ಪ್ರಯಾಣಿಕರೇ ಎಚ್ಚರ: ಕೃಷಿ ಕಾಯ್ದೆ ವಿರೋಧಿಸಿ 24 ಗಂಟೆ ಕೆಎಂಪಿ ಹೆದ್ದಾರಿ ತಡೆ
ಚಂಡೀಘರ್, ಏಪ್ರಿಲ್ 09: ರೈತ ಸಂಘಟನೆಗಳು ನೀಡಿರುವ ಪ್ರತಿಭಟನೆಯ ಎಚ್ಚರಿಕೆ ಬೆನ್ನಲ್ಲೇ ಕುಂದ್ಲಾ-ಮನೆಸರ್-ಪಲ್ವಾಲಾ(ಕೆಎಂಪಿ) ಹೆದ್ದಾರಿ ಮಾರ್ಗವಾಗಿ ಸಂಚರಿಸದಂತೆ ಹರಿಯಾಣ ಪೊಲೀಸರು ಪ್ರಯಾಣಿಕರಿಗೆ ಸೂಚನೆ ನೀಡಿದ್ದಾರೆ.
ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ವಿವಾದಿತ ಕೃಷಿ ಕಾಯ್ದೆಗಳ ವಿರುದ್ಧ ಏಪ್ರಿಲ್ 10ರಂದು ಬೆಳಗ್ಗೆ 8 ಗಂಟೆಯಿಂದ ಕುಂದ್ಲಾ-ಮನೆಸರ್-ಪಲ್ವಾಲಾ ಹೆದ್ದಾರಿ ತಡೆ ನಡೆಸುವುದು. 24 ಗಂಟೆಗಳವರೆಗೂ ಹೆದ್ದಾರಿ ಬಂದ್ ಮಾಡಲಾಗುವುದು ಎಂದು ರೈತರು ಎಚ್ಚರಿಕೆ ನೀಡಿದ್ದಾರೆ.
ರೈತ ಮುಖಂಡ ರಾಕೇಶ್ ಟಿಕಾಯತ್ ಬೆಂಗಾವಲಿನ ಮೇಲೆ ದಾಳಿ
ರೈತರ ಹೆದ್ದಾರಿ ತಡೆ ಬಗ್ಗೆ ಶುಕ್ರವಾರ ಮಾತನಾಡಿರುವ ಹೆಚ್ಚುವರಿ ಪೊಲೀಸ್ ನಿರ್ದೇಶಕ ನವದೀಪ್ ಸಿಂಗ್, ಯಾವುದೇ ರೀತಿ ಹಿಂಸಾಚಾರ ನಡೆಯದಂತೆ ಮುನ್ನಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಕೆಎಂಪಿ ಹೆದ್ದಾರಿಯಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತರು ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು, ಇನ್ಸ್ ಪೆಕ್ಟರ್ ಜನರಲ್, ಎಸ್ಪಿ ಹಾಗೂ ಪೊಲೀಸ್ ಸಿಬ್ಬಂದಿಗೆ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ನಿಗಾ ವಹಿಸುವಂತೆ ಸೂಚಿಸಲಾಗಿದೆ.
ರೈತರ ಪ್ರತಿಭಟನೆಯಿಂದ ಈ ಜಿಲ್ಲೆಗಳ ಮೇಲೆ ಪ್ರಭಾವ:
ಕೃಷಿ ಕಾಯ್ದೆಗಳ ವಿರುದ್ಧ ಏಪ್ರಿಲ್ 10ರಂದು ರೈತರು ನಡೆಸುವುದಕ್ಕೆ ತೀರ್ಮಾನಿಸಿರುವ ಕೆಎಂಪಿ ಹೆದ್ದಾರಿ ತಡೆಯಿಂದಾಗಿ ಹಲವು ಜಿಲ್ಲೆಗಳ ಜನರ ಸಂಚಾರಕ್ಕೆ ಅಡ್ಡಿಯಾಗಲಿದೆ. ಸೋನಿಪತ್, ಝಾಜ್ಜರ್, ಪಾಣಿಪತ್, ರೋಹ್ಟಕ್, ಪಲ್ವಾಲ್, ಫರಿದಾಬಾದ್ ಮತ್ತು ಗುರುಗ್ರಾಮ್ ಜಿಲ್ಲೆಗಳ ಪ್ರಯಾಣಿಕರ ಸಂಚಾರಕ್ಕೆ ತೊಂದರೆಯಾಗಲಿದೆ.
ದೆಹಲಿಯಲ್ಲಿ ನಾಲ್ಕು ತಿಂಗಳು ಮೀರಿದ ರೈತ ಹೋರಾಟ:
ಕೇಂದ್ರ ಸರ್ಕಾರದ ವಿವಾದಿತ ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ, ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ ಹಾಗೂ ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆಗಳ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಕಳೆದ ನವೆಂಬರ್.26ರಿಂದ ನವದೆಹಲಿಯ ಸಿಂಘು ಗಡಿ, ಟಿಕ್ರಿ ಗಡಿ ಮತ್ತು ಘಾಜಿಪುರ್ ಗಡಿ ಪ್ರದೇಶಗಳಲ್ಲಿ ರೈತರು ನಡೆಸುತ್ತಿರು ಪ್ರತಿಭಟನೆ ಮತ್ತೊಂದು ಹಂತಕ್ಕೆ ತಲುಪಿದೆ. ಪಂಜಾಬ್, ಹರಿಯಾಣ, ಉತ್ತರ ಪ್ರದೇಶದ ಸಾವಿರಾರು ರೈತರು ಈ ಹೋರಾಟದಲ್ಲಿ ಭಾಗಿಯಾಗಿದ್ದು, ಮೇ ತಿಂಗಳಿನಲ್ಲಿ ಸಂಸತ್ ಚಲೋ ನಡೆಸುವುದಾಗಿ ಸಂಯುಕ್ತ ಕಿಸಾನ್ ಮೋರ್ಚಾ ಎಚ್ಚರಿಕೆ ನೀಡಿದೆ.
ಕೃಷಿ ಕಾಯ್ದೆ ವಿರುದ್ಧ ಸಂಸತ್ ಚಲೋ:
ಕೇಂದ್ರ ಸರ್ಕಾರದ ವಿವಾದಿತ ಮೂರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಮೇ ತಿಂಗಳ ಎರಡನೇ ವಾರದಲ್ಲಿ ಸಂಸತ್ ಚಲೋ ನಡೆಸಲಾಗುತ್ತದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಘೋಷಿಸಿದೆ. ರೈತರು, ಕಾರ್ಮಿಕರು, ಮಹಿಳೆಯರು, ದಲಿತರು, ಆದಿವಾಸಿಗಳು, ನಿರುದ್ಯೋಗಿಗಳು ಮತ್ತು ಯುವಕರು ಸೇರಿದಂತೆ ಎಲ್ಲ ವರ್ಗದ ಜನರು ಈ ಸಂಸತ್ ಚಲೋ ಹೋರಾಟದಲ್ಲಿ ಭಾಗಿ ಆಗಲಿದ್ದಾರೆ. ಶಾಂತಿಯುತ ರೀತಿಯಲ್ಲಿ ಸಂಸತ್ ಚಲೋ ನಡೆಸಲಾಗುತ್ತದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ತಿಳಿಸಿದೆ.