ಲಂಚ: ಶಿಕ್ಷಕರ ಸಭೆಯಲ್ಲಿ ಕೇಳಬಾರದ ಪಶ್ನೆ ಕೇಳಿ ಕಕ್ಕಾಬಿಕ್ಕಿಯಾದ ಮುಖ್ಯಮಂತ್ರಿ
ಜೈಪುರ, ನ 17: ಶಿಕ್ಷಕರ ಸನ್ಮಾನ ಕಾರ್ಯಕ್ರಮದಲ್ಲಿ ಪ್ರಶ್ನೆಯೊಂದನ್ನು ಕೇಳಿ, ಅದಕ್ಕೆ ಬಂದ ಉತ್ತರದಿಂದ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ತೀವ್ರ ಮುಜುಗರಕ್ಕೊಳಗಾದ ಘಟನೆ ಜೈಪುರದಲ್ಲಿ ನಡೆದಿದೆ.
ಮಂಗಳವಾರ (ನ 16) ರಾಜಧಾನಿಯ ಬಿ.ಎಂ.ಬಿರ್ಲಾ ಆಡಿಟೋರಿಯಂನಲ್ಲಿ ಸರಕಾರೀ ಶಾಲೆಯ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮವನ್ನು ರಾಜ್ಯ ಪ್ರಾಥಮಿಕ ಶಿಕ್ಷಣ ಇಲಾಖೆ ಆಯೋಜಿಸಿತ್ತು. ಆ ಕಾರ್ಯಕ್ರಮದಲ್ಲಿ ಸಿಎಂ ಗೆಹ್ಲೋಟ್, ಶಿಕ್ಷಣ ಸಚಿವ ಗೋವಿಂದ್ ಸಿಂಗ್ ದೋತಾಸ್ತ್ರ ಕೂಡಾ ಪಾಲ್ಗೊಂಡಿದ್ದರು.
ನ.16 ಮಧ್ಯರಾತ್ರಿಯಿಂದ ಈ ರಾಜ್ಯದಲ್ಲಿ ಇಂಧನ ದರ ಇಳಿಕೆ
ಕಾರ್ಯಕ್ರಮದಲ್ಲಿ ಮಾತಾನಾಡುತ್ತಾ ಗೆಹ್ಲೋಟ್, "ರಾಜ್ಯದಲ್ಲಿ ಶಿಕ್ಷಕರು ತಮ್ಮ ವರ್ಗಾವಣೆಗೆ ಮತ್ತು ಹೊಸ ಪೋಸ್ಟಿಂಗಿಗೆ ಲಂಚ ಕೊಡಬೇಕೇ"ಎನ್ನುವ ಪ್ರಶ್ನೆಯನ್ನು ಶಿಕ್ಷಕರಿಗೆ ಕೇಳಿದ್ದಾರೆ. ಆಗ ಎಲ್ಲಾ ಶಿಕ್ಷಕರು "ಹೌದು, ರಾಜ್ಯದಲ್ಲಿ ಲಂಚ ಕೊಡುವ ಪರಿಸ್ಥಿತಿಯಿದೆ"ಎಂದು ಒಕ್ಕೂರಿಲಿನಿಂದ ಹೇಳಿದ್ದಾರೆ. ಇದರಿಂದ ಸಿಎಂ ತೀವ್ರ ಮುಜುಗರಕ್ಕೊಳಗಾಗಿದ್ದಾರೆ.
ತಮ್ಮ ಆಡಳಿತದಲ್ಲಿ ಲಂಚಾವತಾರವಿದೆ ಎನ್ನುವುದು ಬಹಿರಂಗವಾದ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಗೆಹ್ಲೋಟ್ ಅವರಿಗೆ ಸ್ವಲ್ಪ ಹೊತ್ತು ಮಾತೇ ಹೊರಡದಂತಾಗಿದೆ. ಸ್ವಲ್ಪಹೊತ್ತು ಸುಮ್ಮನೆ ಮೈಕ್ ಮುಂದೆ ನಿಂತ ಸಿಎಂ, ಸುಧಾರಿಸಿಕೊಂಡು ಸಮಜಾಯಿಶಿ ನೀಡುವ ಹೇಳಿಕೆಯನ್ನು ನೀಡಿದ್ದಾರೆ.
"ನಮ್ಮ ರಾಜ್ಯದಲ್ಲಿ ಇಂತಹ ಪರಿಸ್ಥಿತಿ ಇರುವುದು ದುರದೃಷ್ಟಕರ, ಶಿಕ್ಷಕರ ವರ್ಗಾವಣೆ, ಹೊಸ ಪೋಸ್ಟಿಂಗ್ ವಿಚಾರದಲ್ಲಿ ಆಮೂಲಾಗ್ರ ಬದಲಾವಣೆ ಆಗಬೇಕಾಗಿದೆ"ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ತೇಪೆ ಹಚ್ಚುವ ಹೇಳಿಕೆಯನ್ನು ನೀಡಿದ್ದಾರೆ.
"ಅಶೋಕ್ ಗೆಹ್ಲೋಟ್ ಸರಕಾರದಲ್ಲಿ ಲಂಚ ತಾಂಡವಾಡುತ್ತಿದೆ, ಪ್ರತೀ ಇಲಾಖೆಯಲ್ಲೂ ಕೆಲಸ ಆಗಬೇಕಾದರೆ ಲಂಚ ನೀಡಲೇ ಬೇಕಾಗಿದೆ. ಲಂಚ ಎನ್ನುವುದು ಸರಕಾರೀ ಕಚೇರಿಯಲ್ಲಿ ಅಧಿಕೃತ ಎನ್ನುವಂತೆ ರಾಜಾರೋಷವಾಗಿ ನಡೆಯುತ್ತಿದೆ"ಎಂದು ರಾಜಸ್ಥಾನ ಬಿಜೆಪಿ ಘಟಕದ ರಾಜ್ಯಾಧ್ಯಕ್ಷ ಸತೀಶ್ ಪೂನಿಯಾ ಒಂದು ದಿನದ ಹಿಂದೆ ಹೇಳಿದ್ದರು.