ನನಗೆ ಜಾತಿ ಮೊದಲು, ಸಮಾಜ ಆಮೇಲೆ ಎಂದ ಕಾಂಗ್ರೆಸ್ ಸಚಿವೆ
ಜೈಪುರ್, ಜನವರಿ 1: ನನ್ನ ಜಾತಿಗೆ ಸೇರಿದ ಜನರ ಅಭಿವೃದ್ಧಿಗೆ ಕೆಲಸ ಮಾಡುವುದು ಆದ್ಯತೆಯ ಕೆಲಸ. ಆ ನಂತರ ಉಳಿದ ಜಾತಿಗಳಿಗಾಗಿ. ಒಟ್ಟಿನಲ್ಲಿ ಎಲ್ಲರಿಗಾಗಿಯೂ ಕೆಲಸ ಮಾಡುತ್ತೇನೆ ಎಂದು ರಾಜಸ್ತಾನದ ಕಾಂಗ್ರೆಸ್ ನೇತೃತ್ವದ ಸರಕಾರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಆಗಿರುವ ಮಮತಾ ಭೂಪೇಶ್ ಹೇಳಿದ್ದಾರೆ.
ಜಾತಿ, ಜಾತಿ, ಜಾತಿ... ರಾಜಸ್ಥಾನ ರಾಜಕೀಯದ ಮೂಲಮಂತ್ರ!
ರಾಜಸ್ತಾನದ ಆಳ್ವಾರ್ ಜಿಲ್ಲೆಯಲ್ಲಿರುವ ರೇಣಿಯಲ್ಲಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನನ್ನ ಜಾತಿಗೆ ಸೇರಿದವರು ಏಳ್ಗೆಗಾಗಿ ದುಡಿಯುವುದೇ ಮೊದಲ ಆದ್ಯತೆ ಎಂದು ಹೇಳಿದ್ದಾರೆ. ಈ ಹೇಳಿಕೆ ಬಂದ ನಂತರ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಇದರ ಜತೆಗೆ ಜಾತಿ ಆಧಾರದ ರಾಜಕಾರಣಕ್ಕೆ ಆಕ್ಷೇಪ ಕೇಳಿಬರುತ್ತಿದೆ.
ಡಿಸೆಂಬರ್ ಹದಿನೇಳನೇ ತಾರೀಕು ಅಶೋಕ್ ಗೆಹ್ಲೋಟ್ ಇಲ್ಲಿನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಕಾಂಗ್ರೆಸ್ ತೊಂಬತ್ತೊಂಬತ್ತು ಕ್ಷೇತ್ರಗಳಲ್ಲಿ ವಿಜಯಿಯಾದರೆ, ಬಿಜೆಪಿ ಎಪ್ಪತ್ಮೂರು ಸ್ಥಾನ ಪಡೆದಿತ್ತು. ಆರು ಸದಸ್ಯತ್ವ ಬಲದ ಬಹುಜನ ಸಮಾಜ ಪಕ್ಷದ ಬೆಂಬಲದೊಂದಿಗೆ ರಾಜಸ್ತಾನದಲ್ಲಿ ಕಾಂಗ್ರೆಸ್ ಅಧಿಕಾರದ ಗದ್ದುಗೆಗೆ ಏರಿದೆ.