ತೆಲಂಗಾಣ ಎನ್ಕೌಂಟರ್ ಬಗ್ಗೆ ಸುಪ್ರೀಂಕೋರ್ಟ್ ಸಿಜೆಐ ಹೇಳಿದ್ದೇನು?
ಜೈಪುರ, ಡಿಸೆಂಬರ್ 7: ನ್ಯಾಯವನ್ನು ತಕ್ಷಣವೇ ನೀಡಲು ಸಾಧ್ಯವಿಲ್ಲ. ಒಂದು ವೇಳೆ ನ್ಯಾಯವು ದ್ವೇಷ ಸಾಧನೆಗೆ ಬಳಕೆಯಾದರೆ ಅದು ತನ್ನ ಮೂಲ ಗುಣವನ್ನೇ ಕಳೆದುಕೊಳ್ಳುತ್ತದೆ ಎಂದು ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಶರದ್ ಅರವಿಂದ್ ಬೊಬ್ಡೆ ಹೇಳಿದರು.
ರಾಜಸ್ಥಾನದ ಜೋಧಪುರದಲ್ಲಿ ಶನಿವಾರ ರಾಜಸ್ಥಾನ ಹೈಕೋರ್ಟ್ನ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು. ಅವರ ಈ ಹೇಳಿಕೆ ತೆಲಂಗಾಣದಲ್ಲಿ ಅತ್ಯಾಚಾರ ಪ್ರಕರಣದ ನಾಲ್ವರು ಆರೋಪಿಗಳನ್ನು ಎನ್ಕೌಂಟರ್ ಮಾಡಿದ ಘಟನೆಯ ಹಿನ್ನೆಲೆಯಲ್ಲಿಯೇ ಬಂದಿದೆ ಎನ್ನಲಾಗಿದೆ. ಆದರೆ ಅವರು ತಮ್ಮ ಭಾಷಣದಲ್ಲಿ ತೆಲಂಗಾಣದ ಎನ್ಕೌಂಟರ್ ಘಟನೆಯನ್ನು ನೇರವಾಗಿ ಎಲ್ಲಿಯೂ ಉಲ್ಲೇಖಿಸಲಿಲ್ಲ.
ಮುಖ್ಯನ್ಯಾಯಮೂರ್ತಿಯಾಗಲಿರುವ ಶರದ್ ಅರವಿಂದ್ ಬೊಬ್ಡೆ ವ್ಯಕ್ತಿಚಿತ್ರ
'ನ್ಯಾಯ ಎಂದಿಗೂ ದ್ವೇಷವಾಗಬಾರದು. ಒಂದು ವೇಳೆ ನ್ಯಾಯವನ್ನು ದ್ವೇಷದ ರೂಪದಲ್ಲಿ ಪಡೆದುಕೊಳ್ಳಲು ಸಾಧ್ಯವಿಲ್ಲ. ನ್ಯಾಯವು ದ್ವೇಷವಾಗಿ ಬಿಟ್ಟರೆ ಅದು ತನ್ನ ಗುಣವನ್ನು ಕಳೆದುಕೊಳ್ಳುತ್ತದೆ. ನ್ಯಾಯಾಂಗವು ತನ್ನೊಳಗೆ ಸ್ವಯಂ ತಿದ್ದುಪಡಿ ಕ್ರಮವನ್ನು ಅಳವಡಿಸಿಕೊಳ್ಳಬೇಕು. ಆದರೆ ಅದು ಬಹಿರಂಗವಾಗಬೇಕೇ ಅಥವಾ ಬೇಡವೇ ಎನ್ನುವುದು ಚರ್ಚೆಗೆ ಒಳಪಡಬೇಕಾದ ವಿಷಯ' ಎಂದು ಬೊಬ್ಡೆ ಹೇಳಿದರು.
ಮಧ್ಯಸ್ಥಿಕೆ ಕಡ್ಡಾಯವಾಗಬೇಕು
ದಾವೆಗಳ ವಿಚಾರಣೆಯನ್ನು ಚುರುಕುಗೊಳಿಸುವುದಕ್ಕೆ ಮಾತ್ರವಲ್ಲ, ಅದನ್ನು ಉಳಿಸಿಕೊಳ್ಳುವುದಕ್ಕೂ ನಾವು ನ್ಯಾಯದಾನ ಮಾದರಿಯನ್ನು ರೂಪಿಸಬೇಕು. ದಾವೆ ಪೂರ್ವ ಮಧ್ಯಸ್ಥಿಕೆಯನ್ನು ಒದಗಿಸುವ ಕಾನೂನುಗಳೂ ಇವೆ. ಮೊಕದ್ದಮೆಗಳ ವಿಚಾರಣೆಯನ್ನು ತ್ವರಿತಗತಿಯಲ್ಲಿ ನಡೆಸಲು ದಾವೆ ಪೂರ್ವ ಮಧ್ಯಸ್ಥಿಕೆಯನ್ನು ಕಡ್ಡಾಯಗೊಳಿಸಬೇಕಾದ ಅಗತ್ಯವಿದೆ ಎಂದರು.
ಸ್ವಯಂ ತಿದ್ದುಪಡಿಯ ಕ್ರಮ
ಕಳೆದ ವರ್ಷ ಸುಪ್ರೀಂಕೋರ್ಟ್ನ ನಾಲ್ವರು ಹಿರಿಯ ಮುಖ್ಯ ನ್ಯಾಯಮೂರ್ತಿಗಳು ಸುದ್ದಿಗೋಷ್ಠಿ ನಡೆಸಿದ ಘಟನೆಯನ್ನು ಸ್ವಯಂ ತಿದ್ದುಪಡಿಯ ಕ್ರಮ ಎಂದು ಅವರು ವ್ಯಾಖ್ಯಾನಿಸಿದರು. 'ನ್ಯಾಯಾಂಗ ವ್ಯವಸ್ಥೆಯು ತನ್ನನ್ನು ತಾನು ಸರಿಪಡಿಸಿಕೊಳ್ಳಬೇಕು. ಅತ್ಯಂತ ಟೀಕೆಗೆ ಒಳಗಾದ ಸುದ್ದಿಗೋಷ್ಠಿ ನಡೆಸಿದ ಸಮಯದಲ್ಲಿ ಅದು ಆ ಕೆಲಸವನ್ನು ಮಾಡಿತ್ತು. ಅದು ಸ್ವಯಂ ತಿದ್ದುಪಡಿಯ ಕ್ರಮವಲ್ಲದೆ ಬೇರೇನೂ ಅಲ್ಲ. ಅದನ್ನು ನಾನು ಸಮರ್ಥಿಸಿಕೊಳ್ಳಲು ಬಯಸುವುದಿಲ್ಲ' ಎಂದು ಹೇಳಿದರು.
ಮರುಪರಿಶೀಲನೆ ಅಗತ್ಯವಿದೆ
ದೇಶದಲ್ಲಿ ನಡೆದ ಇತ್ತೀಚಿನ ಘಟನೆಗಳು ಹಳೆಯ ಚರ್ಚೆಯನ್ನು ಹೊಸ ಚರ್ಚೆಯಿಂದ ಮುಚ್ಚಿಹಾಕಿವೆ. ಅಪರಾಧ ನ್ಯಾಯವು ಒಂದು ಕ್ರಿಮಿನಲ್ ಪ್ರಕರಣದ ವಿಚಾರಣೆ ಪೂರ್ಣಗೊಳಿಸಲು ತೆಗೆದುಕೊಳ್ಳುತ್ತಿದ್ದ ಸಮಯದ ಕುರಿತಾದ ಮನೋಭಾವ ಮತ್ತು ಅದರ ಸ್ಥಾನಮಾನವನ್ನು ಮರುಪರಿಶೀಲನೆ ಮಾಡಬೇಕಾದ ಅಗತ್ಯವಿದೆ ಎಂದರು.
ಎನ್ಕೌಂಟರ್ Vs ನ್ಯಾಯಾಂಗ ವ್ಯವಸ್ಥೆ
ತೆಲಂಗಾಣದಲ್ಲಿ ಪಶುವೈದ್ಯೆ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದ ಆರೋಪಿಗಳು ನ್ಯಾಯಾಲಯದ ವಿಚಾರಣೆಗೆ ಒಳಪಡುವ ಮುನ್ನವೇ ಪೊಲೀಸರ ಗುಂಡಿಗೆ ಬಲಿಯಾಗಿದ್ದಾರೆ. ಪೊಲೀಸರ ಈ ಕ್ರಮಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಹಾಗೆಯೇ ಒಂದು ವರ್ಗದ ಜನರು ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನ್ಯಾಯಾಂಗ ವ್ಯವಸ್ಥೆಯಲ್ಲಿ ತೀರ್ಮಾನವಾಗಬೇಕಾದ ಪ್ರಕರಣವನ್ನು ಪೊಲೀಸರೇ ಅಂತ್ಯಗೊಳಿಸುವುದು ಅಪಾಯಕಾರಿ ಎಂದು ಅಭಿಪ್ರಾಯಪಟ್ಟಿದ್ದಾರೆ.