ಗೆಹ್ಲೋಟ್ ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆದ ಮಿತ್ರ ಪಕ್ಷ!
ಜೈಪುರ, ಜುಲೈ 13 : ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ನೀಡಿರುವ ಬೆಂಬಲ ವಾಪಸ್ ಪಡೆಯುವುದಾಗಿ ಪ್ರಾದೇಶಿಕ ಪಕ್ಷವೊಂದು ಘೋಷಣೆ ಮಾಡಿದೆ. ಸಚಿನ್ ಪೈಲೆಟ್ ಈಗಾಗಲೇ ಪಕ್ಷದ ನಾಯಕರ ಜೊತೆ ಮುನಿಸಿಕೊಂಡಿದ್ದು ದೊಡ್ಡ ಸುದ್ದಿಯಾಗಿದೆ.
ಸೋಮವಾರ ಭಾರತೀಯ ಟ್ರೈಬಲ್ ಪಾರ್ಟಿಯು ಕಾಂಗ್ರೆಸ್ ಸರ್ಕಾರಕ್ಕೆ ನೀಡಿರುವ ಬೆಂಬಲ ವಾಪಸ್ ಪಡೆಯುವುದಾಗಿ ಘೋಷಣೆ ಮಾಡಿದೆ. ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ಸಂದರ್ಭ ಬಂದರೆ ತಟಸ್ಥವಾಗಿರುತ್ತೇವೆ ಎಂದು ಪಕ್ಷದ ನಾಯಕ ಮಹೇಶ್ ಭಾಯ್ ವಾಸವ ಹೇಳಿದ್ದಾರೆ.
ರಾಜಸ್ಥಾನ ಕಾಂಗ್ರೆಸ್ ಬಿಕ್ಕಟ್ಟು; ಸಚಿನ್ ಪೈಲೆಟ್ 3 ಬೇಡಿಕೆಗಳು
ರಾಜಸ್ಥಾನದ ಕಾಂಗ್ರೆಸ್ ಸರ್ಕಾರಕ್ಕೆ ಇಬ್ಬರು ಶಾಸಕರನ್ನು ಹೊಂದಿರುವ ಭಾರತೀಯ ಟ್ರೈಬಲ್ ಪಾರ್ಟಿ ಬೆಂಬಲ ನೀಡಿತ್ತು. ವಿಶ್ವಾಸಮತ ಯಾಚನೆ ವೇಳೆ ಗೈರಾಗಲಿದ್ದೇವೆ ಎಂದು ಮಹೇಶ್ ಭಾಯ್ ವಾಸವ ಹೇಳಿದ್ದು ಕುತೂಹಲಕ್ಕೆ ಕಾರಣವಾಗಿದೆ.
ರಾಜಸ್ಥಾನ ಕಾಂಗ್ರೆಸ್ ಬಿಕ್ಕಟ್ಟು; ರಾಹುಲ್ ಭೇಟಿಗೆ ನಿರಾಕರಿಸಿದ ಸಚಿನ್!
ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವಿರುದ್ಧ ಉಪ ಮುಖ್ಯಮಂತ್ರಿ ಸಚಿನ್ ಪೈಲೆಟ್ ಅಸಮಾಧಾನಗೊಂಡಿದ್ದು ಆಪ್ತ ಶಾಸಕರ ಜೊತೆ ದೆಹಲಿಯಲ್ಲಿದ್ದಾರೆ. ಸೋಮವಾರ ಅವರು ರಾಹುಲ್ ಗಾಂಧಿ ಭೇಟಿ ಮಾಡಲು ನಿರಾಕರಿಸಿದ ಬಗ್ಗೆ ಭಾರೀ ಚರ್ಚೆ ನಡೆದಿದೆ.
ರಾಜಸ್ಥಾನ ಸಿಎಂ ಆಪ್ತರ ಮನೆ, ಕಚೇರಿ ಮೇಲೆ ಐಟಿ ದಾಳಿ
ಸಚಿನ್ ಪೈಲೆಟ್ ಕಾಂಗ್ರೆಸ್ ಪಕ್ಷ ತೊರೆಯುವುದಿಲ್ಲ ಎಂದು ಅವರ ಆಪ್ತ ಶಾಸಕರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಆದರೆ, ಅಶೋಕ್ ಗೆಹ್ಲೋಟ್ ಮುಂದೆ ಸಚಿನ್ ಪೈಲೆಟ್ ಬಣ ಮೂರು ಬೇಡಿಕೆಗಳನ್ನು ಇಟ್ಟಿದೆ. ರಾಜಸ್ಥಾನ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ತಮಗೆ ನೀಡಬೇಕು ಎಂದು ಸಚಿನ್ ಪೈಲೆಟ್ ಕೇಳಿದ್ದಾರೆ.
ತಮ್ಮ ಬೆಂಬಲಕ್ಕೆ 30 ಶಾಸಕರು ಇದ್ದಾರೆ ಎಂದು ಸಚಿನ್ ಪೈಲೆಟ್ ಹೇಳಿದ್ದಾರೆ. ಆದರೆ, ಸೋಮವಾರ ಅಶೋಕ್ ಗೆಹ್ಲೋಟ್ ಕರೆದಿದ್ದ ಸಿಎಲ್ಪಿ ಸಭೆಗೆ 96 ಶಾಸಕರು ಹಾಜರಾಗಿದ್ದರು. ಸಚಿನ್ ಪೈಲೆಟ್ ಜೊತೆ 12 ಶಾಸಕರು ಇದ್ದಾರೆ ಎಂದು ಕಾಂಗ್ರೆಸ್ ಹೇಳುತ್ತಿದೆ.