ಜೋಧ್ಪುರ ಹಿಂಸಾಚಾರ: 97 ಜನ ಅರೆಸ್ಟ್- ಬಿಗಿಪೊಲೀಸ್ ಬಂದೋಬಸ್ತ್
ಜೋಧಪುರ ಮೇ 04: ಈದ್ ಸಂದರ್ಭದಲ್ಲಿ ರಾಜಸ್ಥಾನದ ಜೋಧ್ಪುರದಲ್ಲಿ ಎರಡು ಗುಂಪುಗಳು ಘರ್ಷಣೆಯಾದ ನಂತರ ಪರಿಸ್ಥಿತಿ ಸಾಕಷ್ಟು ಉದ್ವಿಗ್ನವಾಗಿದೆ. ಘಟನೆಯ ನಂತರ ಬಿಗಿ ಪೊಲೀಸ್ ಬಂದೋಬಸ್ತ್ ಆಯೋಜಿಸಲಾಗಿದ್ದು, ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ. ಈ ಸಂಪೂರ್ಣ ಪ್ರಕರಣದಲ್ಲಿ ಮಂಗಳವಾರ 97 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಕರ್ಫ್ಯೂ ವಿಧಿಸಲಾಗಿದ್ದು, ಉನ್ನತ ಮತ್ತು ಹಿರಿಯ ಅಧಿಕಾರಿಗಳನ್ನು ಇಲ್ಲಿ ನಿಯೋಜಿಸಲಾಗಿದೆ. ಜಿಲ್ಲೆಯ ಪ್ರತಿಯೊಂದು ಸಣ್ಣ ಘಟನೆಗಳ ಮೇಲೆ ನಿಗಾ ಇರಿಸಲಾಗಿದೆ ಎಂದು ಎಡಿಜಿ ಕಾನೂನು ಮತ್ತು ಸುವ್ಯವಸ್ಥೆ ಹವಾ ಸಿಂಗ್ ಘುಮಾರಿಯಾ ತಿಳಿಸಿದ್ದಾರೆ.
ಘಟನೆಯ ಬಗ್ಗೆ ರಾಜಸ್ಥಾನ ಬಿಜೆಪಿ ಅಧ್ಯಕ್ಷ ಸತೀಶ್ ಪುನಿಯಾ ಅವರು ರಾಜ್ಯಪಾಲ ಕಲ್ರಾಜ್ ಮಿಶ್ರಾ ಅವರಿಗೆ ಮನವಿ ಸಲ್ಲಿಸಿದ್ದಾರೆ. ಮನವಿ ಪತ್ರದಲ್ಲಿ ಜೋಧ್ಪುರದಲ್ಲಿ ನಡೆದ ಘರ್ಷಣೆಯ ಸಂಪೂರ್ಣ ಪ್ರಕರಣದ ತನಿಖೆಯನ್ನು ಪ್ರಾರಂಭಿಸಲು ಮತ್ತು ರಾಜ್ಯ ಸರ್ಕಾರಕ್ಕೆ ಅಗತ್ಯ ನಿರ್ದೇಶನಗಳನ್ನು ನೀಡುವಂತೆ ವಿನಂತಿಸಲಾಗಿದೆ. ಇದರಿಂದಾಗಿ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಜೊತೆಗೆ ರಾಜ್ಯದಲ್ಲಿ ಮತ್ತೆ ಇಂತಹ ಕೋಮು ಘಟನೆ ನಡೆಯದಂತೆ ರಾಜ್ಯಪಾಲರು ಈ ಬಗ್ಗೆ ತನಿಖೆ ನಡೆಸಿ ಅಗತ್ಯ ಸೂಚನೆ ನೀಡುವಂತೆ ಕೋರಿದ್ದಾರೆ. ಮಾತ್ರವಲ್ಲದೆ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ.
ಜೋಧ್ಪುರದಲ್ಲಿ ಮುಂದುವರೆದ ಘರ್ಷಣೆ: ಪೊಲೀಸರ ಮೇಲೆ ಕಲ್ಲು ತೂರಾಟ
ಸೋಮವಾರ ಮಧ್ಯೆ ರಾತ್ರಿ (ಮೇ2) ಈದ್ ಸಂದರ್ಭದಲ್ಲಿ ಜೋಧ್ಪುರದ ಜಲೋರಿ ಗೇಟ್ ವೃತ್ತದಲ್ಲಿ ಈ ಹಿಂಸಾಚಾರ ನಡೆದಿದೆ. ಇದು ಮಂಗಳವಾರವೂ ಮುಂದುವರೆದಿದೆ. ಪ್ರಮುಖ ವಿಷಯವೆಂದರೆ ಇದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ತವರು ಪ್ರದೇಶವಾಗಿದ್ದು, ಈದ್ ಪ್ರಾರ್ಥನೆಯ ಸಮಯದಲ್ಲಿ ಈ ಹಿಂಸಾಚಾರ ನಡೆದಿದೆ. ಪೊಲೀಸರು ಲಾಠಿ ಚಾರ್ಜ್ ಮೂಲಕ ಪರಿಸ್ಥಿತಿಯನ್ನು ನಿಯಂತ್ರಿಸಿ ಗುಂಪನ್ನು ಚದುರಿಸಿದ್ದಾರೆ. ಸೋಮವಾರ ವಿವಿಧ ಸ್ಥಳಗಳಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ, ಎರಡು ಗುಂಪುಗಳು ಪರಸ್ಪರ ಕಲ್ಲು ತೂರಾಟದ ಘಟನೆಗಳು ನಡೆದಿವೆ. ಜೊತೆಗೆ ಬಿಜೆಪಿ ಶಾಸಕ ಸೂರ್ಯಕಾಂತ ವ್ಯಾಸ್ ಅವರ ಮನೆಯ ಹೊರಗೆ ಬೈಕ್ಗೆ ಬೆಂಕಿ ಹಚ್ಚಿದ್ದಾರೆ.
ಸೋಮವಾರ ಜಲೋರಿ ಗೇಟ್ನಲ್ಲಿ ಹಿಂದೂ ಧ್ವಜ ತೆಗೆದು ಮುಸ್ಲಿಂ ಬಾವುಟ ಹಾರಿಸಿದ ವಿಚಾರದಲ್ಲಿ ವಿವಾದ ಆರಂಭವಾಗಿದೆ. ವರದಿಗಳ ಪ್ರಕಾರ, ಸ್ವಾತಂತ್ರ್ಯ ಹೋರಾಟಗಾರ ಬಾಲ್ ಮುಕುಂದ್ ಬಿಸ್ಸಾ ಅವರ ಪ್ರತಿಮೆಯ ಮೇಲೆ ಧ್ವಜವನ್ನು ಹಾಕಲಾಗಿದೆ ಎಂದು ಆರೋಪಿಸಲಾಗುತ್ತಿದೆ.
ಜೊತೆಗೆ ಜಲೋರಿಯ ವೃತ್ತದಲ್ಲಿ ಈದ್ಗೆ ಸಂಬಂಧಿಸಿದ ಬ್ಯಾನರ್ ಅನ್ನು ಕಟ್ಟಿದಾಗ ಒಂದು ಸಮುದಾಯದ ಜನರು ಘೋಷಣೆಗಳನ್ನು ಕೂಗಲು ಪ್ರಾರಂಭಿಸಿದರು. ಕೇಸರಿ ಧ್ವಜವನ್ನು ತೆಗೆದ ಬೆನ್ನಲ್ಲೇ ಪ್ರತಿಭಟನಾಕಾರರು ಮುಸ್ಲಿಂಮರು ಹಾಕಿದ ಧ್ವಜ ಮತ್ತು ಬ್ಯಾನರ್ ತೆಗೆಸಿದೆ. ಇದು ಕೋಲಾಹಲಕ್ಕೆ ಕಾರಣವಾಗಿದೆ. ಈ ವೇಳೆ ಇತರೆ ಸಮುದಾಯದವರು ಆಕ್ರೋಶಗೊಂಡು ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದೆ.
ಎರಡೂ ಕಡೆಯಿಂದ ಕಲ್ಲು ತೂರಾಟ, ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವಿರುದ್ಧ ಘೋಷಣೆ, ವಾಹನಗಳಿಗೆ ಹಾನಿ, ಧ್ವನಿವರ್ಧಕವನ್ನು ಕಿತ್ತೊಗೆಯುವ ಘಟನೆ ನಡೆದಿದೆ. ಗುಂಪನ್ನು ನಿಯಂತ್ರಣಕ್ಕೆ ತರಲು ಪೊಲೀಸರು ಅಶ್ರುವಾಯು ಶೆಲ್ಗಳನ್ನು ಪ್ರಯೋಗಿಸಿದ್ದಾರೆ. ಜನಸಂದಣಿ ಹೆಚ್ಚಾದಂತೆ ಪೊಲೀಸರು ಆ ಪ್ರದೇಶದಿಂದ ಜನರನ್ನು ಚದುರಿಸಿ ಬಿಗಿ ಭದ್ರತೆ ಒದಗಿಸಿದ್ದಾರೆ. ಇದೇ ವೇಳೆ ಶಾಂತಿ ಕಾಪಾಡುವಂತೆ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮನವಿ ಮಾಡಿದ್ದಾರೆ.