ಅಶೋಕ್ ಗೆಹ್ಲೋಟ್ ಮನೆಯಲ್ಲಿ ಮಹತ್ವದ ಸಭೆ; ಹೊಸ ಸಿಎಂ ಆಯ್ಕೆ?
ಜೈಪುರ, ಸೆ. 25; ಕಾಂಗ್ರೆಸ್ ಅಧ್ಯಕ್ಷ ಚುನಾವಣೆಗೆ ಮುನ್ನ ರಾಜಸ್ಥಾನದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಷಯ ಮಹತ್ವ ಪಡೆದುಕೊಂಡಿದೆ. ಸಿಎಂ ಅಶೋಕ್ ಗೆಹ್ಲೋಟ್ ಅಧಿಕೃತವಾಗಿ ತಾವು ಅಧ್ಯಕ್ಷ ಸ್ಥಾನಕ್ಕೆ ಸ್ಫರ್ಧಿಸುತ್ತಿರುವ ಕುರಿತು ಮಾಹಿತಿ ನೀಡಿದ್ದಾರೆ.
ಈ ಹಿನ್ನೆಲೆ ರಾಜಸ್ಥಾನದಲ್ಲಿ ಕಾಂಗ್ರೆಸ್ ಭಾನುವಾರ ಸಂಜೆ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ನಿವಾಸದಲ್ಲಿ ತನ್ನ ಶಾಸಕಾಂಗ ಪಕ್ಷದ ನಿರ್ಣಾಯಕ ಸಭೆಯನ್ನು ಕರೆದಿದೆ. ಸಭೆಯಲ್ಲಿ ರಾಜ್ಯದಲ್ಲಿ ಸಂಭವನೀಯ ನಾಯಕತ್ವ ಬದಲಾವಣೆಯ ವಿಷಯವನ್ನು ಪ್ರಮುಖವಾಗಿ ಚರ್ಚಿಸಲಾಗುವುದು.
Breaking: ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಗಾಂಧಿ ಕುಟುಂಬದಿಂದ ಯಾರು ಸ್ಪರ್ಧೆಗಿಲ್ಲ!
ಅಶೋಕ್ ಗೆಹ್ಲೋಟ್ ಅವರು ಕಾಂಗ್ರೆಸ್ ಅಧ್ಯಕ್ಷ ಚುನಾವಣೆಗೆ ನಾಮಪತ್ರ ಸಲ್ಲಿಸುವ ಮೊದಲು ಭಾನುವಾರ ಸಭೆ ನಡೆಸಲಾಗುತ್ತಿದೆ. ಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ನೇಮಕ ಮಾಡಿರುವ ವೀಕ್ಷಕ (observer ) ಮಲ್ಲಿಕಾರ್ಜುನ ಖರ್ಗೆ, ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ಅಜಯ್ ಮಾಕನ್ ಇರಲಿದ್ದಾರೆ.
ರಾಜಸ್ಥಾನಕ್ಕೆ ಹೊಸ ಸಿಎಂ ಆಯ್ಕೆ ಸಾಧ್ಯತೆ
ಕಾಂಗ್ರೆಸ್ ಪಕ್ಷದ ಮುಖ್ಯಸ್ಥರಾಗಿ ಗೆಹ್ಲೋಟ್ ಆಯ್ಕೆಯಾದರೆ ರಾಜಸ್ಥಾನ ಸರ್ಕಾರದ ಮುಂದಾಳತ್ವ ಯಾರಿಗೆ ಎಂಬುದು ಸಭೆಯ ಅಜೆಂಡಾದಲ್ಲಿ ಇರಲಿದೆ ಎಂದು ಮೂಲಗಳು ತಿಳಿಸಿವೆ.
ಗೆಹ್ಲೋಟ್ ಪಕ್ಷದ ಉನ್ನತ ಹುದ್ದೆಗೆ ಸ್ಪರ್ಧಿಸಲು ಸಜ್ಜಾಗಿರುವುದರಿಂದ ರಾಜ್ಯದಲ್ಲಿ ನಾಯಕತ್ವ ಬದಲಾವಣೆಗೆ ಕಾಂಗ್ರೆಸ್ ಮುಂದಾದರೆ ಸಚಿನ್ ಪೈಲಟ್ ರಾಜಸ್ಥಾನದ ಮುಖ್ಯಮಂತ್ರಿಯಾಗಲು ಮುಂಚೂಣಿಯಲ್ಲಿದ್ದಾರೆ.
ಈ ಹೊಸ ಮುಖ್ಯಮಂತ್ರಿ ಆಯ್ಕೆ ಬಗ್ಗೆ, ನಾಯಕತ್ವ ಬದಲಾವನೆ ಬಗ್ಗೆ ಭಾನುವಾರ ಸಂಜೆ ಸಭೆ ಬಳಿಕ ಅಧಿಕೃತವಾಗಿ ತಿಳಿಯಲಿದೆ. ಈ ಹಿಂದೆ ರಾಹುಲ್ ಗಾಂಧಿ ಕಾಂಗ್ರೆಸ್ನಲ್ಲಿ ಒಬ್ಬರಿಗೆ ಒಂದೇ ಸ್ಥಾನ ಎಂದು ಹೇಳಿದ್ದರು.
ಸಚಿನ್ ಪೈಲಟ್ ಮುಖ್ಯಮಂತ್ರಿ ಸ್ಥಾನದ ಪ್ರಮುಖ ಸ್ಪರ್ಧಿ
ಅಶೋಕ್ ಗೆಹ್ಲೋಟ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವುದಾದರೆ ಸಚಿನ್ ಪೈಲಟ್ ಮುಖ್ಯಮಂತ್ರಿ ಸ್ಥಾನದ ಪ್ರಮುಖ ಸ್ಪರ್ಧಿ. ಸಚಿನ್ ಪೈಲಟ್ ಶುಕ್ರವಾರ ರಾಜಸ್ಥಾನ ವಿಧಾನಸಭೆ ಸ್ಪೀಕರ್ ಸಿಪಿ ಜೋಶಿ ಅವರನ್ನು ಭೇಟಿಯಾಗಿದ್ದಾರೆ. ಇನ್ನೋಂದು ವಿಚಾರವೆಂದರೇ ಸಿಎಂ ಸ್ಥಾನಕ್ಕೆ ಜೋಶಿ ಅವರ ಹೆಸರು ಕೂಡ ಸುತ್ತಿಕೊಳ್ಳುತ್ತಿದೆ. ಜೋಶಿ ಅವರು ಮಾಜಿ ರಾಜ್ಯ ಕಾಂಗ್ರೆಸ್ ಅಧ್ಯಕ್ಷರು.
ಅಶೋಕ್ ಗೆಹ್ಲೋಟ್ ಅವರು ಅಧ್ಯಕ್ಷ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಖಚಿತಪಡಿಸಿದ್ದಾರೆ. ಹೀಗಾಗಿ ರಾಜಸ್ಥಾನದಲ್ಲಿ ಏನಾಗಲಿದೆ ಎಂಬ ಪ್ರಶ್ನೆಗೆ, ಅವರು ಪಕ್ಷ ಎಲ್ಲವನ್ನೂ ನಿರ್ಧರಿಸುತ್ತದೆ ಎಂದು ಹೇಳಿದರು.
ಸಿಎಂ ಸ್ಥಾನ ಬಿಟ್ಟುಕೊಡಲ್ಲ ಎಂದಿದ್ದ ಗೆಹ್ಲೋಟ್
ಈ ಹಿಂದೆ, ಒಬ್ಬ ವ್ಯಕ್ತಿಯು ಪಕ್ಷದ ಅಧ್ಯಕ್ಷರಾಗಿರುವಾಗ ಮುಖ್ಯಮಂತ್ರಿಯಾಗಿಯೂ ಉಳಿಯಬಹುದು ಎಂದು ಗೆಹ್ಲೋಟ್ ಹೇಳಿದ್ದರು. ಆದರೆ ರಾಹುಲ್ ಗಾಂಧಿ ಒಬ್ಬ ವ್ಯಕ್ತಿಗೆ, ಒಂದು ಹುದ್ದೆ ತತ್ವದ ಪರವಾಗಿ ಸಂದೇಶವನ್ನು ನೀಡಿದ್ದರು.
ಒಬ್ಬ ವ್ಯಕ್ತಿ, ಒಂದು ಹುದ್ದೆಯ ಮೇಲಿನ ಚರ್ಚೆ ಅನಗತ್ಯ ಎಂದು ಗೆಹ್ಲೋಟ್ ಹೇಳಿದ್ದರು. ಅವರು ತಮ್ಮ ತವರು ರಾಜ್ಯ ರಾಜಸ್ಥಾನಕ್ಕೆ ತಮ್ಮ ಜೀವನದುದ್ದಕ್ಕೂ ಸೇವೆ ಸಲ್ಲಿಸಲು ಬಯಸುವುದಾಗಿ ತಿಳಿಸಿದ್ದರು. "ನಾನು ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟುಕೊಡಲು ಬಯಸುವುದಿಲ್ಲ. ನಾನು ಕಾಂಗ್ರೆಸ್ ಅಧ್ಯಕ್ಷ ಚುನಾವಣೆಗೆ ನಾಮಪತ್ರ ಸಲ್ಲಿಸಿದ ನಂತರವೂ ನಾನು ರಾಜಸ್ಥಾನಕ್ಕೆ ಸೇರಿದ್ದೇನೆ ಮತ್ತು ನನ್ನ ಜೀವನದುದ್ದಕ್ಕೂ ನಾನು ರಾಜ್ಯಕ್ಕೆ ಸೇವೆ ಸಲ್ಲಿಸಲು ಬಯಸುತ್ತೇನೆ" ಎಂದಿದ್ದರು.
ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ನಂತರವೂ ಗೆಹ್ಲೋಟ್ ಅವರನ್ನು ಮುಖ್ಯಮಂತ್ರಿಯಾಗಿ ಉಳಿಸಿಕೊಳ್ಳಬಹುದು ಎಂದು ಹಲವಾರು ರಾಜಸ್ಥಾನ ಸಚಿವರು ಈಗಲೂ ತಿಳಿಸಿದ್ದಾರೆ.
ಸಿಎಂ ಸ್ಥಾನಕ್ಕೆ ಸಚಿನ್ ಪೈಲಟ್ ಅತ್ಯುತ್ತಮ ಆಯ್ಕೆ!
ರಾಜಸ್ಥಾನಕ್ಕೆ ಸಚಿನ್ ಪೈಲಟ್ ಮುಖ್ಯಮಂತ್ರಿಯಾಗುವುದರಲ್ಲಿ ನಮಗೆ ಯಾವುದೇ ಸಮಸ್ಯೆ ಇಲ್ಲ ಎಂದು ರಾಜ್ಯದ ಸಚಿವರು ಹೇಳಿದ್ದಾರೆ. ವಾಸ್ತವವಾಗಿ, ಸಚಿನ್ ಪೈಲಟ್ ಅನ್ನು ಕೆಲವು ಮಂತ್ರಿಗಳು 'ಸಿಎಂ ಸ್ಥಾನಕ್ಕೆ ಅತ್ಯುತ್ತಮ ಆಯ್ಕೆ' ಎಂದು ಬಿಂಬಿಸುತ್ತಿದ್ದಾರೆ.
ನಾಯಕತ್ವ ಬದಲಾವಣೆಯ ಪ್ರಶ್ನೆಯನ್ನು ಇಂದೇ ಬಗೆಹರಿಸಿ ನಿರ್ಧಾರ ಕೈಗೊಂಡರೆ, ಗೆಹ್ಲೋಟ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂದಿನ ವಾರ ಅಧ್ಯಕ್ಷ ನಾಮಪತ್ರ ಸಲ್ಲಿಸುವ ಸಾಧ್ಯತೆ ಇದೆ.
ಇತ್ತ, ಕಾಂಗ್ರೆಸ್ನ ಉನ್ನತ ಸ್ಥಾನಕ್ಕಾಗಿ ಗೆಹ್ಲೋಟ್ ಮತ್ತು ಶಶಿ ತರೂರ್ ನಡುವೆ ಹೋರಾಟ ನಡೆಯುತ್ತಿದೆ. ತರೂರ್ ಅವರ ಪ್ರತಿನಿಧಿ ಶನಿವಾರ ನಾಮಪತ್ರಗಳನ್ನು ಸಂಗ್ರಹಿಸಿದ್ದಾರೆ. ಅಕ್ಟೋಬರ್ 17 ರಂದು ಚುನಾವಣೆ ನಡೆಯಲಿದ್ದು, ಅಕ್ಟೋಬರ್ 19 ರಂದು ನೂತನ ಕಾಂಗ್ರೆಸ್ ಮುಖ್ಯಸ್ಥರನ್ನು ಘೋಷಿಸಲಾಗುತ್ತದೆ.