'ಯುಪಿಎ ಸರ್ಜಿಕಲ್ ಸ್ಟ್ರೈಕ್ ಮಾಡಿದ್ದು ಪಾಕ್ಗೂ ಗೊತ್ತಿಲ್ಲ, ಉಗ್ರರಿಗೂ ಗೊತ್ತಿಲ್ಲ'
ಸಿಕಾರ್, ಮೇ 3: ಪಾಕಿಸ್ತಾನದ ಮೇಲೆ ಭಾರತೀಯ ಸೇನೆ ನಡೆಸಿದ ಸರ್ಜಿಕಲ್ ಸ್ಟ್ರೈಕ್ಸ್ ಅನ್ನು ಬಿಜೆಪಿ ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದ ಕಾಂಗ್ರೆಸ್, ಡಾ. ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ಆರು ಬಾರಿ ಸರ್ಜಿಕಲ್ ದಾಳಿಗಳನ್ನು ನಡೆಸಿದ್ದಾಗಿ ಗುರುವಾರ ಪಟ್ಟಿ ಬಿಡುಗಡೆ ಮಾಡಿತ್ತು.
ಯುಪಿಎ ಸರ್ಕಾರದ ಅವಧಿಯಲ್ಲಿ ನಡೆದಿದೆ ಎಂದು ಕಾಂಗ್ರೆಸ್ ಹೇಳಿಕೊಂಡಿರುವ ಆರು ಸರ್ಜಿಕಲ್ ಸ್ಟ್ರೈಕ್ಸ್ ಕುರಿತು ಪ್ರಧಾನಿ ನರೇಂದ್ರ ಮೋದಿ ಅಣಕವಾಡಿದ್ದಾರೆ. ತನ್ನ ಅವಧಿಯಲ್ಲಿಯೂ ಸರ್ಜಿಕಲ್ ಸ್ಟ್ರೈಕ್ಸ್ ನಡೆಸಲಾಗಿತ್ತು ಎಂದು ಸಾಬೀತುಪಡಿಸಲು ಕಾಂಗ್ರೆಸ್ ಶತಪ್ರಯತ್ನ ಮಾಡುತ್ತಿದೆ ಎಂದು ಮೋದಿ ಹೇಳಿದ್ದಾರೆ.
ಯುಪಿಎ ಅವಧಿಯಲ್ಲಿ 6 ಸರ್ಜಿಕಲ್ ಸ್ಟ್ರೈಕ್ ನಡೆಸಿದ ಪಟ್ಟಿ ನೀಡಿದ ಕಾಂಗ್ರೆಸ್
ರಾಜಸ್ಥಾನದ ಸಿಕಾರ್ನಲ್ಲಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಅವರು, ಕಾಂಗ್ರೆಸ್ನ ಹೇಳಿಕೆಯನ್ನು ಲೇವಡಿ ಮಾಡಿದರು.
'ಇದು ಯಾವ ರೀತಿಯ ಸರ್ಜಿಕಲ್ ಸ್ಟ್ರೈಕ್ಸ್? ಅದನ್ನು ಯಾರು ಮಾಡಿದ್ದು ಎನ್ನುವುದು ಉಗ್ರರಿಗೂ ತಿಳಿದಿರುವುದಿಲ್ಲ. ಪಾಕಿಸ್ತಾನ ಅಥವಾ ಆ ದೇಶದ ಜನರಿಗೂ ಅದು ತಿಳಿದಿಲ್ಲ' ಎಂದು ಮೋದಿ ಅಣಕಿಸಿದರು.
ಮಿ ಟೂ ಎನ್ನುತ್ತಿದ್ದಾರೆ
'ಕಾಂಗ್ರೆಸ್ನ ಹಿರಿಯ ನಾಯಕರೊಬ್ಬರು, ಯುಪಿಎ ಆಡಳಿತದಲ್ಲಿ ಹಲವು ಸರ್ಜಿಕಲ್ ಸ್ಟ್ರೈಕ್ಸ್ ನಡೆಸಲಾಗಿತ್ತು ಎಂದು ನಿನ್ನೆ ಪ್ರತಿಪಾದಿಸಿದ್ದಾರೆ. ಅವರು ಮೊದಲು ನಮ್ಮನ್ನು ಅಣಕಿಸಿದರು. ಬಳಿಕ ಪ್ರತಿಭಟಿಸಿದರು. ಈಗ ನಾನೂ ನಾನೂ (ಮಿ ಟೂ ಮಿ ಟೂ) ಎಂದು ಹೇಳುತ್ತಿದ್ದಾರೆ. ತಮ್ಮ ಅವಧಿಯಲ್ಲಿಯೂ ಸರ್ಜಿಕಲ್ ಸ್ಟ್ರೈಕ್ಸ್ ನಡೆದಿತ್ತು ಎಂದು ಸಾಬೀತುಪಡಿಸಲು ಅವರು ಪ್ರಯತ್ನಿಸುತ್ತಿದ್ದಾರೆ. ಅದಕ್ಕೇ ಸರ್ಜಿಕಲ್ ಸ್ಟ್ರೈಕ್ಸ್ ನಡೆಸಿದ ದಿನಾಂಕದೊಂದಿಗೆ ಬಂದಿದ್ದಾರೆ' ಎಂದು ವ್ಯಂಗ್ಯವಾಡಿದರು.
ಎಸಿ ಕೊಠಡಿಯಲ್ಲಿ ಕಾಗದದ ಮೇಲೆ ದಾಳಿ
'ಹವಾ ನಿಯಂತ್ರಿತ ಕೊಠಡಿಗಳಲ್ಲಿ ಕುಳಿತು ಕಾಗದದ ಮೇಲೆ ಕಾಂಗ್ರೆಸ್ ಮಾತ್ರ ಸರ್ಜಿಕಲ್ ಸ್ಟ್ರೈಕ್ಸ್ ನಡೆಸಬಲ್ಲದು. ಮೊದಲು ಅವರು ನಾವು ಮೂರು ಸರ್ಜಿಕಲ್ ಸ್ಟ್ರೈಕ್ಸ್ ನಡೆಸಿದ್ದೆವು ಎಂದಿದ್ದರು. ನಿನ್ನೆ ಹೇಳುತ್ತಿರುವುದು ತಾವು ಆರು ಸರ್ಜಿಕಲ್ ದಾಳಿಗಳನ್ನು ಮಾಡಿದ್ದೇವೆ ಎಂದು. ಇನ್ನು ಕೆಲವು ದಿನಗಳ ಬಳಿಕ ನಾವು ದಿನವೂ ಸರ್ಜಿಕಲ್ ಸ್ಟ್ರೈಕ್ಸ್ ಮಾಡುತ್ತಿದ್ದೆವು ಎಂದು ಹೇಳಿಕೊಳ್ಳುತ್ತಾರೆ' ಎಂದು ಟೀಕಿಸಿದರು.
ಯುಪಿಎ ಅವಧಿಯಲ್ಲಿ ಅನೇಕ ಸರ್ಜಿಕಲ್ ಸ್ಟ್ರೈಕ್ಸ್ ನಡೆದಿದ್ದವು: ಮನಮೋಹನ್ ಸಿಂಗ್
ವಿಡಿಯೋ ಗೇಮ್ ಆಡುತ್ತಿದ್ದವರಿರಬೇಕು
'ಕಾಂಗ್ರೆಸ್ನಲ್ಲಿರುವ ಜನರು ಆ ಕಾಲದಲ್ಲಿ ಬಹುಶಃ ವಿಡಿಯೋ ಗೇಮ್ ಆಡುತ್ತಿದ್ದರು ಎನಿಸುತ್ತದೆ. ಈಗ ಸರ್ಜಿಕಲ್ ಸ್ಟ್ರೈಕ್ಸ್ಅನ್ನೂ ವಿಡಿಯೋ ಗೇಮ್ನಂತೆಯೇ ಅವರು ಕಂಡಿರಬೇಕು. ನಿನ್ನೆ ಕಾಂಗ್ರೆಸ್ನ ಹಿರಿಯ ನಾಯಕರೊಬ್ಬರು (ಮನಮೋಹನ್ ಸಿಂಗ್) ತಮ್ಮ ಕಾಲಾವಧಿಯಲ್ಲಿಯೂ ಸರ್ಜಿಕಲ್ ಸ್ಟ್ರೈಕ್ಸ್ ನಡೆದಿದ್ದವು ಎಂದಿದ್ದಾರೆ. ಈಗ ಕಾಂಗ್ರೆಸ್ ತಾವು ವೈಮಾನಿಕ ದಾಳಿ ನಡೆಸಿದ್ದೇವೆ ಎಂದು ಸಾಬೀತುಪಡಿಸುವ ಸ್ಥಿತಿಯಲ್ಲಿ ಇಲ್ಲ' ಎಂದು ಹೇಳಿದರು.
ಅಗೋಚರ ದಾಳಿ
ಕಾಂಗ್ರೆಸ್ ನೀಡಿದ ಸರ್ಜಿಕಲ್ ದಾಳಿಯ ಪಟ್ಟಿಯನ್ನು ಕೇಂದ್ರ ಸಚಿವ ಅರುಣ್ ಜೇಟ್ಲಿ ಟೀಕಿಸಿದ್ದರು. ಕಾಂಗ್ರೆಸ್ನ ದಾಳಿಗಳು 'ಅಜ್ಞಾತ' ಮತ್ತು 'ಅಗೋಚರ' ಎಂದು ಅವರು ಲೇವಡಿ ಮಾಡಿದ್ದರು. ಕಾಂಗ್ರೆಸ್ ರಾಜತಾಂತ್ರಿಕ ಗೆಲುವನ್ನು ಸಂಭ್ರಮಿಸಲು ಭಯಪಟ್ಟುಕೊಂಡಿತ್ತು. ಅದಕ್ಕಾಗಿ ಈಗ ಸರ್ಜಿಕಲ್ ದಾಳಿ ನಡೆಸಿದ್ದಾಗಿ ಹೇಳಿಕೊಳ್ಳುತ್ತಿದೆ ಎಂದಿದ್ದರು.
ಕಾಂಗ್ರೆಸ್ ನೀಡಿದ ಪಟ್ಟಿ
ಯುಪಿಎ ಅವಧಿಯಲ್ಲಿ ಮೊದಲ ಸರ್ಜಿಕಲ್ ಸ್ಟ್ರೈಕ್ಅನ್ನು 2008ರ ಜೂನ್ 19ರಂದು ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಭಟ್ಟಾಲ್ ಸೆಕ್ಟರ್ನಲ್ಲಿ ನಡೆಸಲಾಗಿತ್ತು. ಎರಡನೆಯ ದಾಳಿಯನ್ನು 2011ರ ಆಗಸ್ಟ್ 30-ಸೆಪ್ಟೆಂಬರ್ 1ರಂದು ಕೇಲ್ನ ನೀಲಂ ನದಿ ಕಣಿವೆಯುದ್ದಕ್ಕೂ ಇರುವ ಶಾರ್ದಾ ಸೆಕ್ಟರ್ನಲ್ಲಿ ಕೈಗೊಳ್ಳಲಾಗಿತ್ತು. ಮೂರನೇ ಸರ್ಜಿಕಲ್ ದಾಳಿಯನ್ನು 2013ರ ಜನವರಿ 6ರಂದು ಸಾವನ್ ಪಾತ್ರಾ ತಪಾಸಣಾ ನೆಲೆಯಲ್ಲಿ ನಡೆಸಲಾಗಿತ್ತು. ನಾಲ್ಕನೆಯ ದಾಳಿ 2013ರ ಜುಲೈ 27-28ರಂದು ನಾಜಾಪಿರ್ ವಲಯದಲ್ಲಿ ನಡೆದಿತ್ತು. ಐದನೆಯದು 2013ರ ಆಗಸ್ಟ್ 6 ಮತ್ತು ಆರನೇ ಸರ್ಜಿಕಲ್ ದಾಳಿಯನ್ನು 2014ರ ಜನವರಿ 14ರಂದು ನಡೆಸಲಾಗಿತ್ತು ಎಂದು ಕಾಂಗ್ರೆಸ್ ವಕ್ತಾರ ರಾಜೀವ್ ಶುಕ್ಲಾ ಹೇಳಿದ್ದರು.