ಬಿಜೆಪಿ ವಾಗ್ದಾನ ನೆನಪಿಸಲು ರೈತರಿಗೆ ಕರೆಕೊಟ್ಟ ಸಚಿನ್ ಪೈಲಟ್
ಜೈಪುರ, ಫೆಬ್ರುವರಿ 09: ಬಿಜೆಪಿ ಸರ್ಕಾರ ರೈತರ ಆದಾಯವನ್ನು ದ್ವಿಗುಣಗೊಳಿಸುವುದಾಗಿ ಭರವಸೆ ನೀಡಿತ್ತು. ಆದರೆ ಇಂಥ ಸಂಕಷ್ಟದಲ್ಲಿ ರೈತರ ವಿರುದ್ಧವಾಗಿ ನಿಂತಿದೆ ಎಂದು ರಾಜಸ್ಥಾನ ಮಾಜಿ ಉಪ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಮುಖಂಡ ಸಚಿನ್ ಪೈಲಟ್ ಆರೋಪಿಸಿದ್ದಾರೆ.
ರೈತರ ಜೀವನಕ್ಕೆ ಮಾರಕವೆನಿಸಿರುವ ಕೇಂದ್ರದ ಈ ಮೂರು ವಿವಾದಿತ ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ಪುನರುಚ್ಚರಿಸಿರುವ ಅವರು, ರೈತರಿಗೆ ತಮ್ಮ ಬೆಂಬಲ ಸದಾ ಇದ್ದೇ ಇದೆ ಎಂದು ಭರವಸೆ ನೀಡಿದ್ದಾರೆ.
ಕೇಂದ್ರ ಸರ್ಕಾರದಲ್ಲಿ ರೈತರನ್ನು ಪ್ರತಿನಿಧಿಸುವವರು ಯಾರೂ ಇಲ್ಲ: ಸಚಿನ್ ಪೈಲಟ್
"ರೈತರ ಆದಾಯವನ್ನು ದುಪ್ಪಟ್ಟುಗೊಳಿಸುವುದಾಗಿ ಬಿಜೆಪಿ ಭರವಸೆ ನೀಡಿತ್ತು. ಆದರೆ ಇಂಥ ಬಿಕ್ಕಟ್ಟು, ಸಂಕಷ್ಟ ಎದುರಾದಾಗ ಇಡೀ ಬಿಜೆಪಿ ಸದಸ್ಯರೆಲ್ಲರೂ ರೈತರಿಗೆ ವಿರುದ್ಧವಾಗಿ ನಿಂತಿದ್ದಾರೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೇಶದ ರೈತರೆಲ್ಲರೂ ಬಿಜೆಪಿ ನೀಡಿದ್ದ ಪ್ರಮಾಣವನ್ನು ಪಕ್ಷಕ್ಕೆ ಮತ್ತೊಮ್ಮೆ ನೆನಪಿಸಬೇಕು. ಪ್ರಜಾಪ್ರಭುತ್ವದಲ್ಲಿ ರೈತರು ದನಿ ಎತ್ತುವುದು ಅಪರಾಧವಲ್ಲ. ಕೇಂದ್ರ ಸರ್ಕಾರ ತನ್ನ ಈ ದುರಹಂಕಾರಿ ನಡೆ ಬದಲಾಯಿಸಿಕೊಳ್ಳಬೇಕು. ಹಾಗೆಯೇ ಈ ಕಾಯ್ದೆಗಳನ್ನು ವಾಪಸ್ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ರೈತರ ಸಮಸ್ಯೆ ಕುರಿತು ಮಾತನಾಡಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶೀಘ್ರ ರಾಜಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ಕೃಷಿ ಕಾಯ್ದೆಗಳ ಹಿಂಪಡೆಯುವಿಕೆ ಕುರಿತು ಕೇಂದ್ರ ಸರ್ಕಾರದ ಮೇಲೆ ಎಲ್ಲೆಡೆಯಿಂದ ಒತ್ತಡ ಹೇರಲಾಗುವುದು ಎಂದು ತಿಳಿಸಿದರು.