ರಾಜಸ್ಥಾನದಲ್ಲಿ ಬಿಎಸ್ಪಿ, ಕಾಂಗ್ರೆಸ್ ವಿಲೀನ; ಶಾಸಕರಿಗೆ ನೋಟಿಸ್
ಜೈಪುರ, ಜುಲೈ 30 : ರಾಜಸ್ಥಾನದಲ್ಲಿ ಬಿಎಸ್ಪಿ ಶಾಸಕರು ಕಾಂಗ್ರೆಸ್ ಜೊತೆ ವಿಲೀನಗೊಂಡಿರುವುದನ್ನು ಬಿಜೆಪಿ ಹೈಕೋರ್ಟ್ನಲ್ಲಿ ಪ್ರಶ್ನೆ ಮಾಡಿದೆ. ಹೈಕೋರ್ಟ್ ಸ್ಪೀಕರ್ ಮತ್ತು 6 ಬಿಎಸ್ಪಿ ಶಾಸಕರಿಗೆ ನೋಟಿಸ್ ಜಾರಿ ಮಾಡಿದೆ. ಆಗಸ್ಟ್ 11ಕ್ಕೆ ವಿಚಾರಣೆ ಮುಂದೂಡಿದೆ.
ಕಾಂಗ್ರೆಸ್ನೊಂದಿಗೆ ಬಿಎಸ್ಪಿ ಶಾಸಕರು ವಿಲೀನಗೊಂಡಿರುವುದನ್ನು ಮದನ್ ದಿಲ್ವಾರ್ ಎಂಬ ಬಿಜೆಪಿ ಶಾಸಕರು ಹೈಕೋರ್ಟ್ನಲ್ಲಿ ಪ್ರಶ್ನೆ ಮಾಡಿದ್ದಾರೆ. ಇದೇ ವಿಚಾರದಲ್ಲಿ ಮತ್ತೊಬ್ಬ ಬಿಜೆಪಿ ಶಾಸಕರು ಸಲ್ಲಿಸಿದ್ದ ಅರ್ಜಿಯನ್ನು ರಾಜಸ್ಥಾನ ಹೈಕೋರ್ಟ್ ಸೋಮವಾರ ವಜಾಗೊಳಿಸಿತ್ತು.
ರಾಜಸ್ಥಾನ ಬಿಜೆಪಿಗೆ ಸಂಕಷ್ಟ ತಂದ ಬಿಎಸ್ಪಿ ವಿಲೀನ!
ಗುರುವಾರ ಹೈಕೋರ್ಟ್ ರಾಜಸ್ಥಾನ ಸ್ಪೀಕರ್, ವಿಧಾನಸಭೆ ಕಾರ್ಯದರ್ಶಿ ಮತ್ತು 6 ಬಿಎಸ್ಪಿ ಶಾಸಕರಿಗೆ ನೋಟಿಸ್ ನೀಡಿದೆ. ಆಗಸ್ಟ್ 11ರೊಳಗೆ ನ್ಯಾಯಾಲಯಕ್ಕೆ ಉತ್ತರ ನೀಡಬೇಕು ಎಂದು ನೋಟಿಸ್ನಲ್ಲಿ ತಿಳಿಸಲಾಗಿದೆ.
ಬಿಎಸ್ಪಿ, ಕಾಂಗ್ರೆಸ್ ವಿಲೀನ; ಮಾಯಾವತಿ ಹೇಳುವುದೇನು?
ಕಾಂಗ್ರೆಸ್ ಜೊತೆ ವಿಲೀನವಾಗಿದ್ದೇವೆ ಎಂದು ಹೇಳಿಕೊಳ್ಳುವ ಬಿಎಸ್ಪಿ ಶಾಸಕರನ್ನು ಸದಸ್ಯ ಸ್ಥಾನದಿಂದ ವಜಾಗೊಳಿಸಬೇಕು ಎಂದು ಅರ್ಜಿಯಲ್ಲಿ ಬಿಜೆಪಿ ಮನವಿ ಮಾಡಿದೆ. ಬಿಎಸ್ಪಿ ಸಹ ಈ ವಿಲೀನವನ್ನು ವಿರೋಧಿಸುತ್ತಿದೆ.
ರಾಜಸ್ಥಾನ ಬಿಕ್ಕಟ್ಟು; ಸಂವಿಧಾನ ಮತ್ತು ಪಕ್ಷಾಂತರ ನಿಷೇಧ ಕಾಯ್ದೆ
ಶಾಸಕರು ಕಾಂಗ್ರೆಸ್ ಜೊತೆ ವಿಲೀನ
ರಾಜಸ್ಥಾನದಲ್ಲಿ 2019ರ ಸೆಪ್ಟೆಂಬರ್ನಲ್ಲಿ ವಿಧಾನಸಭೆ ಚುನಾವಣೆ ಮುಗಿಯಿತು. ಬಳಿಕ ಬಿಎಸ್ಪಿ ಚಿನ್ಹೆಯಿಂದ ಶಾಸಕರಾಗಿ ಆಯ್ಕೆಯಾದ 6 ಜನರು ನಾವು ಕಾಂಗ್ರೆಸ್ ಪಕ್ಷದ ಜೊತೆ ವಿಲೀನವಾಗಿದ್ದೇವೆ ಎಂದು ಘೋಷಣೆ ಮಾಡಿದರು. ಸ್ಪೀಕರ್ ಸಹ ಇದಕ್ಕೆ ಒಪ್ಪಿಗೆ ನೀಡಿದ್ದಾರೆ.
ಬಿಎಸ್ಪಿ ಈ ವಿಲೀನಕ್ಕೆ ಒಪ್ಪಿಲ್ಲ
ರಾಷ್ಟ್ರೀಯ ಪಕ್ಷವಾದ ಬಿಎಸ್ಪಿ ಈ ವಿಲೀನಕ್ಕೆ ಒಪ್ಪಿಗೆ ನೀಡಿಲ್ಲ. ಶಾಸಕರು ರಾಜ್ಯಮಟ್ಟದಲ್ಲಿ ಈ ಬಗ್ಗೆ ತೀರ್ಮಾನ ಕೈಗೊಂಡಿದ್ದಾರೆ. ಬಿಎಸ್ಪಿ ಈ ಕುರಿತು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ. ಇದರ ವಿಚಾರಣೆ ಮುಗಿದಿದ್ದು, ತೀರ್ಪು ಇನ್ನೂ ಪ್ರಕಟಗೊಂಡಿಲ್ಲ.
ಸದಸ್ಯತ್ವ ರದ್ದು ಮಾಡುವ ಎಚ್ಚರಿಕೆ
ಬಿಎಸ್ಪಿ, ಕಾಂಗ್ರೆಸ್ ವಿಲೀನದ ಬಗ್ಗೆ ಬಿಎಸ್ಪಿ ವರಿಷ್ಠೆ ಮಾಯಾವತಿ ಪ್ರತಿಕ್ರಿಯೆ ಕೊಟ್ಟಿದ್ದಾರೆ. "ರಾಜಸ್ಥಾನ ವಿಧಾನಸಭೆಯಲ್ಲಿ ವಿಶ್ವಾಸಮತಯಾಚನೆ ನಡೆದರೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಮತದಾನ ಮಾಡುವಂತೆ 6 ಶಾಸಕರಿಗೆ ನಾವು ಸೂಚನೆ ನೀಡಿದ್ದೇವೆ. ಅವರು ಹಾಗೆ ಮಾಡದಿದ್ದಲ್ಲಿ ಅವರ ಪಕ್ಷದ ಸದಸ್ಯತ್ವ ರದ್ದಾಗಲಿದೆ" ಎಂದು ಹೇಳಿದ್ದಾರೆ.
ಆಗಸ್ಟ್ 14ರಿಂದ ಅಧಿವೇಶನ ಆರಂಭ
ಆಗಸ್ಟ್ 14ರಿಂದ ರಾಜಸ್ಥಾನ ವಿಧಾನಸಭೆ ಅಧಿವೇಶನ ನಡೆಯಲಿದೆ. ಸದನದಲ್ಲಿ ವಿಶ್ವಾಸಮತಯಾಚನೆ ಆರಂಭವಾದರೆ ಶಾಸಕರು ಯಾರ ಪರವಾಗಿ ಮತದಾನ ಮಾಡಲಿದ್ದಾರೆ? ಎಂದು ಕಾದು ನೋಡಬೇಕು.