ಜೈಪುರಕ್ಕೆ ಸಚಿನ್ ಪೈಲೆಟ್ ವಾಪಸ್; ಹೇಳಿದ್ದು ಒಂದೇ ಮಾತು!
ಜೈಪುರ, ಆಗಸ್ಟ್ 11 : ಸರಣಿ ಸಭೆಗಳು, ಆರೋಪ, ಪ್ರತ್ಯಾರೋಪ, ಹೈಕೋರ್ಟ್, ಸುಪ್ರೀಂಕೋರ್ಟ್ ಎಲ್ಲಾ ಕಡೆ ಸದ್ದು ಮಾಡಿದ್ದ ರಾಜಸ್ಥಾನ ಕಾಂಗ್ರೆಸ್ ಬಿಕ್ಕಟ್ಟು ಅಂತ್ಯಗೊಂಡಿದೆ. ಕಾಂಗ್ರೆಸ್ ನಾಯಕ ಸಚಿನ್ ಪೈಲೆಟ್ ಜೈಪುರಕ್ಕೆ ವಾಪಸ್ ಆಗಿದ್ದಾರೆ.
ಮಂಗಳವಾರ ಸಂಜೆ ಜೈಪುರಕ್ಕೆ ವಾಪಸ್ ಆದ ಸಚಿನ್ ಪೈಲೆಟ್ ಪತ್ರಿಕಾಗೋಷ್ಠಿ ನಡೆಸಿದರು. "ನಾನು ಯಾವುದೇ ಹುದ್ದೆಗಾಗಿ ಬೇಡಿಕೆ ಇಟ್ಟಿಲ್ಲ" ಎಂದು ಅವರು ಸ್ಪಷ್ಟಪಡಿಸಿದರು. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವಿರುದ್ಧದ ಅಸಮಾಧಾನದಿಂದಾಗಿ 18 ಶಾಸಕರ ಜೊತೆ ಹರ್ಯಾಣದ ಹೋಟೆಲ್ನಲ್ಲಿ ಅವರು ಒಂದು ತಿಂಗಳಿನಿಂದ ವಾಸ್ತವ್ಯ ಹೂಡಿದ್ದರು.
ರಾಜಸ್ಥಾನ ಬಿಕ್ಕಟ್ಟು; ಕೊನೆಗೂ ಮೌನ ಮುರಿದ ಸಚಿನ್ ಪೈಲೆಟ್
"ಕಾಂಗ್ರೆಸ್ ಪಕ್ಷಕ್ಕೆ ವಾಪಸ್ ಆಗುವ ಶಾಸಕರ ವಿರುದ್ಧ ಯಾವುದೇ ದ್ವೇಷದ ರಾಜಕಾರಣ ನಡೆಯಬಾರದು ಎಂಬುದು ನನ್ನ ನಿರೀಕ್ಷೆಯಾಗಿದೆ" ಎಂದು ಸಚಿನ್ ಪೈಲೆಟ್ ಹೇಳಿದರು. ದೆಹಲಿಯಲ್ಲಿ ಹೈಕಮಾಂಡ್ ಮಟ್ಟದಲ್ಲಿ ರಾಜಸ್ಥಾನ ಕಾಂಗ್ರೆಸ್ ಬಿಕ್ಕಟ್ಟು ಪರಿಹರಿಸಲು ನಡೆಸಿದ ಎಲ್ಲಾ ಪ್ರಯತ್ನಗಳು ಫಲಕೊಟ್ಟಿವೆ.
ರಾಹುಲ್ ಗಾಂಧಿ ಭೇಟಿಯಾದ ಬಂಡಾಯ ನಾಯಕ ಸಚಿನ್ ಪೈಲೆಟ್!
42 ವರ್ಷದ ಸಚಿನ್ ಪೈಲೆಟ್ ರಾಜಸ್ಥಾನದ ಉಪ ಮುಖ್ಯಮಂತ್ರಿಯಾಗಿದ್ದು. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವಿರುದ್ಧ ಬಂಡಾಯ ಎದ್ದಿದ್ದ ಅವರನ್ನು ಉಪ ಮುಖ್ಯಮಂತ್ರಿ ಮತ್ತು ರಾಜಸ್ಥಾನ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಲಾಗಿತ್ತು.
ಸಚಿನ್ ಪೈಲೆಟ್ ಅನರ್ಹತೆ ಪ್ರಕರಣ; ಹೈಕೋರ್ಟ್ ತೀರ್ಪು ಪ್ರಕಟ
ನಾನು ಯಾವುದೇ ಬೇಡಿಕೆ ಇಟ್ಟಿಲ್ಲ
ಮತ್ತೆ ಉಪಮುಖ್ಯಮಂತ್ರಿ ಆಗುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿನ್ ಪೈಲೆಟ್, "ನಾನು ಪಕ್ಷದ ನಾಯಕರ ಬಳಿ ಯಾವುದೇ ಹುದ್ದೆಗಾಗಿ ಬೇಡಿಕೆ ಇಟ್ಟಿಲ್ಲ. ನಾನು ಒಬ್ಬ ಶಾಸಕ ಮತ್ತು ಕಾಂಗ್ರೆಸ್ ಕಾರ್ಯಕರ್ತ. ಪಕ್ಷ ಹೇಳಿದಂತೆ ನಾನು ಮಾಡುವೆ" ಎಂದು ಸ್ಪಷ್ಟನೆ ನೀಡಿದರು.
ವೈಯಕ್ತಿಕ ದಾಳಿಯಿಂದ ನೋವಾಗಿದೆ
"ವೈಯಕ್ತಿಕ ಮಟ್ಟದ ದಾಳಿಯಿಂದಾಗಿ ನನಗೆ ತುಂಬಾ ನೋವಾಗಿದೆ. ಮಾಡಿದ ಎಲ್ಲಾ ಆರೋಪಗಳು, ಬಳಸಿದ ಭಾಷೆಯನ್ನು ಮರೆತು ಬಿಡೋಣ. ಎಲ್ಲರೂ ಒಂದಾಗಿ ಜನರಿಗೆ ಸಹಾಯಕವಾಗುವಂತಹ ಕೆಲಸ ಮಾಡೋಣ" ಎಂದು ಸಚಿನ್ ಪೈಲೆಟ್ ಕರೆ ನೀಡಿದರು.
ಪಕ್ಷ, ನಾಯಕತ್ವದ ವಿರುದ್ಧ ಮಾತನಾಡಿಲ್ಲ
"ಪಕ್ಷದ ನಾಯಕರು, ನಾಯಕತ್ವದ ವಿರುದ್ಧ ನಾವು ಎಂದೂ ಮಾತನಾಡಿಲ್ಲ. ಹಲವಾರು ಜನರು ನಮ್ಮ ಹೇಳಿಕೆಗಳನ್ನು ತಿರುಚಿ ಸುಳ್ಳು ಸುದ್ದಿಗಳನ್ನು ಹಬ್ಬಿಸಿದರು. 30 ದಿನದ ಹಿಂದೆ ನಾವು ಹೇಳಿದ ಮಾತಿಗೆ ಇಂದಿಗೂ ಬದ್ಧರಾಗಿದ್ದೇವೆ" ಎಂದು ಸಚಿನ್ ಪೈಲೆಟ್ ಹೇಳಿದರು.
ಕಾಂಗ್ರೆಸ್ ಎಲ್ಲವನ್ನೂ ಕೊಟ್ಟಿದೆ
"ಚಿಕ್ಕ ವಯಸ್ಸಿನಲ್ಲಿಯೇ ಕಾಂಗ್ರೆಸ್ ಪಕ್ಷ ನನಗೆ ಎಲ್ಲವನ್ನೂ ನೀಡಿದೆ. ನೀಡಿದ ಹುದ್ದೆಗೆ ನಾನು ನ್ಯಾಯ ಒದಗಿಸಿದ್ದೇನೆ. ಮುಂದೆಯೂ ಪಕ್ಷ ಹೇಳಿದ ಕೆಲಸಗಳನ್ನು ಮಾಡುತ್ತೇನೆ" ಎಂದು ಸಚಿನ್ ಪೈಲೆಟ್ ಸ್ಪಷ್ಟಪಡಿಸಿದರು.