ಭೂ ಹಗರಣ: ರಾಬರ್ಟ್ ವದ್ರಾಗೆ ಜಾರಿ ನಿರ್ದೇಶನಾಲಯದಿಂದ ಸಮನ್ಸ್
ನವದೆಹಲಿ, ನವೆಂಬರ್ 30: ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವದ್ರಾ ಅವರಿಗೆ ಮತ್ತೊಮ್ಮೆ ಭೂ ಕಟಂಕ ಎದುರಾಗಿದೆ. ಜಾರಿ ನಿರ್ದೇಶನಾಲಯವು ಶುಕ್ರವಾರದಂದು ವದ್ರಾಗೆ ಸಮನ್ಸ್ ಜಾರಿಗೊಳಿಸಲಾಗಿದೆ.
ರಾಜಸ್ಥಾನದ ಬಿಕಾನೇರ್ ಜಿಲ್ಲೆಯ ಕೊಲಾಯತ್ ಪ್ರದೇಶದಲ್ಲಿನ ಭೂ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.
ಸೇನೆಗೆ ಸೇರಿದ ಮಹಾಜನ್ ಫೀಲ್ಡ್ ಫೈರಿಂಗ್ ರೇಂಜ್ ಗೆ ಸೇರಿದ ಭೂ ಭಾಗವನ್ನು ಹೊಂದಿರುವ ಆರೋಪವನ್ನು ವದ್ರಾ ಹೊತ್ತುಕೊಂಡಿದ್ದಾರೆ. ವದ್ರಾ ವಿರುದ್ಧ 2015ರಲ್ಲೆ ಮನಿಲಾಂಡ್ರಿಂಗ್(ಪಿಎಂಎಲ್ಎ) ಪ್ರಕರಣ ದಾಖಲಿಸಿಕೊಂಡು ಎಫ್ಐಆರ್ ಹಾಕಲಾಗಿದೆ. ಸ್ಥಳೀಯ ತಹಸೀಲ್ದಾರ್ ಅವರು ನಕಲಿ ಸಹಿ, ಫೋರ್ಜರಿ ಮಾಡಿದ ದಾಖಲೆ, ಕ್ರಯಪತ್ರ ಕಂಡು ಬಂದಿದ್ದರಿಂದ ಪೊಲೀಸರಿಗೆ ದೂರು ಸಲ್ಲಿಸಿದರು.
ಸುಮಾರು 374.44 ಹೆಕ್ಟೇರುಗಳಷ್ಟು ಜಾಗದ ಪರಭಾರೆಯನ್ನು ರಾಜಸ್ಥಾನ ಸರ್ಕಾರವು 2015ರಲ್ಲಿ ಸ್ಥಗಿತಗೊಳಿಸಿತ್ತು. ಕೊಲಾಯತ್ ಕೋರ್ಟಿನಲ್ಲಿ 18 ಕೇಸುಗಳಿಗೆ ಸಂಬಂಧಿಸಿದಂತೆ ಪೊಲೀಸರು ಚಾರ್ಜ್ ಶೀಟ್ ಕೂಡಾ ಸಲ್ಲಿಸಿದ್ದಾರೆ.
ಆದರೆ, ಯಾವುದೇ ರೀತಿ ಅಕ್ರಮ ರೀತಿಯಿಂದ ಭೂ ಭಾಗವನ್ನು ಖರೀದಿಸಿಲ್ಲ. ಇದೆಲ್ಲವೂ ರಾಜಕೀಯ ದ್ವೇಷದಿಂದ ಮಾಡಿರುವ ಕುತಂತ್ರ ಎಂದು ರಾಬರ್ಟ್ ವದ್ರಾ ಪ್ರತಿಕ್ರಿಯಿಸಿದ್ದಾರೆ.