ಹಿಂದೇಟು ಹಾಕಬೇಡಿ, ಸಿಕ್ಸರ್ ಬಾರಿಸಿ : ರೈತರಿಗೆ ರಾಹುಲ್ ಟಿಪ್ಸ್!
Recommended Video
ಜೈಪುರ, ಜನವರಿ 09 : "ಈ ದೇಶದ ರೈತರು ಬ್ಯಾಕ್ ಫುಟ್ ನಲ್ಲಿದ್ದಾರೆ. ಅವರು ಹಿಂದೇಟು ಹಾಕಬಾರದು, ಮುನ್ನುಗ್ಗಿ ಸಿಕ್ಸರ್ ಬಾರಿಸಬೇಕು" ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಜೈಪುರದಲ್ಲಿ ರೈತರಿಗೆ ಟಿಪ್ಸ್ ನೀಡಿದ್ದಾರೆ.
ರಾಜಸ್ಥಾನದಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಗೆದ್ದ ನಂತರ ಮೊದಲ ಬಾರಿಗೆ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಬುಧವಾರ ಮಾತನಾಡುತ್ತಿದ್ದ ಅವರು, ಮುಂಬರುವ ಲೋಕಸಭೆ ಚುನಾವಣೆಯಲ್ಲಿಯೂ ಬಿಜೆಪಿಗೆ ರೈತರು ಸಿಕ್ಸರ್ ಹೊಡೆದು ಪಾಠ ಕಲಿಸಬೇಕಾಗಿ ಸೂಚ್ಯವಾಗಿ ಹೇಳಿದರು.
ರೈತರಿಗೆ ಭಾರಿ ಕೊಡುಗೆ: ಜ.5ರೊಳಗೆ ಕೇಂದ್ರದ ಘೋಷಣೆ?
ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿದ ರಾಜ್ಯದ ಗ್ರಾಮೀಣ ಮತದಾರರು ಮತ್ತು ರೈತರಿಗೆ ಧನ್ಯವಾದ ಅರ್ಪಿಸಿದ ಅವರು, ಲೋಕಸಭೆ ಚುನಾವಣೆಯಲ್ಲಿಯೂ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿಕೊಟ್ಟರೆ ದೇಶದ ಎಲ್ಲ ರೈತರ ಸಾಲಮನ್ನಾ ಮಾಡುವುದಾಗಿ ಜೈಪುರದ ವಿದ್ಯಾನಗರದಲ್ಲಿ ನಡೆದ ಸಮಾವೇಶದಲ್ಲಿ ವಾಗ್ದಾನ ಮಾಡಿದರು.
ರೈತರ ಸಾಲಮನ್ನಾ ಮಾಡುವುದೇ ರೈತರ ಸಮಸ್ಯೆಗಳಿಗೆ ಪರಿಹಾರವಲ್ಲ ಎಂದ ಅವರು, ಸದ್ಯಕ್ಕೆ ಸಾಲಮನ್ನಾ ಮಾಡಿ ನಾವು ಸರಿಯಾದ ಮಾರ್ಗದಲ್ಲಿ ಚಲಿಸುತ್ತಿದ್ದೇವೆ. ದೇಶದ ರೈತರ ಅಭಿವೃದ್ಧಿಗಾಗಿ ನಾವು ಹೊಸ ತಂತ್ರವನ್ನು ರೂಪಿಸಬೇಕಾಗುತ್ತದೆ. ಮತ್ತೊಂದು ಹಸಿರು ಕ್ರಾಂತಿಯೇ ಆಗಬೇಕು ಎಂದು ರಾಹುಲ್ ನುಡಿದರು.
ಅಧಿಕಾರಕ್ಕೆ ಬಂದರೆ ದೇಶದ ರೈತರ ಸಾಲಮನ್ನಾ
ಇಡೀ ದೇಶದ ರೈತರ ಸಮಸ್ಯೆ ಒಂದೇ ರೀತಿಯಿದೆ. ನಾವು ಅಧಿಕಾರಕ್ಕೆ ಬಂದ 10 ದಿನಗಳಲ್ಲಿ ಸಾಲಮನ್ನಾ ಮಾಡುತ್ತೇವೆ ಎಂದು ಹೇಳಿದ್ದೆವು. ಆದರೆ, ಎರಡೇ ದಿನದಲ್ಲಿ ಮನ್ನಾ ಮಾಡಿದೆವು. ನೀವು ಕೂಡ ಭಾರತದ ರೈತರ ಸಾಲಮನ್ನಾ ಮಾಡಿ ಎಂಬ ಸಂದೇಶವನ್ನು ರವಾನಿಸಿದ್ದೇವೆ. ಅವರು ದೇಶದ ಸಂಕಷ್ಟದಲ್ಲಿರುವ ಎಲ್ಲ ರೈತರ ಸಾಲಮನ್ನಾ ಮಾಡುವವರೆಗೆ ಅವರಿಗೆ ನಿದ್ರಿಸಲು ಅವಕಾಶ ನೀಡುವುದಿಲ್ಲ. 2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲ ರೈತರ ಸಾಲಮನ್ನಾ ಮಾಡುತ್ತೇವೆ ಎಂದು ರಾಹುಲ್ ಗಾಂಧಿ ಘೋಷಿಸಿದರು.
ರೈತರ ಅಭಿವೃದ್ಧಿಗಾಗಿ ರಾಹುಲ್ ಪ್ಲಾನ್
ಕೃಷಿ ಕ್ಷೇತ್ರದ ಅಭಿವೃದ್ಧಿಗಾಗಿ ರೈತರು ಬೆಳೆದ ಉತ್ಪನ್ನಗಳ ರಫ್ತು ಮಾಡುವುದು, ಕೃಷಿ ಕ್ಷೇತ್ರದಲ್ಲಿ ತಂತ್ರಜ್ಞಾನದ ಬಳಕೆ ಮಾಡುವುದು, ರೈತರಿಗಾಗಿ ಆಹಾರ ಸಂಸ್ಕರಣ ಘಟಕಗಳನ್ನು ಸ್ಥಾಪಿಸುವುದರ ಬಗ್ಗೆ ರಾಹುಲ್ ಗಾಂಧಿ ಅವರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಮುಂದಿನ 5 ವರ್ಷಗಳ ವರೆಗೆ ರೈತರಿಗಾಗಿ ವಿದ್ಯುತ್ ದರವನ್ನು ಹೆಚ್ಚಿಸುವುದಿಲ್ಲ. ಈ ವರ್ಷದ ಜೂನ್ ವರೆಗೆ 1 ಲಕ್ಷ ವಿದ್ಯುತ್ ಸಂಪರ್ಕಗಳನ್ನು ರೈತರಿಗೆ ನೀಡಲಾಗುವುದು ಎಂದು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಘೋಷಿಸುತ್ತಿದ್ದಂತೆ ಜನಸಮುದಾಯದಿಂದ ಭರ್ತಿ ಕರತಾಡನ.
ರೈತರಿಗೆ ಸುಳ್ಳು ಹೇಳಬೇಡಿ: ರಾಹುಲ್ ಗಾಂಧಿಗೆ ಮೋದಿ ಸಲಹೆ
ಈ ಬಾರಿ ಚುಮತ್ಕಾರ ಆಗುವುದೆ?
2014ರ ಲೋಕಸಭೆ ಚುನಾವಣೆಯಲ್ಲಿ ರಾಜಸ್ಥಾನದಲ್ಲಿ 25 ಸೀಟುಗಳಲ್ಲಿ ಕಾಂಗ್ರೆಸ್ ಸೋಲು ಅನುಭವಿಸಿದ್ದರಿಂದ ಭಾರೀ ಮುಖಭಂಗವಾಗಿತ್ತು. ಭಾರತೀಯ ಜನತಾ ಪಕ್ಷ 24 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿತ್ತು. ಆದರೆ, 2018ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ 200 ಕ್ಷೇತ್ರಗಳಲ್ಲಿ ಶತಕ ಬಾರಿಸಿ, ಸ್ಪಷ್ಟ ಬಹುಮತ ಸಿಗದಿದ್ದರೂ, ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರಿಂದ ಬಹುಜನ ಸಮಾಜ ಪಕ್ಷದ ಜೊತೆ ಕೈಜೋಡಿಸಿ ಸರಕಾರ ರಚಿಸಿದೆ. ರಾಜ್ಯದಲ್ಲಿ ಬಿಜೆಪಿ ಸರಕಾರ ವಿರೋಧಿ ಅಲೆಯಿದ್ದರಿಂದ ಕಾಂಗ್ರೆಸ್ಸಿಗೆ ಗೆಲ್ಲಲು ಸಾಧ್ಯವಾಯಿತು. ಇದೇ ಚಮತ್ಕಾರವನ್ನು ಲೋಕಸಭೆ ಚುನಾವಣೆಯಲ್ಲೂ ಕಾಂಗ್ರೆಸ್ ಮಾಡುವುದೆ? ಇದು ಸದ್ಯಕ್ಕೆ ಮಿಲಿಯನ್ ಡಾಲರ್ ಪ್ರಶ್ನೆ. ಇದಕ್ಕೆ ಕಾಂಗ್ರೆಸ್ ಬಳಿಯೂ ಉತ್ತರವಿಲ್ಲ.
ನಿಯತ್ತಾಗಿ ಬಡ್ಡಿ ಕಟ್ಟು ರೈತರಿಗೆ ನಿರಾಶೆ
ಆದರೆ, ಕಾಂಗ್ರೆಸ್ಸಿನ ಸಾಲಮನ್ನಾ ನೀತಿಯಿಂದಾಗಿ ಹಲವಾರು ರೈತರು ನಿರಾಶರಾಗಿದ್ದಾರೆ. ಏಕೆಂದರೆ, ಸಾಲ ಕಟ್ಟಲು ವಿಫಲರಾದ ರೈತರಿಗೆ ಮಾತ್ರ ಈ ಸಾಲಮನ್ನಾ ನೀತಿ ಸಹಾಯವಾಗುತ್ತಿದೆ. ಲಕ್ಷಗಟ್ಟಲೆ ಸಾಲ ಪಡೆದಿದ್ದರೂ ನಿಯತ್ತಾಗಿ ಬಡ್ಡಿ ಕಟ್ಟುತ್ತಿರುವ ರೈತರಿಗೆ ಈ ಸಾಲಮನ್ನಾ ಎಳ್ಳಷ್ಟೂ ಸಹಾಯವಾಗುವುದಿಲ್ಲ. ನಿಯತ್ತಾಗಿ ಸಾಲ ಕಟ್ಟುವವರಿಗಿಂತ ಸಾಲ ಕಟ್ಟಲು ವಿಫಲರಾದವರಿಗೆ ಏಕೆ ಸಹಾಯವಾಗಬೇಕು ಎಂಬ ಅಳಲು ರೈತರದು. ಎಲ್ಲ ರೈತರ 2 ಲಕ್ಷ ರುಪಾಯಿನಷ್ಟು ಸಾಲ ಮನ್ನಾ ಆಗಬೇಕು ಎಂದು ರೈತರು ಆಗ್ರಹ ಇಟ್ಟಿದ್ದಾರೆ. ಇದು ಕಾಂಗ್ರೆಸ್ ಪಕ್ಷಕ್ಕೆ ಬಿಸಿತುಪ್ಪವಾಗಿ ಪರಿಣಮಿಸಿದೆ. ಏಕೆಂದರೆ, ಈ ಸಾಲಮನ್ನಾ ರಾಜ್ಯದ ಬೊಕ್ಕಸಕ್ಕೂ ಭಾರೀ ಹೊರೆಯಾಗಲಿದೆ.