48 ಗಂಟೆ, 8 ಶಿಶುಗಳ ಸಾವು: ಸಿಎಂಗೆ ಪತ್ರ ಬರೆದ ಕೇಂದ್ರ ಸಚಿವರು
ಜೈಪುರ್, ಜನವರಿ.02: ರಾಜಸ್ಥಾನದ ಸರ್ಕಾರಿ ಆಸ್ಪತ್ರೆಗಳಲ್ಲಿ ಪುಟ್ಟ ಕಂದಮ್ಮಗಳ ಸಾವಿನ ಸರಣಿ ಮುಂದುವರಿದಿದೆ. ಕಳೆದ 48 ಗಂಟೆಗಳಲ್ಲೇ 8 ಹಸುಗೂಸುಗಳು ಪ್ರಾಣ ಬಿಟ್ಟಿವೆ. ಡಿಸೆಂಬರ್ ಒಂದೇ ತಿಂಗಳಿನಲ್ಲಿ ಮೃತಪಟ್ಟ ಮಕ್ಕಳ ಸಾವಿನ ಸಂಖ್ಯೆ 100ರ ಗಡಿ ದಾಟಿದೆ.
ಇಷ್ಟೆಲ್ಲಾ ದುರಂತಕ್ಕೆ ಸಾಕ್ಷಿಯಾಗಿದ್ದು ಕೋಟಾ ಜಿಲ್ಲೆಯಲ್ಲಿರುವ ಜೆ.ಕೆ.ಲೋನ ಸರ್ಕಾರಿ ಆಸ್ಪತ್ರೆ. ಅವ್ಯವಸ್ಥೆಗಳ ಆಗರವಾಗಿರುವ ಜಿಲ್ಲೆಯ ಅತಿದೊಡ್ಡ ಆಸ್ಪತ್ರೆಯಲ್ಲಿ ರೋಗಿಗಳ ಜೀವಕ್ಕೆ ಬೆಲೆಯೇ ಇಲ್ಲದಂತೆ ಆಗಿ ಬಿಟ್ಟಿದೆ. ಡಿಸೆಂಬರ್.24ರವರೆಗೆ 77 ಶಿಶುಗಳು ಪ್ರಾಣ ಬಿಟ್ಟಿದ್ದು, ಅಲ್ಲಿಂದ ಇಲ್ಲಿವರೆಗೂ ಮೃತಪಟ್ಟ ಮಕ್ಕಳ ಸಂಖ್ಯೆ ನೂರಕ್ಕೂ ಹೆಚ್ಚಿದೆ.
ಇದು ಆಸ್ಪತ್ರೆಯಲ್ಲ, ಯಮನ ಆಸ್ಥಾನ: ಒಂದೇ ತಿಂಗಳಲ್ಲಿ 100 ಮಕ್ಕಳ ಮರಣ!
ಕಳೆದ ಕೆಲವು ವರ್ಷಗಳ ಅಂಕಿ-ಅಂಶಗಳನ್ನು ಗಮನಿಸಿದಾಗ 2019ರಲ್ಲೇ ಶಿಶು ಮರಣ ಪ್ರಮಾಣದಲ್ಲಿ ಅತಿಹೆಚ್ಚು ಏರಿಕೆಯಾಗಿರುವ ಬಗ್ಗೆ ವರದಿಯಾಗಿದೆ. ಈ ಸಂಬಂಧ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಎಚ್ಚೆತ್ತುಕೊಂಡಿದ್ದಾರೆ.
ಕೇಂದ್ರದಿಂದ ನೆರವಿನ ಭರವಸೆ ನೀಡಿದ ಹರ್ಷವರ್ಧನ್
ಕಳೆದ ಒಂದು ತಿಂಗಳಿನಿಂದ ನಡೆಯುತ್ತಿರುವ ಘಟನೆಗಳ ಕುರಿತು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರಿಗೆ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಪತ್ರ ಬರೆದಿದ್ದಾರೆ. ಕೋಟಾದಲ್ಲಿರುವ ಜೆ.ಕೆ.ಲೋನ ಸರ್ಕಾರಿ ಆಸ್ಪತ್ರೆಗೆ ಮೂಲಭೂತ ಸೌಕರ್ಯ ಒದಗಿಸಲಾಗುತ್ತದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದಿಂದ ಅಗತ್ಯ ನೆರವು ನೀಡಲು ಸಿದ್ಧರಿದ್ದೇವೆ ಎಂದು ತಿಳಿಸಿದ್ದಾರೆ.
2 ದಿನಗಳಲ್ಲಿ ಸಾವಿನ ಮನೆ ಸೇರಿದ್ದು 8 ಕಂದಮ್ಮಗಳು
ಜೆ.ಕೆ.ಲೋನ ಸರ್ಕಾರಿ ಆಸ್ಪತ್ರೆಯಲ್ಲಿ ಮಕ್ಕಳ ಸಾವಿನ ಸರಣಿ ಮುಂದುವರಿದಿದ್ದು, ಕಳೆದ 48 ಗಂಟೆಗಳಲ್ಲಿ 8 ಹಸುಗೂಸುಗಳ ಕಣ್ಮುಚ್ಚಿರುವ ಬಗ್ಗೆ ವರದಿಯಾಗಿದೆ. ಅಪೌಷ್ಠಿಕತೆ, ಲಘೊಷ್ಣತೆಯಿಂದ ಶಿಶುಗಳು ಪ್ರಾಣ ಬಿಟ್ಟಿವೆ ಎಂದು ಆಸ್ಪತ್ರೆಯ ಮಕ್ಕಳ ವಿಭಾಗದ ಮುಖ್ಯಸ್ಥ ಡಾ.ಅಮೃತ್ ಲಾಲ್ ಬೈರ್ವಾ ತಿಳಿಸಿದ್ದಾರೆ. ಡಿಸೆಂಬರ್.30ರಂದು 3 ಹಾಗೂ ಡಿಸೆಂಬರ್.31ರಂದು ಐದು ಮಕ್ಕಳು ಅಸುನೀಗಿವೆ ಎಂದು ತಿಳಿಸಿದ್ದಾರೆ.
"ಅನುದಾನ ನೀಡದ ಬಿಜೆಪಿ ಸರ್ಕಾರ ಈಗ ಟೀಕಿಸುತ್ತಿದೆ"
ರಾಜಸ್ಥಾನದಲ್ಲಿ ಈ ಹಿಂದಿದ್ದ ಬಿಜೆಪಿ ಸರ್ಕಾರ ಆಸ್ಪತ್ರೆಗೆ ಸರಿಯಾದ ರೀತಿಯ ಆರ್ಥಿಕ ನೆರವನ್ನು ನೀಡಿರಲಿಲ್ಲ. ಆದರೆ, ಇಂದು ಮಕ್ಕಳ ಸಾವಿನ ವಿಚಾರದಲ್ಲಿ ರಾಜಕಾರಣ ಮಾಡುತ್ತಿದ್ದಾರೆ ಎಂದು ರಾಜ್ಯ ಆರೋಗ್ಯ ಸಚಿವ ರಘು ಶರ್ಮಾ ಆರೋಪಿಸಿದ್ದಾರೆ. ಕಳೆದ 2015, 2016, 2017ರಲ್ಲಿ ಕೋಟಾ ಆಸ್ಪತ್ರೆಯ ಪ್ರಾಧಿಕಾರವು ಸರ್ಕಾರಕ್ಕೆ ಆರ್ಥಿಕ ನೆರವು ನೀಡುವಂತೆ ಮನವಿ ಮಾಡಿಕೊಂಡಿತು. ಅಂದು ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರವು, ಅದನ್ನು ನಿರ್ಲಕ್ಷಿಸಿದ್ದೆ ಇಷ್ಟಕ್ಕೆಲ್ಲ ಕಾರಣ ಎಂದು ದೂರಿದ್ದಾರೆ. ಅಲ್ಲದೇ ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಶಿಶುಗಳ ಮರಣ ಪ್ರಮಾಣ 7.62ರಷ್ಟಿತ್ತು. ನಮ್ಮ ಸರ್ಕಾರದ ಅವಧಿಯಲ್ಲಿ ಅದನ್ನು 5.5ಕ್ಕೆ ಇಳಿಸಿದ್ದೇವೆ. ತಾಯಿಯ ಮರಣ ಪ್ರಯಾಣದಲ್ಲೂ ಗಣನೀಯ ಇಳಿಕೆ ಕಂಡು ಬಂದಿದೆ ಎಂದು ರಾಜಸ್ಥಾನದ ಆರೋಗ್ಯ ಸಚಿವ ರಘು ಶರ್ಮಾ ತಿಳಿಸಿದ್ದಾರೆ.
ರಾಜಸ್ಥಾನದ ಮುಖ್ಯ ಆರೋಗ್ಯಾಧಿಕಾರಿಗೆ ನೋಟಿಸ್
ಕಳೆದ ಡಿಸೆಂಬರ್ ನಲ್ಲಿ 100ಕ್ಕೂ ಹೆಚ್ಚು ಮಕ್ಕಳು ಜೆ.ಕೆ.ಲೋನ ಆಸ್ಪತ್ರೆಯಲ್ಲಿ ಪ್ರಾಣ ಬಿಟ್ಟಿದ್ದು, 2019ರಲ್ಲಿ ಒಟ್ಟು 940 ಶಿಶುಗಳು ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ರಾಜಸ್ಥಾನದ ಮುಖ್ಯ ಆರೋಗ್ಯಾಧಿಕಾರಿ ಬಿ.ಎಸ್.ತನ್ವೀರ್ ಅವರಿಗೆ ನೋಟಿಸ್ ಜಾರಿಗೊಳಿಸಲಾಗಿದೆ. ಜನವರಿ.3ರಂದು ಆಯೋಗದ ಎದುರು ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ.