ರಾಜಸ್ಥಾನ: ಜಾನುವಾರು ಸಾಗಾಟ- ವ್ಯಕ್ತಿಯನ್ನು ಥಳಿಸಿ ಹತ್ಯೆಗೈದ ಗುಂಪು
ಜೈಪುರ, ಜೂ. 15: ''ರಾಜಸ್ಥಾನದ ಚಿತ್ತೋರ್ಗಢ ಜಿಲ್ಲೆಯಲ್ಲಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಟ್ರಕ್ ಅನ್ನು ಶಂಕಿತ ಗೋ ರಕ್ಷಕರ ಗುಂಪೊಂದು ನಿಲ್ಲಿಸಿ ಹಲ್ಲೆ ನಡೆಸಿದ್ದರಿಂದ ಮಧ್ಯಪ್ರದೇಶದ 25 ವರ್ಷ ವಯಸ್ಸಿನ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ ಮತ್ತು ಇನ್ನೊಬ್ಬ ಗಾಯಗೊಂಡಿದ್ದಾನೆ,'' ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಹೆಚ್ಚುವರಿ ಡಿಜಿಪಿ (ಅಪರಾಧ) ರವಿ ಪ್ರಕಾಶ್ ಮೆಹರ್ದಾ, ''ಜೂನ್ 13 ಮತ್ತು 14 ರ ಮಧ್ಯರಾತ್ರಿ, ಚಿತ್ತೋರಗಢ ಜಿಲ್ಲೆಯ ಇಬ್ಬರು ಮಧ್ಯಪ್ರದೇಶಕ್ಕೆ ಜಾನುವಾರು ಸಾಗಾಟ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಈ ಇಬ್ಬರ ಮೇಲೆ ಹಲ್ಲೆ ನಡೆದಿದ್ದು, ಈ ಪೈಕಿ ಓರ್ವ ವ್ಯಕ್ತಿ ಚಿಕಿತ್ಸೆ ಸಂದರ್ಭ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಕೊಲೆ ಪ್ರಕರಣ ದಾಖಲು ಮಾಡಲಾಗಿದೆ,'' ಎಂದು ಹೇಳಿದ್ದಾರೆ.
ಬಿಜೆಪಿ ಗೋವುಗಳ ರಕ್ಷಣೆ ಮಾಡುವುದಿಲ್ಲ ಎನ್ನುವುದಕ್ಕೆ ತಾಜಾ ಉದಾಹರಣೆ
''ಹಲ್ಲೆಗೊಳಗಾದ ಇಬ್ಬರು ಮಧ್ಯಪ್ರದೇಶದ ಜಬುವಾ ಜಿಲ್ಲೆಯವರಾಗಿದ್ದು, ಕೃಷಿ ಕೆಲಸಕ್ಕಾಗಿ ಎತ್ತುಗಳನ್ನು ಖರೀದಿಸಲು ರಾಜಸ್ಥಾನಕ್ಕೆ ಬಂದಿದ್ದರು,'' ಎಂದು ಪೊಲೀಸರು ತಿಳಿಸಿದ್ದಾರೆ.
''ಮೃತನನ್ನು ಬಾಬು ಭೀಲ್, 25 ಎಂದು ಗುರುತಿಸಲಾಗಿದೆ. ಗಾಯಗೊಂಡ ವ್ಯಕ್ತಿಯನ್ನು ಪಿಂಟು ಭೀಲ್ ಎಂದು ಗುರುತಿಸಲಾಗಿದೆ. ಚಿತ್ತೋರಗಢ ಪೊಲೀಸರು ಸುಮಾರು ಎಂಟು ಜನರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಶೀಘ್ರದಲ್ಲೇ ಆರೋಪಿಗಳನ್ನು ಗುರುತಿಸಿ ಬಂಧಿಸಲಾಗುವುದು,'' ಎಂದು ಡಿಜಿಪಿ ರವಿ ಪ್ರಕಾಶ್ ಮೆಹರ್ದಾ ಹೇಳಿದ್ದಾರೆ.
"ಪ್ರಾಥಮಿಕ ತನಿಖೆಯ ಪ್ರಕಾರ ಗೋ ರಕ್ಷಕರು ಈ ಕೃತ್ಯ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಇಬ್ಬರು ಚಿಟ್ಟೋರ್ಗಢದ ರಾಯ್ಟಾ ಗ್ರಾಮಕ್ಕೆ ಕೃಷಿ ಕಾರ್ಯಕ್ಕೆ ಎತ್ತುಗಳನ್ನು ಖರೀದಿಸಲು ಬಂದಿದ್ದರು. ಖರೀದಿ ಮಾಡಿ ಹಿಂದಿರುಗುವಾಗ ಕತ್ತಲಾಗಿದ್ದು ಈ ಸಂದರ್ಭದಲ್ಲಿ ದಾಳಿ ನಡೆದಿದೆ. ಪೊಲೀಸರು ಬರುವ ಮೊದಲು ಸುಮಾರು ಒಂದು ಗಂಟೆ ಕಾಲ ಇಬ್ಬರಿಗೂ ಕೋಲು ಮತ್ತು ಇತರ ಆಯುಧಗಳಿಂದ ಹಲ್ಲೆ ಮಾಡಿದ್ದಾರೆ. ಪೊಲೀಸರನ್ನು ನೋಡಿ ಓಡಿ ಹೋಗಿದ್ದಾರೆ," ಎಂದು ಚಿತ್ತೋರಗಢದ ಹೆಚ್ಚುವರಿ ಎಸ್ಪಿ ತ್ರಿಪ್ತಿ ವಿಜಯವರ್ಗಿಯಾ ವಿವರಿಸಿದ್ದಾರೆ.
ವೈರಲ್ ವಿಡಿಯೋ; ತೀರ್ಥಹಳ್ಳಿಯಲ್ಲಿ ದನಗಳ್ಳರು ಎಸ್ಕೇಪ್
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಬಾಬು ಮಾವ ಬಗೀರಥ್ ಮೈದಾ, "ಈ ಕುಟುಂಬವು ಎಂಟು ದೊಡ್ಡ ಕೃಷಿ ಭೂಮಿಯನ್ನು ಹೊಂದಿದೆ. ಆದ್ದರಿಂದ ಎರಡು ಎತ್ತುಗಳ ಅಗತ್ಯವಿತ್ತು. ತನ್ನ ಸ್ವಂತ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಬಾಬು, ಹಾಗೆಯೇ ರಾಜಸ್ಥಾನದ ರಾಯ್ಟಾ ಗ್ರಾಮದ ಹೊಲಗಳಲ್ಲಿಯೂ 150 ರಿಂದ 200 ರೂ. ಹಣಕ್ಕೆ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದನು," ಎಂದು ತಿಳಿಸಿದ್ದಾರೆ.
"ನಾವು ಆತನಿಗೆ ಭಾನುವಾರ ರಾತ್ರಿ ಕರೆ ಮಾಡಲು ಪ್ರಯತ್ನಿಸಿದೆವು. ಆದರೆ ಅವರ ಸೆಲ್ ಫೋನ್ ಸ್ವಿಚ್ ಆಫ್ ಆಗಿತ್ತು. ಸೋಮವಾರವೇ ಅವರು ಮೃತಪಟ್ಟಿದ್ದಾರೆ ಎಂದು ನಮಗೆ ಪೊಲೀಸರಿಂದ ತಿಳಿದುಬಂದಿದೆ," ಎಂದಿದ್ದಾರೆ.
(ಒನ್ಇಂಡಿಯಾ ಸುದ್ದಿ)