ಪ್ರಾಚೀನ ಭಾರತದ ಮೊದಲ 'ಸ್ಮಾರ್ಟ್ ಸಿಟಿ'ಯನ್ನು ಹೊಗಳಿದ ನಾಸಾ
ವಾಷಿಂಗ್ಟನ್, ಆಗಸ್ಟ್ 28: ವೇಗವಾಗಿ ಬೆಳೆಯುತ್ತಿರುವ ಭಾರತದ ನಗರಗಳದ್ದು ಒಂದೊಂದು ರೀತಿಯ ಗುಣ, ವಿಶಿಷ್ಟತೆ, ಸಮಸ್ಯೆಗಳು. ನಗರಗಳು ಎಲ್ಲ ಸವಲತ್ತುಗಳೊಂದಿಗೆ ಸುಸಜ್ಜಿತವಾಗಿ ಬೆಳೆಯಬೇಕು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಸ್ಮಾರ್ಟ್ ಸಿಟಿ ಯೋಜನೆಯನ್ನು ಜಾರಿಗೆ ತಂದಿತ್ತು. ಅದರ ಫಲಿತಾಂಶ ಮಾತ್ರ ಕುಂಟುತ್ತಾ ಸಾಗಿದೆ.
ಆದರೆ, ಭಾರತದಲ್ಲಿ ನಾಲ್ಕೈದು ಶತಮಾನಗಳ ಹಿಂದೆಯೇ ಅತ್ಯಂತ 'ಸ್ಮಾರ್ಟ್' ಆದ ನಗರಿ ಬೆಳೆದಿತ್ತು. ಅದು ರಾಜಸ್ಥಾನದ ಜೈಪುರ. ಜೈಪುರವನ್ನು ನಿರ್ಮಿಸಿದ್ದು ಮಹಾರಾಜ ಸವಾಯ್ ಜೈ ಸಿಂಗ್. ಇಡೀ ನಗರ ನಿಖರವಾದ ವಾಸ್ತುಶಿಲ್ಪ ಮತ್ತು ಯೋಜನೆಗಳೊಂದಿಗೆ ಅದನ್ನು ನಿರ್ಮಿಸಿದ್ದರು. ಸಿಂಗ್ ಆಡಳಿತಗಾರ ಮತ್ತು ವಾಸ್ತುಶಿಲ್ಪದ ಜ್ಞಾನವುಳ್ಳವರು ಮಾತ್ರವಲ್ಲ, ಅತ್ಯುತ್ತಮ ಖಗೋಳ ಜ್ಞಾನಿಯೂ ಆಗಿದ್ದರು ಎನ್ನುವುದಕ್ಕೆ ಜೈಪುರ ನಗರವೇ ಸಾಕ್ಷಿ.
ಭಾರತದಲ್ಲಿನ ಮಳೆ, ಪ್ರವಾಹದ ಬಗ್ಗೆ ನಾಸಾ ಹೇಳಿದ್ದೇನು?
ಹೀಗಾಗಿಯೇ ಜೈಪುರ ತನ್ನ ವಿನ್ಯಾಸಗಳಿಂದಾಗಿ ಜಗತ್ತಿನ ಪ್ರವಾಸಿಗರನ್ನು ಸೆಳೆಯುತ್ತಿದೆ. ಜೈಪುರ ನಗರ ಅತ್ಯದ್ಭುತ ಯೋಜನಾಬದ್ಧವಾಗಿದೆ ಎಂಬುದನ್ನು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಹೇಳಿದೆ.
ನಾಸಾ ತೆಗೆದ ವಿಶಿಷ್ಟ ಚಿತ್ರ
ನಾಸಾದ ಲ್ಯಾಂಡ್ ಸ್ಯಾಟ್ ಉಪಗ್ರಹವು ಆಪರೇಷನಲ್ ಲ್ಯಾಂಡ್ ಇಮೇಜರ್ ಮೂಲಕ 2019ರ ಮಾರ್ಚ್ 18ರಂದು ತೆಗೆದು ಚಿತ್ರದಲ್ಲಿ ಜೈಪುರ ನಗರದ ವೈಭವ ಬಾಹ್ಯಾಕಾಶದಂದಲೂ ಅಂದವಾಗಿ ಕಂಡುಬಂದಿದೆ.
1726ರಲ್ಲಿ ನಿರ್ಮಾಣಗೊಂಡ ಜೈಪುರ ನಗರವನ್ನು ಭಾರತದ ಮೊದಲ ಯೋಜನಾಬದ್ಧ ನಗರ ಎಂದೇ ಪರಿಗಣಿಸಲಾಗಿದೆ. ಇತರೆ ನಗರಗಳು ಹಂತಹಂತವಾಗಿ ಸ್ವಾಭಾವಿಕವಾಗಿ ಬೆಳೆಯುತ್ತಾ ಬಂದಿದ್ದರೆ, ಜೈಪುರ ಒಂದೇ ಹಂತದಲ್ಲಿ ವ್ಯವಸ್ಥಿತವಾಗಿ ಕಟ್ಟಿರುವ ನಗರ.
2024ರಲ್ಲಿ ಚಂದ್ರನ ಮೇಲೆ ಮಹಿಳೆಯನ್ನು ಇಳಿಸಲಿರುವ ನಾಸಾ
ಸುತ್ತಲೂ ಬೆಟ್ಟಗುಡ್ಡಗಳ ಕೋಟೆ
ಆಂಬೆರ್ ಸಂಸ್ಥಾನದ ರಾಜನಾಗಿದ್ದ ಸವಾಯ್ ಜೈ ಸಿಂಗ್, ಅಲ್ಲಿಂದ 11 ಕಿ.ಮೀ ದೂರದಲ್ಲಿ ರಾಜಧಾನಿಯನ್ನು ಸ್ಥಾಪಿಸಿದ್ದರು. ಜೈಪುರವನ್ನು ವಾಣಿಜ್ಯ ಮತ್ತು ವ್ಯಾಪಾರದ ನಗರವನ್ನಾಗಿ ಬೆಳೆಸುವ ಕನಸು ಕಂಡಿದ್ದರು. ಈ ಹಿಂದಿನ ರಾಜಧಾನಿ ಬೆಟ್ಟಗುಡ್ಡದ ಪ್ರದೇಶದಲ್ಲಿತ್ತು. ಜೈಪುರ ಮಟ್ಟಸವಾದ ಭೂಮಿಯ ಮೇಲೆ ಚಿಗುರಿದ ಕನಸು. ಈ ನಗರಕ್ಕೆ ಸುತ್ತಲೂ ಬೆಟ್ಟಗುಡ್ಡಗಳ ರಕ್ಷಣೆ ಇದೆ. ಅವುಗಳಲ್ಲಿ ರಕ್ಷಣೆಗಾಗಿ ಕೋಟೆ ಕೊತ್ತಲಗಳನ್ನು ನಿರ್ಮಿಸಲಾಗಿತ್ತು. ಬೆಟ್ಟದ ಭಾಗದಲ್ಲಿ ವಾಸವಿದ್ದ ರಾಜಧಾನಿಯನ್ನು ವರ್ಗಾಯಿಸಿ, ಜೈಪುರ ನಗರವನ್ನು ನಿರ್ಮಿಸುವ ಕಾರ್ಯಕ್ಕೂ ಮುನ್ನ ಹಲವಾರು ರೀತಿಗಳಲ್ಲಿ ಯೋಜನೆಗಳನ್ನು ರೂಪಿಸುವ ಅಗತ್ಯವಿತ್ತು.
ವಿದ್ಯಾಧರ ಭಟ್ಟಾಚಾರ್ಯ ಎಂಬ ವಾಸ್ತುಶಿಲ್ಪಿಯ ನೆರವಿನಿಂದ ವಾಸ್ತುಶಿಲ್ಪದ ವಿಜ್ಞಾನ ಎಂದೇ ಕರೆಯಲಾಗುವ ವಾಸ್ತು ಶಾಸ್ತ್ರಕ್ಕೆ ಅನುಗುಣವಾಗಿ ನಗರ ನಿರ್ಮಾಣದ ನೀಲನಕ್ಷೆ ಸಿದ್ಧಪಡಿಸಿದರು. ಮನೆಗಳ ವಿನ್ಯಾಸ ಮತ್ತು ರಚನೆ, ನಗರಗಳು ಹಾಗೂ ನಗರವನ್ನು ಪರಿಸರದೊಂದಿಗೆ ಸೇರಿಸುವ ಉದ್ಯಾನಗಳನ್ನು ಕೂಡ ಈ ನೀಲನಕ್ಷೆ ಒಳಗೊಂಡಿತ್ತು.
ಖಗೋಳವೇ ನೆಲದ ಮೇಲೆ
ನಗರವನ್ನು ಚೌಕಗಳಾಗಿ ವಿಂಗಡಿಸಿ, ವಿಶಾಲವಾದ ರಸ್ತೆಗಳೊಂದಿಗೆ ಸಮರ್ಪಕ ರೀತಿಯ ಅಡ್ಡರಸ್ತೆಗಳನ್ನು ಕೂಡ ನಿರ್ಮಿಸಲಾಗಿತ್ತು. ಖಗೋಳದ ಬಗ್ಗೆ ಒಲವು ಹೊಂದಿದ್ದ ಸಿಂಗ್, ನವಗ್ರಹಗಳನ್ನು ನೆನಪಿಸಿಕೊಳ್ಳುವಂತೆ ನಗರವನ್ನು ಒಂಬತ್ತು ಚೌಕಗಳನ್ನಾಗಿ ಮಾಡಿದ್ದರು. ಪ್ರತಿ ಚೌಕವೂ ವೇದ ಖಗೋಳದಲ್ಲಿ ಉಲ್ಲೇಖವಾಗಿರುವ ಒಂದೊಂದು ಗ್ರಹವನ್ನು ಪ್ರತಿನಿಧಿಸುತ್ತವೆ. ನುಸುಳುಕೋರರನ್ನು ತಡೆಯಲು ನಗರದ ಸುತ್ತಲೂ ಬೃಹತ್ ಗೋಡೆಯನ್ನು ಕಟ್ಟಿದ್ದರು. ಈ ಗೋಡೆಗೆ ಪ್ರವೇಶ ದ್ವಾರಗಳಿದ್ದವು. 'ಸೂರ್ಯ' ದ್ವಾರವು ಪೂರ್ವದ್ವಾರದಲ್ಲಿತ್ತು. ಪಶ್ಚಿಮ ಭಾಗದಲ್ಲಿನ ದ್ವಾರವನ್ನು ಚಂದ್ರ ಎಂದು ಕರೆಯಲಾಗುತ್ತಿತ್ತು.
ಜೈಪುರದ ಆರು ಮೀಟರ್ ಎತ್ತರದ ಗೋಡೆಯಲ್ಲಿ ಹಲವು ಗಮನ ಸೆಳೆಯುವ ಸ್ಮಾರಕಗಳಿವೆ. ಜಂತರ್ ಮಂತರ್ ವೀಕ್ಷಣಾಲಯವನ್ನು ಅವರು ಸ್ಥಾಪಿಸಿದ್ದರು. ಇದರಲ್ಲಿ ಸುಮಾರು 20 ಖಗೋಳ ಸಾಧನಗಳಿದ್ದವು ಮತ್ತು ಜಗತ್ತಿನ ಅತಿ ದೊಡ್ಡ ಕಲ್ಲಿನ ಸೂರ್ಯನ ಗಡಿಯಾರ ಹೊಂದಿತ್ತು.
ಅನ್ಯಗ್ರಹದಲ್ಲಿ ಜೀವಿಗಳ ಅಸ್ತಿತ್ವ ಪತ್ತೆ: ನಾಸಾದಿಂದ ವಿಶಿಷ್ಟ ಯೋಜನೆ
ಪಿಂಕ್ ಸಿಟಿಯಾಗಿದ್ದು ಹೀಗೆ
'ಹವಾ ಮಹಲ್' ಎಂಬ ಐದು ಅಂತಸ್ತಿನ ಕಟ್ಟಡವನ್ನು ಸಹ ಸಿಂಗ್ ನಿರ್ಮಿಸಿದ್ದರು. ಇದು ರಾಣಿಯರು ಮೆರವಣಿಗೆಗಳನ್ನು ವೀಕ್ಷಿಸಲು ಮತ್ತು ದೈನಂದಿನ ಚಟುವಟಿಕೆಗಳನ್ನು ವೀಕ್ಷಿಸಲು ಅನುಕೂಲಮಾಡಿಕೊಡುತ್ತಿತ್ತು. 1853ರಲ್ಲಿ ವೇಲ್ಸ್ನ ರಾಜಕುಮಾರ್ ಇಲ್ಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಎಲ್ಲ ಕಟ್ಟಡಗಳಿಗೂ ಗುಲಾಬಿ ಬಣ್ಣ ಬಳಿಯುವಂತೆ ಆದೇಶಿಸಲಾಗಿತ್ತು. ಹೀಗಾಗಿ ಜೈಪುರ ನಂತರ 'ಪಿಂಕ್ ಸಿಟಿ' ಎಂಬ ಹೆಸರು ಪಡೆದುಕೊಂಡಿತು.
ಜೈಪುರ ನಗರದಲ್ಲಿ ಈಗಲೂ ಅನೇಕ ಗೋಟೆಗಳು, ದ್ವಾರಗಳು ಮತ್ತು ಪ್ರಮುಖ ಸ್ಮಾರಕಗಳು ಮೂಲ ಸ್ಥಿತಿಯಲ್ಲಿಯೇ ಉಳಿದುಕೊಂಡಿವೆ. ಐತಿಹಾಸಿಕ ಸ್ಮಾರಗಳಿಗೆ ಹಾನಿಯಾಗದಂತೆ ಮೆಟ್ರೋ ರೈಲು ಮಾರ್ಗಗಳನ್ನು ಭೂಮಿಯ ಅಡಿಯಲ್ಲಿ ನಿರ್ಮಿಸಲಾಗಿದೆ. ಈ ನಗರವನ್ನು ಯುನೆಸ್ಕೋ ಪಾರಂಪರಿಕ ತಾಣವೆಂದು 2019ರ ಜುಲೈನಲ್ಲಿ ಘೋಷಿಸಿದೆ.