'ವಂಚಕರು' ಕಾಂಗ್ರೆಸ್ ಸೇರಿದ ಶಾಸಕರಿಗೆ ಮಾಯಾವತಿ ಛೀಮಾರಿ
ಜೈಪುರ, ಸೆಪ್ಟೆಂಬರ್ 17: ರಾಜಸ್ಥಾನದಲ್ಲಿ ಕಾಂಗ್ರೆಸ್ ಗೆ ಬೆಂಬಲ ನೀಡಿದ್ದ ಆರು ಬಿಎಸ್ಪಿ ಶಾಸಕರು ಇದ್ದಕ್ಕಿದ್ದಂತೇ ಪಕ್ಷಕ್ಕೆ ಗುಡ್ ಬೈ ಹೇಳಿ ಕಾಂಗ್ರೆಸ್ ಗೆ ಸೇರಿರುವುದನ್ನು 'ಮೋಸ' ಎಂದು ಮಾಯಾವತಿ ಜರೆದಿದ್ದಾರೆ.
ಬಹುಜನ ಸಮಾಜ ಪಕ್ಷದ ರಾಜೇಂದ್ರ ಗುಡ್ಡ್, ಜೋಗೇಂದ್ರ ಸಿಂಗ್ ಅವಾನಾ, ವಾಝಿಬ್ ಅಲಿ, ಲಖನ್ ಸಿಂಗ್ ಮೀನಾ, ಸಂದೀಪ್ ಯಾದವ್ ಮತ್ತು ದೀಪಕ್ ಖೇರಿಯಾ ಅವರು ಸೋಮವಾರ ಕಾಂಗ್ರೆಸ್ ಸೇರಿದ್ದಾರೆ.
ರಾಜಸ್ಥಾನದಲ್ಲಿ ಮಾಯಾವತಿಗೆ ಬಿಗ್ ಶಾಕ್: ಕಾಂಗ್ರೆಸ್ ಸೇರಿದ 6 ಶಾಸಕರು
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಪಕ್ಷದ ಅಧ್ಯಕ್ಷೆ ಮಾಯಾವತಿ, "ಬಿಎಸ್ಪಿಯಲ್ಲಿ ಒಡಕು ಮೂಡಿಸಿ, ನಮ್ಮ ಶಾಸಕರನ್ನು ಸೆಳೆದುಕೊಂಡ ಕಾಂಗ್ರೆಸ್, ತಾನು ಎಂದಿಗೂ ನಂಬಿಕೆಗೆ ಅರ್ಹವಾದ ಪಕ್ಷವಲ್ಲ ಎಂಬುದನ್ನು ಸಾಬೀತುಪಡಿಸಿದೆ. ಈ ಮೂಲಕ ನಮಗೆ ಮೋಸ ಮಾಡಲಾಗಿದೆ" ಎಂದು ಮಾಯಾವತಿ ಕಿಡಿಕಾರಿದ್ದಾರೆ.
"ಕಾಂಗ್ರೆಸ್ ನ ಬುದ್ದಿಯೇ ಅಷ್ಟು. ಅದು ತನ್ನ ವಿರೋಧಿಗಳೊಂದಿಗೆ ಸೆಣಸಾಡುವುದಕ್ಕಿಂತ ಹೆಚ್ಚಾಗಿ ತನಗೆ ಬೆಂಬಲ ನೀಡುವವರೊಂದಿಗೇ ಸೆಣಸಾಡುತ್ತದೆ" ಎಂದು ಮಾಯಾವತಿ ಲೇವಡಿ ಮಾಡಿದ್ದಾರೆ.
"ಕಾಂಗ್ರೆಸ್ ಎಮದಿಗೂ ಅಂಬೇಡ್ಕರ್ ಅವರ ಮತ್ತು ಅವರ ತತ್ತ್ವಗಳ ವಿರೋಧಿ. ಅದಕ್ಕಾಗಿಯೇ ದೇಶದ ಮೊದಲ ಕಾನೂನು ಸಚಿವರಾಗಿದ್ದ ಅಂಬೇಡ್ಕರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವಂತಾಗಿದ್ದು! ಅವರಿಗೆ ಭಾರತ ರತ್ನ ಕೊಡುವ ಕೆಲಸವನ್ನೂ ಕಾಂಗ್ರೆಸ್ ಮಾಡಲಿಲ್ಲ ಎಂಬುದು ಶೋಚನೀಯ ಮತ್ತು ನಾಚಿಕೆಗೇಡಿನ ವಿಚಾರ" ಎಮದು ಮಾಯಾವತಿ ಟ್ವೀಟ್ ಮಾಡಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ರಾಜಸ್ಥಾನ ಸರ್ಕಾರಕ್ಕೆ ಕಂಟಕ? ಮಾಯಾವತಿ ಆಟ ಬಲ್ಲವರ್ಯಾರು?!
ಇದೇ ನವೆಂಬರ್ ನಲ್ಲಿ ನಡೆಯಲಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಸಂದರ್ಭದಲ್ಲಿ ನಡೆದ ಈ ಬೆಳವಣಿಗೆ ಬಿಎಸ್ಪಿಗೆ ಭಾರೀ ಆಘಾತವನ್ನುಂತು ಮಾಡಿದೆ.