕಗಳನ್ನು ಗೆದ್ದವಳಲ್ಲ' ಎಂದು ತಮ್ಮ ಹೆಸರು ಪ್ರಕಟವಾದ ಬೆನ್ನಲ್ಲೇ ರಾಥೋರ್ ವಿರುದ್ಧ ವಾಗ್ದಾಳಿ ನಡೆಸುವ ಮೂಲಕ ಅಖಾಡಕ್ಕೆ ಇಳಿದಿದ್ದಾರೆ.
ಹಾಲಿ ಶಾಸಕಿ ಕೃಷ್ಣ ಪೂನಿಯಾ
2014ರ ಚುನಾವಣೆ ವೇಳೆ ನರೇಂದ್ರ ಮೋದಿ ಅವರ ಅಲೆ ರಾಥೋರ್ ಗೆಲುವಿಗೆ ನೆರವಾಗಿತ್ತು. 2013ರ ವಿಧಾನಸಭೆ ಚುನಾವಣೆಯಲ್ಲಿ ಪೂನಿಯಾ ಸೋಲು ಅನುಭವಿಸಿದ್ದರು. ಆದರೆ ಈ ಐದು ವರ್ಷಗಳಲ್ಲಿ ಅಲ್ಲಿನ ಚಿತ್ರಣ ಬದಲಾಗಿದೆ. ಪೂನಿಯಾ ಅವರು ಸಾದಲ್ಪುರ ಕ್ಷೇತ್ರದ ಹಾಲಿ ಶಾಸಕಿ. 2018ರ ವಿಧಾನಸಭೆ ಚುನಾವಣೆಯಲ್ಲಿ ಅವರು ಬಿಎಸ್ಪಿ ಶಾಸಕ ಮನೋಜ್ ನ್ಯಾಂಗಲ್ಲಿ ಮತ್ತು ಬಿಜೆಪಿ ಹಿರಿಯ ನಾಯಕ ರಾಮ್ ಸಿಂಗ್ ಕಸ್ವಾನ್ ಅವರನ್ನು ಸೋಲಿಸಿದ್ದರು.
ಒಲಿಂಪಿಯನ್ ಕೃಷ್ಣ ಪೂನಿಯಾಗೆ ಜೈಪುರದ ಟಿಕೆಟ್ ಕೊಟ್ಟ ಕಾಂಗ್ರೆಸ್
ರಾಥೋರ್ಗೆ ಅನುಭವದ ಬಲ
ಒಲಿಂಪಿಕ್ನಲ್ಲಿ ಬೆಳ್ಳಿ ಪದಕದ ಜತೆ ರಾಥೋರ್, ವಿಶ್ವ ಶೂಟಿಂಗ್ ಚಾಂಪಿಯನ್ಶಿಪ್ ಮತ್ತು ಕಾಮನ್ವೆಲ್ತ್ ಗೇಮ್ಸ್ನಲ್ಲಿ ತಲಾ ಎರಡು ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ರಾಜಕಾರಣದಲ್ಲಿ ಈಗಾಗಲೇ ಹೆಸರು ಮಾಡಿದ್ದಾರೆ. ಕಡಿಮೆ ಅವಧಿಯಲ್ಲಿಯೇ ಸಚಿವ ಸ್ಥಾನದ ಅನುಭವ ಗಿಟ್ಟಿಸಿಕೊಂಡಿದ್ದಾರೆ.
ಜಾತಿ ಲೆಕ್ಕಾಚಾರ
ಜೈಪುರ ಗ್ರಾಮೀಣ ಭಾಗದಲ್ಲಿ ಶೇ 23ರಷ್ಟಿರುವ ಜಾಟ್ ಸಮುದಾಯದ ಜನರ ಬೆಂಬಲ ಪೂನಿಯಾ ಅವರಿಗೆ ವರದಾನವಾಗಿದೆ. 2014ರ ಚುನಾವಣೆಯಲ್ಲಿ ಹಿರಿಯ ಕಾಂಗ್ರೆಸ್ಸಿಗ ಸಿಪಿ ಜೋಶಿ ಅವರನ್ನು ಮೂರು ಲಕ್ಷಕ್ಕೂ ಅಧಿಕ ಮತಗಳಿಂದ ರಾಥೋರ್ ಸೋಲಿಸಿದ್ದರು. ಇಲ್ಲಿ ಅವರ ರಜಪೂತ್ ಸಮುದಾಯಕ್ಕೆ ಸೇರಿದ ಶೇ 10ರಷ್ಟು ಜನಸಂಖ್ಯೆ ಇದೆ.