ಜೈಪುರ ಸಾಹಿತ್ಯ ಉತ್ಸವ: ಫೆ. 26ರಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಸಂವಾದ
ಜೈಪುರ, ಫೆಬ್ರವರಿ 25: ಜಗತ್ತಿನ ಅತ್ಯಂತ ಮಹಾನ್ ಸಾಹಿತ್ಯ ಕಾರ್ಯಕ್ರಮ ಎನಿಸಿರುವ ಜೈಪುರ ಸಾಹಿತ್ಯ ಉತ್ಸವ ಹೊಸ ಹೊಳಹುಗಳ ರುಚಿಕರ ಹಬ್ಬ. ಪ್ರತಿ ವರ್ಷ ಜಗತ್ತಿನ ಅನೇಕ ಶ್ರೇಷ್ಠ ಬರಹಗಾರರು, ಮಾನವತಾವಾದಿಗಳು, ರಾಜಕಾರಣಿಗಳು, ಉದ್ಯಮ ನಾಯಕರು ಮತ್ತು ಮನರಂಜನಾ ಲೋಕದ ಖ್ಯಾತರನ್ನು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮೆರೆಸಲು ಮತ್ತು ಚಿಂತನಾರ್ಹ ಮಾತುಕತೆಯಲ್ಲಿ ತೊಡಗಲು ಒಂದು ವೇದಿಕೆಗೆ ಸ್ವಾಗತಿಸಲಾಗುತ್ತದೆ.
ಪ್ರಸಕ್ತ ವರ್ಷ, ಡೈಲಿ ಹಂಟ್ ಮತ್ತು ಒನ್ ಇಂಡಿಯಾಗಳು ಜೈಪುರ ಸಾಹಿತ್ಯ ಉತ್ಸವ 2021ರ ಹೆಮ್ಮೆಯಸ ನೇರ ಪ್ರಸಾರದ ಪಾಲುದಾರ ಹಾಗೂ ಡಿಜಿಟಲ್ ಮಾಧ್ಯಮ ಪಾಲುದಾರರಾಗಿರಲಿವೆ.
ಈ ಮುನ್ನ, ಸಾಮೂಹಿಕ ಹಿಂಸೆಗಳಲ್ಲಿ ಬದುಕುಳಿದವರು, ಹಸಿವಿನಿಂದ ಬಳಲುತ್ತಿರುವವರು, ವಾಸಕ್ಕೆ ಮನೆಯಿಲ್ಲದ ಜನರು ಮತ್ತು ಬೀದಿಮಕ್ಕಳ ಪರ ಕೆಲಸ ಮಾಡುತ್ತಿರುವ ಸಾಮಾಜಿಕ ಕಾರ್ಯಕರ್ತರ ಹಾಗೂ ಭಾರತದ ಲೇಖಕ, ಅಂಕಣಕಾರ, ಸಂಶೋಧಕ ಹರ್ಷ ಮಂದರ್ ಅವರು ತಮ್ಮ 'ಲಾಕಿಂಗ್ ಡೌನ್ ದಿ ಪೂರ್: ದಿ ಪ್ಯಾಂಡೆಮಿಕ್ ಆಂಡ್ ಇಂಡಿಯಾಸ್ ಮಾರೆಲ್ ಸೆಂಟರ್' ಎಂಬ ಇತ್ತೀಚಿನ ಕೃತಿ ಬಗ್ಗೆ ಚರ್ಚೆಯಲ್ಲಿ ಭಾಗವಹಿಸಿದ್ದರು.
ಪ್ರಧಾನ ಅವಧಿಯಾದ ''ದಿ ಟಿರಾನಿ ಆಫ್ ಮೆರಿಟ್: ವಾಟ್ ಈಸ್ ಬಿಕಮ್ ಆಫ್ ದಿ ಕಾಮನ್ ಗುಡ್''ನಲ್ಲಿ ತತ್ವಜ್ಞಾನಿ ಮಿಖಾಯಲ್ ಸಾಂಡೆಲ್ ಅವರು ಬರಹಗಾರ ಮತ್ತು ಸಂಸತ್ ಸದಸ್ಯ ಶಶಿ ತರೂರ್ ಅವರೊಂದಿಗೆ ಅವರ ಹೊಸ ಪುಸ್ತಕ ಹಾಗೂ ನಮ್ಮ ಕಾಲಘಟ್ಟದ ಧ್ರುವೀಕೃತ ರಾಜಕಾರಣದ ಬಗ್ಗೆ ಮಾತುಕತೆ ನಡೆಸಲಿದ್ದಾರೆ. ಯಶಸ್ಸು ಮತ್ತು ವೈಫಲ್ಯದ ಕುರಿತಾದ ನಮ್ಮ ವ್ಯಾಖ್ಯಾನಗಳನ್ನು ಮರುಆಲೋಚನೆಗೆ ಒಳಪಡಿಸುವ, ಜಾಗತೀಕರಣ ಹಾಗೂ ಹೆಚ್ಚುತ್ತಿರುವ ಅಸಮಾನತೆಯನ್ನು ಕೇಂದ್ರವಾಗಿರಿಸಿಕೊಂಡು ಸಾಂಡೆಲ್ ಸಂವಾದ ನಡೆಸಲಿದ್ದಾರೆ.
ಹೊಸ ರಾಜಕೀಯದೆಡೆಗೆ ಬೊಟ್ಟು ಮಾಡುವ ಘನತೆಯ ನೈತಿಕತೆ ಮತ್ತು ಸಹಾನುಭೂತಿಯ ವಿಚಾರವನ್ನು ಮುಂದಿಟ್ಟುಕೊಂಡು ವಿಚಾರ ಪ್ರಚೋದನಾ ಮಾತುಗಾರಿಕೆಯ ಕುರಿತು ವಿಸ್ತೃತ ಚರ್ಚೆ ನಡೆಸಲಿದ್ದಾರೆ.
ನಂತರದ ಅವಧಿಯಲ್ಲಿ ಸಿಒಪಿ26 ಹವಾಮಾನ ಸಮ್ಮೇಳನದ ಅಧ್ಯಕ್ಷ ಅಲೋಕ್ ಶರ್ಮಾ ಅವರೊಂದಿಗೆ ಬಿಲ್ ಗೇಟ್ಸ್ ಮಾತುಕತೆ ನಡೆಸಲಿದ್ದಾರೆ. ಹವಾಮಾನ ಬದಲಾವಣೆ ಕುರಿತಾದ ತಮ್ಮ ಇತ್ತೀಚಿನ ಪುಸ್ತಕದ ಮೇಲೆ ಬಿಲ್ ಗೇಟ್ಸ್ ಅವರು, ಪರಿಸರ ಮಹಾದುರಂತವನ್ನು ತಪ್ಪಿಸಲು ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ತಗ್ಗಿಸುವ ವಿಶಾಲವಾದ ಹಾಗೂ ಸಾಧ್ಯವಾದ ಯೋಜನೆ ಬಗ್ಗೆ ಮಾತನಾಡಲಿದ್ದಾರೆ. ಲೋಕೋಪಕಾರಿ ಮತ್ತು ಉದ್ಯಮಿಯಾಗಿ ಗುರುತಿಸಿಕೊಂಡಿರುವ ಬಿಲ್ ಗೇಟ್ಸ್, ಹವಾಮಾನ ವೈಪರೀತ್ಯಕ್ಕೆ ಕಾರಣಗಳು ಹಾಗೂ ಪರಿಸರ ವಿನಾಶವನ್ನು ಯಾವ ರೀತಿ ತಡೆಯಬಹುದು ಎಂಬ ಬಗ್ಗೆ ಆಳವಾದ ಚಿಂತನೆ ಮಂಡಿಸಲಿದ್ದಾರೆ.
ಜೈಪುರ ಸಾಹಿತ್ಯ ಉತ್ಸವದ (ಜೆಎಲ್ಎಫ್) 14ನೇ ಆವೃತ್ತಿಯು ಆನ್ಲೈನ್ ಸ್ವರೂಪದ ನೀತಿಯನ್ನು ಪಾಲಿಸುತ್ತಿದೆ. ಈ ಉತ್ಸವವು ಫೆ. 19ರಂದು ವರ್ಚ್ಯುವಲ್ ಅವತಾರವನ್ನು ಪಡೆದುಕೊಂಡು, ಫೆ. 21ರಂದು ಮುಕ್ತಾಯಗೊಂಡಿತ್ತು. ಈಗ ಮತ್ತೆ ಫೆ. 26ರಂದು ಪ್ರಾರಂಭವಾಗಿ ಫೆ. 28ರವರೆಗೆ ನಡೆಯಲಿದೆ.