ಅತ್ಯಾಚಾರ ಆರೋಪ; ರಾಜಸ್ಥಾನದ ಸಚಿವರ ಪುತ್ರನಿಗಾಗಿ ಹುಡುಕಾಟ
ಜೈಪುರ ಮೇ 15: ರಾಜಸ್ಥಾನದ ಸಚಿವರ ಪುತ್ರನನ್ನು ಬಂಧಿಸಲು ಆಗಮಿಸಿದ್ದ ದೆಹಲಿ ಪೊಲೀಸರು ಬರಿಗೈಯಲ್ಲಿ ವಾಪಸ್ ಆದರು. 23 ವರ್ಷದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇರೆಗೆ ಸಚಿವ ಮಹೇಶ್ ಜೋಶಿ ಪುತ್ರ ರೋಹಿತ್ ಜೋಶಿಗಾಗಿ ಹುಡುಕಾಟ ನಡೆಯುತ್ತಿದೆ.
ಭಾನುವಾರ ರೋಹಿತ್ ಜೋಶಿ ಬಂಧಿಸಲು 15 ಅಧಿಕಾರಿಗಳ ದೆಹಲಿ ಪೊಲೀಸರ ತಂಡ ಜೈಪುರಕ್ಕೆ ಆಗಮಿಸಿತ್ತು. ಪೊಲೀಸರು ಮಹೇಶ್ ಜೋಶಿ ನಿವಾಸಕ್ಕೆ ತೆರಳಿದ್ದ ವೇಳೆ ರೋಹಿತ್ ಮನೆಯಲ್ಲಿರಲಿಲ್ಲ. ಹೀಗಾಗಿ ಪೊಲೀಸರು ನೋಟಿಸ್ ಅನ್ನು ಮನೆಯ ಗೋಡೆಗೆ ಅಂಟಿಸಿ ಬಂದಿದ್ದಾರೆ.
ಮೇ 18ರ ಒಳಗೆ ವಿಚಾರಣೆಗಾಗಿ ದೆಹಲಿ ಪೊಲೀಸರ ಎದುರು ಹಾಜರಾಗುವಂತೆ ನೋಟಿಸ್ನಲ್ಲಿ ಸೂಚನೆ ನೀಡಲಾಗಿದೆ. "ತಲೆಮರೆಸಿಕೊಂಡಿರುವ ರೋಹಿತ್ ಜೋಶಿ ಹುಡುಕಾಟದಲ್ಲಿ ನಮ್ಮ ತಂಡ ನಿರತವಾಗಿದೆ. ಶೀಘ್ರದಲ್ಲೇ ನಾವು ಆತನನ್ನುಹುಡುಕಿ, ವಶಕ್ಕೆ ಪಡೆಯುತ್ತೇವೆ'' ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ವರ್ಷದ ಜನವರಿ 18ರಿಂದ ಈ ವರ್ಷದ ಏಪ್ರಿಲ್ 17ರವರಗೆ ರೋಹಿತ್ ಜೋಶಿ ಹಲವಾರು ಬಾರಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ. ಅಲ್ಲದೇ ಆತ ಮದುವೆಯಾಗುವುದಾಗಿ ನಂಬಿಸಿ, ವಂಚಿಸಿದ್ದಾನೆ ಎಂದು ಆರೋಪಿಸಿ ಮಹಿಳೆ ಯೊಬ್ಬರು ದೆಹಲಿಯ ಸದರ್ ಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕಳೆದ ವರ್ಷ ಫೇಸ್ಬುಕ್ ಮೂಲಕ ರೋಹಿತ್ ನನಗೆ ಪರಿಚಯವಾದ. ಪರಿಚಯ ಸ್ನೇಹಕ್ಕೆ ತಿರುಗಿತು. ನಂತರ ಮೊದಲ ಬಾರಿಗೆ ಆತನನ್ನು ಭೇಟಿಯಾದಾಗ ಅವನು ಕುಡಿಯಲು ನನಗೆ ಪಾನೀಯ ನೀಡಿದ. ಅದರಲ್ಲಿ ಮತ್ತು ಬರುವ ಅಂಶ ಇದ್ದಿದ್ದರಿಂದ ನನಗೆ ಮಾರನೆಯ ದಿನ ಬೆಳಗ್ಗೆ ಎಚ್ಚರಿಕೆಯಾಯಿತು. ಈ ವೇಳೆ ರೋಹಿತ್ ನನ್ನ ನಗ್ನ ಫೋಟೊಗಳು ಹಾಗೂ ವಿಡಿಯೋಗಳನ್ನು ತೋರಿಸಿ ನನ್ನನ್ನು ಬ್ಲಾಕ್ಮೇಲ್ ಮಾಡಿದ. ಅಲ್ಲದೇ ನನನ್ನು ಅಪಹರಣ ಕೂಡ ಮಾಡಿದ ಎಂದು ಮಹಿಳೆ ದೂರಿನಲ್ಲಿಉಲ್ಲೇಖಿಸಿದ್ದಾರೆ.
2021ರ ಆಗಸ್ಟ್ 11ರಲ್ಲಿ ನಾನು ಗರ್ಭವತಿಯಾಗಿರುವುದು ತಿಳಿಯಿತು. ಈ ವಿಷಯವನ್ನು ನಾನು ರೋಹಿತ್ಗೆ ತಿಳಿಸಿದೆ. ಆಗ ಆತ ಗರ್ಭಪಾತ ಮಾಡಿಸಿಕೊಳ್ಳುವಂತೆ ಕಿರುಕುಳ ನೀಡಿದ. ನಾನು ಇದಕ್ಕೆ ಒಪ್ಪಲಿಲ್ಲ ಎಂದು ಮಹಿಳೆ ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ರಾಜಸ್ಥಾನದ ಸಚಿವ ಮಹೇಶ್ ಜೋಶಿ, "ನಾನು ನ್ಯಾಯ ಮತ್ತು ಸತ್ಯದ ಪರವಾಗಿ ನಿಲ್ಲುತ್ತೇನೆ. ನಾನು ನೆಲದ ಕಾನೂನನ್ನು ಗೌರವಿಸುತ್ತೇನೆ. ತನಿಖೆ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ಆಗಮಿಸಿದ ವೇಳೆ ವಿಚಾರಣೆಗೆ ನಾನು ಸಹಕರಿಸುತ್ತೇನೆ'' ಎಂದು ಹೇಳಿದ್ದಾರೆ.
"ರಾಜಸ್ಥಾನ ಸರಕಾರ ಅತ್ಯಾಚಾರ ಆರೋಪಿಯನ್ನು ರಕ್ಷಿಸುತ್ತಿದೆ. ಈ ರೀತಿಯ ಪ್ರಕರಣಗಳನ್ನು ಮುಚ್ಚಿ ಹಾಕುವುದು ಕಾಂಗ್ರೆಸ್ ಸಂಸ್ಕೃತಿಯಾಗಿದೆ. ಇದನ್ನು ನಾವು ಖಂಡಿಸುತ್ತೇವೆ'' ಎಂದು ರಾಜಸ್ಥಾನ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಗುಲಾಬ್ ಚಂದ್ ಕಟಾರಿಯಾ ದೂರಿದ್ದಾರೆ.
ಸಚಿವ ಮಹೇಶ್ ಜೋಶಿ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ಗೆ ಆಪ್ತರು.