ವರದಕ್ಷಿಣೆಗಾಗಿ ಬೇಡಿಕೆ: ಹಸೆಮಣೆ ಏರಬೇಕಿದ್ದ ಸಹೋದರಿಯರು ಪೊಲೀಸ್ ಠಾಣೆಗೆ ದೂರು
ಜೈಪುರ್, ಮೇ 13: ಇಬ್ಬರು ಸಹೋದರಿಯರು ಒಂದೇ ವೇದಿಕೆಯಲ್ಲಿ ಮದುವೆಗಾಗಿ ಹಸೆಮಣೆ ಏರಿದ್ದರು. ಶಾಸ್ತ್ರಗಳು ಎಲ್ಲಾ ಮುಗಿದು ಇನ್ನೇನು ತಾಳಿ ಕಟ್ಟಬೇಕಿತ್ತು. ಆದರೆ ವರದಕ್ಷಿಣೆ ಎಂಬ ಸಾಮಾಜಿಕ ಪಿಡುಗು ಅವರನ್ನು ಗಂಡನ ಮನೆಗೆ ಹೋಗುವ ಬದಲು ಪೊಲೀಸ್ ಠಾಣೆಗೆ ಹೋಗುವಂತೆ ಮಾಡಿತು.
ರಾಜಸ್ಥಾನದ ಭರತ್ಪುರ ಜಿಲ್ಲೆಯ ಬಯಾನದಲ್ಲಿ ಈ ಅಮಾನವೀಯ ಘಟನೆ ಜರುಗಿದೆ. ರಾಜಸ್ಥಾನದ ಸಿಕಂದರ್ ಮೂಲದ ಸಹೋದರಿಯರಿಬ್ಬರಿಗೆ ರಾಂಪುರ ಮೂಲದ ಸಹೋದರರ ಜತೆಗೆ ಬುಧವಾರ ಮದುವೆ ನಿಶ್ಚಯವಾಗಿತ್ತು. ಅದರಂತೆ ಮದುವೆ ಮುನ್ನ ಜರುಗಬೇಕಾದ ಎಲ್ಲಾ ಶಾಸ್ತ್ರಗಳು ಪೂರ್ಣಗೊಂಡಿತ್ತು. ಮೊದಲೇ ಇಬ್ಬರು ವರರಿಗೆ ಒಂದು ಬೈಕ್, ಚಿನ್ನಾಭರಣ, ಬೆಳ್ಳಿ ಆಭರಣ, ಬಟ್ಟೆಗಳು ಮತ್ತು ಗೃಹಪಯೋಗಿ ವಸ್ತುಗಳನ್ನು ವರದಕ್ಷಿಣೆಯಾಗಿ ವಧುವಿನ ಕಡೆಯವರು ನೀಡಿದ್ದರು.
ಆದರೆ ವರನ ಕಡೆಯವರು ತಾಳಿ ಕಟ್ಟುವ ಸಂದರ್ಭದಲ್ಲಿ ಇಬ್ಬರು ವರರಿಗೆ ವರದಕ್ಷಿಣೆಯಾಗಿ ಎರಡು ಬೈಕ್, ಎರಡು ಚಿನ್ನದ ಸರ, ಎರಡು ಚಿನ್ನದ ವರ ಹಾಗೂ ಜತೆಗೆ 5 ಲಕ್ಷ ರೂ. ನಗದು ನೀಡಬೇಕೆಂದು ಬೇಡಿಕೆ ಇಟ್ಟರು. ಆದರೆ ಇಷ್ಟೊಂದು ವರದಕ್ಷಿಣೆ ಕೊಡಲು ತಾವು ಅಸಹಾಯಕರಾಗಿದ್ದೇವೆ ಎಂದು ವಧುವಿನ ತಂದೆ, ತಾಯಿ ಅಂಗಲಾಚಿದರು. ಆದರೂ ಮಾನವೀಯತೆ ತೋರದ ವರನ ಕಡೆಯವರು ಮದುವೆಯನ್ನೇ ರದ್ದುಗೊಳಿಸಿ, ತಮ್ಮ ಊರಿಗೆ ಮರಳಿದರು.
ಮದುವೆಗಾಗಿ ಸಕಲ ಸಿದ್ಧತೆ ಮಾಡಿಕೊಂಡು, ಶೃಂಗಾರಗೊಂಡು ತಯಾರಾಗಿದ್ದ ವಧುಗಳು ವರದಕ್ಷಿಣೆ ವಿಷಯವಾಗಿ ಮದುವೆ ಮುರಿದು ಹೋದ ಸುದ್ದಿ ತಿಳಿದು ಆಘಾತಕ್ಕೆ ಒಳಗಾದರು. ಆದರೂ ಧೃತಿಗೆಡದೇ ವರನ ಕಡೆಯವರಿಗೆ ತಕ್ಕ ಪಾಠ ಕಲಿಸಬೇಕೆಂದು ತೀರ್ಮಾನ ತೆಗೆದುಕೊಂಡ ಸಹೋದರಿಯರು, ಬನಿಯಾ ಪೊಲೀಸ್ ಠಾಣೆಗೆ ತೆರಳಿ ಅವರ ವಿರುದ್ಧ ದೂರು ನೀಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ವಿಚಾರಣೆ ನಡೆಸುತ್ತಿದ್ದಾರೆ.