ವಿಚಾರಣೆಗೆ ಬರ್ತೀರಾ? ಇಲ್ಲಾ ಜಾಮೀನು ರದ್ದು ಮಾಡೋದಾ?: ಸಲ್ಲುಗೆ ಕೋರ್ಟ್ ಎಚ್ಚರಿಕೆ
ಜೈಪುರ, ಜುಲೈ 5: ಕೃಷ್ಣಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನಿನ ಮೇಲೆ ಹೊರಗಿರುವ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನು ಜೋಧಪುರ ಸೆಷನ್ಸ್ ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿದೆ.
ವಿಚಾರಣೆಗೆ ಪದೇ ಪದೇ ಗೈರು ಹಾಜರಾಗುತ್ತಿರುವ ಸಲ್ಮಾನ್ ಖಾನ್ ಅವರು ವಿಚಾರಣೆಗೆ ಹಾಜರಾಗದೆ ಇದ್ದರೆ ಜಾಮೀನು ರದ್ದು ಮಾಡಬೇಕಾಗುತ್ತದೆ ಎಂದು ನ್ಯಾಯಾಲಯ ಎಚ್ಚರಿಕೆ ನೀಡಿದೆ.
ಕೃಷ್ಣಮೃಗ ಹತ್ಯೆ ಪ್ರಕರಣ: ಸಲ್ಮಾನ್ ಖಾನ್ ಗೆ ಮತ್ತೆ ನೆಮ್ಮದಿ ಸುದ್ದಿ
1998ರಲ್ಲಿ ನಡೆದ ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಜಾಮೀನು ಪಡೆದುಕೊಂಡಿರುವ ಸಲ್ಮಾನ್ ಖಾನ್ ವಿಚಾರಣೆಗೆ ನಿರಂತರವಾಗಿ ಗೈರಾಗುತ್ತಿದ್ದಾರೆ. ಇದಕ್ಕೆ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದರೆ.
ಗುರುವಾರ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಚಂದ್ರಕುಮಾರ್ ಸೊಂಗಾರ ಅವರು ಮುಂದಿನ ವಿಚಾರಣೆಗೆ ಸಲ್ಮಾನ್ ಖಾನ್ ಖುದ್ದಾಗಿ ಹಾಜರಾಗಬೇಕು. ಇಲ್ಲದಿದ್ದರೆ ಅವರಿಗೆ ನೀಡಲಾಗಿರುವ ಜಾಮೀನು ರದ್ದುಗೊಳಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ತಬು, ಸೈಫ್, ನೀಲಂ, ಸೋನಾಲಿಗೆ ಕೋರ್ಟಿನಿಂದ ನೋಟಿಸ್
ಸಲ್ಮಾನ್ ಖಾನ್ ಅವರು ನ್ಯಾಯಾಲಯಕ್ಕೆ ಖುದ್ದು ಹಾಜರಾಗುವುದರಿಂದ ತಾತ್ಕಾಲಿಕ ವಿನಾಯಿತಿ ನೀಡಲಾಗಿತ್ತು. ಆದರೆ, ಸಲ್ಮಾನ್ ಪರ ವಕೀಲರು ಪದೇ ಪದೇ ವಿನಾಯಿತಿ ಕೇಳುತ್ತಿದ್ದಾರೆ. ಇದಕ್ಕೆ ನಾವು ತಕರಾರು ಸಲ್ಲಿಸಿದ್ದೇವೆ. ಅದಕ್ಕೆ ನ್ಯಾಯಾಲಯ ಸಹಮತ ವ್ಯಕ್ತಪಡಿಸಿದ್ದು, ಖುದ್ದಾಗಿ ಹಾಜರಾಗುವಂತೆ ನ್ಯಾಯಾಲಯ ಸಲ್ಮಾನ್ ಖಾನ್ ಅವರಿಗೆ ಸೂಚನೆ ನೀಡಿದೆ ಎಂದು ಪ್ರಾಸಿಕ್ಯೂಟರ್ ಮಹಿಪಾಲ್ ಬಿಷ್ಣೋಯ್ ತಿಳಿಸಿದ್ದಾರೆ.
ವನ್ಯಜೀವಿ ಅಪರಾಧ: ಕುಖ್ಯಾತರ ಪಟ್ಟಿಯಲ್ಲಿ ಸಲ್ಮಾನ್ ಖಾನ್ ಹೆಸರು!
1998ರ ಏಪ್ರಿಲ್ 5ರಂದು ಜೋಧಪುರದಲ್ಲಿ 'ಹಮ್ ಸಾಥ್ ಸಾಥ್ ಹೈ' ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ಕೃಷ್ಣಮೃಗಗಳನ್ನು ಬೇಟೆಯಾಡಿದ ಪ್ರಕರಣದಲ್ಲಿ ಸಲ್ಮಾನ್ ಖಾನ್ ಅವರಿಗೆ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. ಜೋಧಪುರ ಜೈಲಿನಲ್ಲಿ ಎರಡು ರಾತ್ರಿ ಕಳೆದಿದ್ದ ಅವರಿಗೆ ಜಾಮೀನು ಸಿಕ್ಕಿತ್ತು.
ಸಲ್ಮಾನ್ ಅವರೊಂದಿಗೆ ನಟರಾದ ಸೈಫ್ ಅಲಿಖಾನ್, ಸೊನಾಲಿ ಬೇಂದ್ರೆ, ನೀಲಂ ಕೊಠಾರಿ ಮತ್ತು ಟಬು ಹಾಗೂ ಅವರ ಜತೆಗಿದ್ದ ದುಷ್ಯಂತ್ ಸಿಂಗ್ ಅವರ ಮೇಲೆಯೂ ಆರೋಪವಿತ್ತು. ಆದರೆ, ಸಾಕ್ಷ್ಯದ ಕೊರತೆಯಿಂದ ಅವರು ಖುಲಾಸೆಗೊಂಡಿದ್ದಾರೆ.