ಇಬ್ಬರ ನಡುವಿನ ಕಿತ್ತಾಟದಲ್ಲಿ 113 ಪುಟ್ಟ ಕಂದಮ್ಮಗಳು ಸಾವು
ಜೈಪುರ್,ಜನವರಿ.07: ಗಂಡ-ಹೆಂಡತಿ ಜಗಳದಲ್ಲಿ ಕೂಸು ಬಡವಾಯಿತು ಎಂಬ ಮಾತನ್ನು ಕೇಳಿದ್ದೀರಿ ಅಲ್ಲವೇ. ರಾಜಸ್ಥಾನದಲ್ಲಿ ನಡೆದ ಪ್ರಕರಣವು ಈ ಗಾದೆ ಮಾತಿಗೆ ಹೇಳಿ ಮಾಡಿಸಿದಂತಿದೆ. ಇಬ್ಬರು ಅಧಿಕಾರಿಗಳ ನಡುವಿನ ಕಿತ್ತಾಟಕ್ಕೆ 113 ಹಸುಗೂಸುಗಳು ಪ್ರಾಣ ಬಿಟ್ಟಿವೆ.
ಅಚ್ಚರಿ ಎನಿಸಿದರೂ ಇದು ಸತ್ಯ ಘಟನೆ. ರಾಜಸ್ಥಾನದ ಕೋಟಾದಲ್ಲಿರುವ ಜೆ.ಕೆ.ಲೋನ ಜಿಲ್ಲಾಸ್ಪತ್ರೆಯಲ್ಲಿ ಹಸುಗೂಸುಗಳ ಸಾವಿನ ಸರಣಿ ಮುಂದುವರಿದಿದೆ. ಕಳೆದ 35 ದಿನಗಳಲ್ಲಿ ಆಸ್ಪತ್ರೆಯಲ್ಲಿ 113ಕ್ಕೂ ಹೆಚ್ಚು ಮಕ್ಕಳು ಪ್ರಾಣ ಬಿಟ್ಟಿವೆ ಎಂದು ವರದಿಯಾಗಿದೆ.
48 ಗಂಟೆ, 8 ಶಿಶುಗಳ ಸಾವು: ಸಿಎಂಗೆ ಪತ್ರ ಬರೆದ ಕೇಂದ್ರ ಸಚಿವರು
ಈ ಹಿಂದೆ ದೇಶಾದ್ಯಂತ ಸದ್ದು ಮಾಡಿದ್ದ ರಾಜಸ್ಥಾನದ ಜಿಲ್ಲಾಸ್ಪತ್ರೆಯಲ್ಲಿ ನಡೆದ ಮಕ್ಕಳ ಸಾವಿನ ಪ್ರಕರಣದ ಅಸಲಿ ಕಾರಣ ಇತ್ತೀಚಿಗೆ ಹೊರ ಬರುತ್ತಿದೆ. ಇಬ್ಬರು ಅಧಿಕಾರಿಗಳ ವೈಮನಸ್ಸು ಆಸ್ಪತ್ರೆಯ ದುಸ್ಥಿತಿಗೆ ಕಾರಣ ಎಂಬುದು ಇದೀಗ ಬೆಳಕಿಗೆ ಬಂದಿದೆ.
ಇಬ್ಬರ ನಡುವಿನ ಪ್ರತಿಷ್ಠೆಯ ಕಿತ್ತಾಟದಿಂದ ಜಿಲ್ಲಾಸ್ಪತ್ರೆಗೆ ದುಸ್ಥಿತಿ
ಜೆ.ಕೆ.ಲೋನ ಜಿಲ್ಲಾಸ್ಪತ್ರೆ ಸಿಬ್ಬಂದಿ ಪ್ರಕಾರ ಇಬ್ಬರು ಹಿರಿಯ ಅಧಿಕಾರಿಗಳ ನಡುವಿನ ವೈಮನಸ್ಸಿನಿಂದಲೇ ಆಸ್ಪತ್ರೆಗೆ ಈ ದುಸ್ಥಿತಿ ಬಂದಿದೆ ಎಂದು ಹೇಳಲಾಗುತ್ತಿದೆ. ಆಸ್ಪತ್ರೆಯ ಮಾಜಿ ವ್ಯವಸ್ಥಾಪಕರಾದ ಹೆಚ್.ಎಲ್.ಮೀನಾ ಹಾಗೂ ಶಿಶು ವೈದ್ಯಕೀಯ ವಿಭಾಗದ ಮುಖ್ಯಸ್ಥ ಅಮೃತ್ ಲಾಲ್ ಬೈರ್ವಾ ನಡುವಿನ ಕಿತ್ತಾಟದಿಂದಲೇ ಇಷ್ಟೆಲ್ಲ ಅವಾಂತರಗಳು ನಡೆಯುತ್ತಿವೆ ಎಂದು ಆಸ್ಪತ್ರೆಯ ಸಿಬ್ಬಂದಿಯೇ ಆರೋಪಿಸಿದ್ದಾರೆ.
ಜಿಲ್ಲಾ ಆಸ್ಪತ್ರೆಗೆ ಬಂದ ಪುಟ್ಟ, ಹೋದ ಪುಟ್ಟ
100ಕ್ಕೂ ಹೆಚ್ಚು ಮಕ್ಕಳ ಸಾವಿನ ಹಿನ್ನೆಲೆಯಲ್ಲಿ ಇತ್ತೀಚಿಗಷ್ಟೇ ಅಮಾನತುಗೊಂಡ ಹೆಚ್ಒಡಿ ಅಮೃತ್ ಲಾಲ್ ಬೈರ್ವಾ, ಆಸ್ಪತ್ರೆಗೆ ಅತಿಥಿಗಳಂತೆ ಬಂದು ಹೋಗುತ್ತಿದ್ದರು ಎಂದು ಆರೋಪಿಸಲಾಗುತ್ತಿದೆ. ಆಗೊಮ್ಮೆ, ಈಗೊಮ್ಮೆ ಆಸ್ಪತ್ರೆಗೆ ಬರುತ್ತಿದ್ದ ವಿಭಾಗದ ಮುಖ್ಯಸ್ಥರು, ಅವ್ಯವಸ್ಥೆಗಳನ್ನು ಸರಿಪಡಿಸುವ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಇನ್ನು, ವ್ಯವಸ್ಥಾಪಕರಾಗಿದ್ದ ಮೀನಾ ವಾರ್ಡ್ ಗಳಿಂದ ಅಂತರ ಕಾಯ್ದುಕೊಂಡಿದ್ದು, ಹಿರಿಯ ವೈದ್ಯರೆಲ್ಲ ರೋಗಿಗಳಿಗೆ ಚಿಕಿತ್ಸೆ ನೀಡುವುದಕ್ಕೇ ಹಿಂದೇಟು ಹಾಕುತ್ತಿದ್ದರು ಎನ್ನಲಾಗುತ್ತಿದೆ.
ತರಬೇತಿಗೆ ಬಂದವರಿಗೆ ಮೊಬೈಲೇ ಪರಪಂಚ
ಯಥಾರಾಜ, ತಥಾಪ್ರಜೆ ಅನ್ನುತ್ತಾರಲ್ಲವೇ, ಇಲ್ಲಿ ತರಬೇತಿಗೆ ಬಂದಿರುವ ವೈದ್ಯರು ಕೂಡಾ ಹಾಗೆ ವರ್ತಿಸುತ್ತಿದ್ದರು ಎನ್ನಲಾಗಿದೆ. ಹಿರಿಯ ಅಧಿಕಾರಿಗಳು ರೋಗಿಗಳಿಗೆ ಚಿಕಿತ್ಸೆ ನೀಡುವಂತೆ ಟ್ರೈನಿಗಳಿಗೆ ಸೂಚನೆ ನೀಡುತ್ತಿದ್ದರು. ಆದರೆ, ರೋಗಿಗಳಿಗೆ ಚಿಕಿತ್ಸೆ ನೀಡುವ ಬದಲು ಟ್ರೈನಿಗಳು ಸದಾ ಮೊಬೈಲ್ ನಲ್ಲೇ ಮುಳುಗಿರುತ್ತಿದ್ದರು ಎನ್ನಲಾಗಿದೆ.
ಸೋರುತಿರಲು ಮಾಳಿಗೆ, ನರಳುತಿಹೆ ರೋಗಿ
ಹೇಳಿಕೊಳ್ಳುವುದಕ್ಕೆ ಜಿಲ್ಲೆಯ ಅತಿದೊಡ್ಡ ಆಸ್ಪತ್ರೆ. ಆದರೆ, ಇಲ್ಲಿರುವ ಅವ್ಯವಸ್ಥೆಗಳು ಅಷ್ಟಿಷ್ಟಲ್ಲ. ಇತ್ತೀಚಿಗೆ ಸುರಿದ ಮಳೆಗೆ ಮಕ್ಕಳ ತುರ್ತು ನಿಗಾ ಘಟಕದ ಮಾಳಿಗೆಯೇ ಸೋರುತ್ತಿದೆ. ಮೇಲ್ಚಾವಣಿಯಲ್ಲಿ ನೀರು ನಿಂತಿದ್ದು, ಅದನ್ನು ತಡೆಯಲ್ಲಿ ಮಾಳಿಗೆಯಲ್ಲಿ ಬಟ್ಟೆಯಿಂದ ಮುಚ್ಚಲಾಗುತ್ತಿದೆ.