ರಾಜಸ್ಥಾನ ಕಾಂಗ್ರೆಸ್ನಲ್ಲಿ ಬಿಕ್ಕಟ್ಟು; ಕುತೂಹಲ ಮೂಡಿಸಿದ ಸಚಿನ್ ನಡೆ!
ಜೈಪುರ, ಜುಲೈ 12 : ರಾಜಸ್ಥಾನ ಕಾಂಗ್ರೆಸ್ನಲ್ಲಿ ಬಿಕ್ಕಟ್ಟು ಉಂಟಾಗಿದೆ. ಉಪ ಮುಖ್ಯಮಂತ್ರಿ ಸಚಿನ್ ಪೈಲೆಟ್ ಆಪ್ತರಾದ 8 ಶಾಸಕರ ಜೊತೆ ದೆಹಲಿಗೆ ತೆರಳಿದ್ದಾರೆ. ಮಧ್ಯಪ್ರದೇಶ ಮಾದರಿಯಲ್ಲಿ ರಾಜಸ್ಥಾನದ ಕಾಂಗ್ರೆಸ್ ಸರ್ಕಾರವೂ ಪತನಗೊಳ್ಳಲಿದೆಯೇ? ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.
ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ರಾಜಕೀಯ ಬೆಳವಣಿಗೆ ಕುರಿತು ಮಾತನಾಡಿದ್ದು, "ಕಮಲನಾಥ್ ಸರ್ಕಾರವನ್ನು ಉರುಳಿಸಿದಂತೆಯೇ ನಮ್ಮ ಕಾಂಗ್ರೆಸ್ ಶಾಸಕರಿಗೆ ಹಣದ ಆಮಿಷವೊಡ್ಡುವ ಮೂಲಕ ಸರ್ಕಾರ ಉರುಳಿಸಲು ಬಿಜೆಪಿ ಪ್ರಯತ್ನ ನಡೆಸಿದೆ" ಎಂದು ಆರೋಪಿಸಿದ್ದಾರೆ.
ರಾಹುಲ್ ಗಾಂಧಿ ಮತ್ತೆ ಕಾಂಗ್ರೆಸ್ ಚುಕ್ಕಾಣಿ ಹಿಡಿಯಬೇಕು: ಸಚಿನ್ ಪೈಲಟ್
ಉಪ ಮುಖ್ಯಮಂತ್ರಿ ಸಚಿನ್ ಪೈಲೆಟ್ ಆಪ್ತರಾದ 8 ಶಾಸಕರ ಜೊತೆ ದೆಹಲಿಗೆ ತೆರಳಿದ್ದಾರೆ. ಅಲ್ಲಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಪಕ್ಷದಲ್ಲಿ ಉಂಟಾಗಿರುವ ಗೊಂದಲಗಳ ಬಗ್ಗೆ ವಿವರಣೆ ನೀಡಲಿದ್ದಾರೆ. ಕಾಂಗ್ರೆಸ್ನ 19 ಶಾಸಕರು ರೆಸಾರ್ಟ್ನಲ್ಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ರಾಜಸ್ಥಾನ ಸರ್ಕಾರಕ್ಕೆ ಗಂಡಾಂತರ, ಶಕ್ತಿ ಪ್ರದರ್ಶಿಸಿದ ಸಚಿನ್ ಪೈಲಟ್!
ಮೂವರು ಪಕ್ಷೇತರ ಶಾಸಕರಿಗೆ ಹಣದ ಆಮಿಷವೊಲಾಗಿದೆ ಎಂದು ಆರೋಪಿಸಲಾಗಿದ್ದು, ರಾಜಸ್ಥಾನದ ಭ್ರಷ್ಟಾಚಾರ ನಿಗ್ರಹ ದಳ ಈ ಕುರಿತು ತನಿಖೆಯನ್ನು ಆರಂಭಿಸಿದೆ. ರಾಜಸ್ಥಾನದ ರಾಜಕೀಯ ಬಿಕ್ಕಟ್ಟು ದೆಹಲಿ ತಲುಪಿದ್ದು, ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಯಾವ ತೀರ್ಮಾನ ಕೈಗೊಳ್ಳಲಿದ್ದಾರೆ? ಎಂದು ಕಾದು ನೋಡಬೇಕು.
ರಾಜಸ್ಥಾನ : ಸಚಿನ್ ಪೈಲಟ್ ಅತ್ಯಂತ ಕಿರಿಯ ವಯಸ್ಸಿನ ಡಿಸಿಎಂ
ರಹಸ್ಯವಾಗಿ ಏನೂ ಉಳಿದಿಲ್ಲ
ರಾಜಸ್ಥಾನದಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಉಪ ಮುಖ್ಯಮಂತ್ರಿ ಸಚಿನ್ ಪೈಲೆಟ್ ನಡುವಿನ ಅಸಮಾಧಾನ ರಹಸ್ಯವಾಗಿ ಏನೂ ಉಳಿದಿಲ್ಲ. ಸಚಿನ್ ಪೈಲೆಟ್ ಮುಖ್ಯಮಂತ್ರಿಯಾಗಬೇಕು ಎಂದು ಪ್ರಯತ್ನ ನಡೆಸಿದ್ದಾರೆ. ಈಗ ಅವರು ಆಪ್ತ ಶಾಸಕರ ಜೊತೆ ದೆಹಲಿಗೆ ತೆರಳಿದ್ದು ಕುತೂಹಲಕ್ಕೆ ಕಾರಣವಾಗಿದೆ.
ಬಿಜೆಪಿ ಸರ್ಕಾರ ಬೀಳಿಸಲಿದೆ
ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ರಾಜ್ಯಸಭಾ ಚುನಾವಣೆ ಸಮಯದಿಂದಲೂ ಬಿಜೆಪಿ ರಾಜ್ಯದ ಕಾಂಗ್ರೆಸ್ ಸರ್ಕಾರವನ್ನು ಕೆಡವಲು ಬಿಜೆಪಿ ಪ್ರಯತ್ನ ನಡೆಸುತ್ತಿದೆ ಎಂದು ಆರೋಪ ಮಾಡುತ್ತಿದ್ದಾರೆ. ಈಗ ಮೂವರು ಪಕ್ಷೇತರ ಶಾಸಕರಿಗೆ 25 ರಿಂದ 30 ಕೋಟಿ ಹಣದ ಆಮಿಷವೊಡ್ಡಿದ್ದಾರೆ ಎಂದು ಆರೋಪ ಮಾಡಲಾಗಿದ್ದು, ಈ ಕುರಿತು ತನಿಖೆ ಆರಂಭವಾಗಿದೆ.
ಮಧ್ಯಪ್ರದೇಶದ ಮಾದರಿ
ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ನಾಯಕ ಜ್ಯೋತಿರಾಧಿತ್ಯ ಸಿಂಧಿಯಾ ಕಾಂಗ್ರೆಸ್ ಬಿಟ್ಟು ಹೊರ ಬಂದರು. ಅವರ ಜೊತೆ 20ಕ್ಕೂ ಅಧಿಕ ಶಾಸಕರು ರಾಜೀನಾಮೆ ಕೊಡುವ ಮೂಲಕ ಕಮಲನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಪತನಗೊಂಡಿತು. ಇದೇ ಮಾದರಿಯನ್ನು ಸಚಿನ್ ಪೈಲೆಟ್ ಅನುಸರಿಸಲಿದ್ದಾರೆ ಎಂಬ ಸುದ್ದಿಗಳು ಹಬ್ಬಿವೆ.
ಸೋನಿಯಾ ಗಾಂಧಿ ಮಾತು ಅಂತಿಮ
ರಾಜಸ್ಥಾನ ಕಾಂಗ್ರೆಸ್ ಬಿಕ್ಕಟ್ಟಿನ ಕುರಿತು ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಮಾತನಾಡಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಅವರು ಹೇಳುವ ಮಾತೇ ಅಂತಿಮವಾಗಿದ್ದು, ಸರ್ಕಾರ ಉಳಿಸಿಕೊಳ್ಳಲು ಎಲ್ಲಾ ಪ್ರಯತ್ನಗಳನ್ನು ನಡೆಸಲಾಗುತ್ತದೆ.