ಕೈ ಪಕ್ಷಕ್ಕೆ ಬೇಡವಾದ ಸಚಿನ್ ಗೆ ಕಮಲ ಪಕ್ಷದಿಂದ ಮುಕ್ತ ಆಹ್ವಾನ!
ಜೈಪುರ, ಜುಲೈ 14: ರಾಜಸ್ಥಾನದಲ್ಲಿ ಬಂಡಾಯವೆದ್ದಿರುವ ಸಚಿನ್ ಪೈಲಟ್ ಅವರ ವಿರುದ್ಧ ಕಾಂಗ್ರೆಸ್ ಶಿಸ್ತುಕ್ರಮ ಜರುಗಿಸಿದೆ. ಉಪ ಮುಖ್ಯಮಂತ್ರಿ ಸ್ಥಾನ ಹಾಗೂ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸ್ಥಾನದಿಂದ ಸಚಿನ್ ರನ್ನು ಕೆಳಗಿಳಿಸಲಾಗಿದೆ. ಈ ನಡುವೆ ಸಚಿನ್ ಪೈಲಟ್ ಅವರು ಬಿಜೆಪಿಗೆ ಬರುವುದಾದರೆ ಮುಕ್ತವಾಗಿ ಸ್ವಾಗತಿಸುವುದಾಗಿ ರಾಜಸ್ಥಾನ ಬಿಜೆಪಿ ಮುಖಂಡ ಓಂ ಮಾಥೂರ್ ಆಹ್ವಾನಿಸಿದ್ದಾರೆ.
ಅಶೋಕ್ ಗೆಹ್ಲೋಟ್ ಅವರಿಗೆ ಶಾಸಕರ ಬೆಂಬಲವಿದ್ದರೆ ಸದನದಲ್ಲಿ ಬಹುಮತ ಸಾಬೀತುಪಡಿಸಲಿ ಎಂದು ಮಾಥೂರ್ ಆಗ್ರಹಿಸಿದ್ದಾರೆ.
ರಾಜಸ್ಥಾನ ಉಪಮುಖ್ಯಮಂತ್ರಿ ಸ್ಥಾನದಿಂದ ಸಚಿನ್ ಪೈಲಟ್ ಅಮಾನತು
ಸಚಿನ್ ಪೈಲಟ್ ಹಾಗೂ ಅವರ ಬೆಂಬಲಿಗರು ಬಿಜೆಪಿ ಸೇರುವುದಾದರೆ ಮುಕ್ತವಾಗಿ ಆಹ್ವಾನ ನೀಡುತ್ತಿದ್ದೇವೆ, ಹೊಸ ಸಿದ್ಧಾಂತ ಅಳವಡಿಸಿಕೊಳ್ಳಲು ಇದು ಸಕಾಲ ಎಂದಿದ್ದಾರೆ.
ಆದರೆ, ಸಚಿನ್ ಪೈಲಟ್ ಅವರು ಬಿಜೆಪಿ ಸೇರುವ ಬಗ್ಗೆ ಬಂದಿರುವ ಸುದ್ದಿಗಳನ್ನು ಅಲ್ಲಗೆಳೆದಿದ್ದು, ಭಾರತೀಯ ಜನತಾ ಪಕ್ಷವನ್ನು ಸೇರಲು ಯಾವುದೇ ರೀತಿಯಲ್ಲಿ ಪ್ರಯತ್ನಿಸುತ್ತಿಲ್ಲ ಎಂದಿದ್ದಾರೆ.
ಸಚಿನ್ ಪೈಲಟ್ ಬಳಿ 16ಕ್ಕೂ ಅಧಿಕ ಶಾಸಕರಿದ್ದಾರೆ, ಅಶೋಕ್ ಗೆಹ್ಲೋಟ್ ಸರ್ಕಾರಕ್ಕೆ ಆಪತ್ತು ಕಾದಿದೆ ಎಂಬ ಸುದ್ದಿ ಹಬ್ಬಿದೆ. 122 ಸದಸ್ಯ ಬಲದ ವಿಧಾನಸಭೆಯಲ್ಲಿ ಕಾಂಗ್ರೆಸ್ 106 ಸದಸ್ಯರನ್ನು ಹೊಂದಿದೆ.
ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ರಾಜ್ಯಸಭಾ ಚುನಾವಣೆ ಸಮಯದಿಂದಲೂ ಕಾಂಗ್ರೆಸ್ ಸರ್ಕಾರವನ್ನು ಕೆಡವಲು ಬಿಜೆಪಿ ಪ್ರಯತ್ನ ನಡೆಸುತ್ತಿದೆ ಎಂದು ಆರೋಪ ಮಾಡುತ್ತಿದ್ದಾರೆ. ಈಗ ಮೂವರು ಪಕ್ಷೇತರ ಶಾಸಕರಿಗೆ 25 ರಿಂದ 30 ಕೋಟಿ ಹಣದ ಆಮಿಷವೊಡ್ಡಿದ್ದಾರೆ ಎಂದು ಆರೋಪ ಮಾಡಲಾಗಿದ್ದು, ಈ ಕುರಿತು ತನಿಖೆ ಆರಂಭವಾಗಿದೆ. ಈ ಪ್ರಕರಣಕ್ಕೂ ಪೈಲಟ್ ಗೂ ನಂಟಿದೆ ಎಂದು ಕೇಳಿ ಬಂದಿದ್ದರಿಂದ ಸಚಿನ್ ಬಂಡಾಯವೆದ್ದಿದ್ದಾರೆ.