ಶ್ರೀರಾಮನ ಮಗ ಕುಶನ ವಂಶಸ್ಥರು ನಾವು ಎಂದ ಬಿಜೆಪಿ ಸಂಸದೆ ದಿಯಾ ಕುಮಾರಿ
ಜೈಪುರ್ (ರಾಜಸ್ತಾನ), ಆಗಸ್ಟ್ 11: "ರಘುವಂಶಸ್ಥರು (ಶ್ರೀರಾಮನ ವಂಶದವರು) ಈಗ ಅಯೋಧ್ಯಾದಲ್ಲಿ ವಾಸವಿದ್ದಾರಾ?" ಎಂದು ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಐವರು ನ್ಯಾಯಮೂರ್ತಿಗಳನ್ನು ಒಳಗೊಂಡ ಸಾಂವಿಧಾನಿಕ ಪೀಠವು ಪ್ರಶ್ನೆ ಮಾಡಿತ್ತು. ಇದೀಗ ಬಿಜೆಪಿ ಸಂಸದೆ- ಜೈಪುರ್ ನ ರಾಜ ವಂಶಸ್ಥೆಯೊಬ್ಬರು, ನಾವು ರಾಮನ ಮಗ ಕುಶನ ವಂಶಜರು ಎಂದು ಟ್ವಿಟ್ಟರ್ ನಲ್ಲಿ ಘೋಷಿಸಿದ್ದಾರೆ.
"ಹೌದು, ರಾಮನ ವಂಶಜರು ಜಗತ್ತಿನಾದ್ಯಂತ ಇದ್ದಾರೆ. ನಮ್ಮ ಕುಟುಂಬವೂ ಸಹ ರಾಮನ ಮಗ ಕುಶನ ವಂಶಕ್ಕೆ ಸೇರಿದ್ದು" ಎಂದು ರಾಜಸ್ತಾನದ ರಾಜಸಮಂದ್ ನ ದಿಯಾ ಕುಮಾರಿ ಹೇಳಿದ್ದಾರೆ. ದಿಯಾ ಕುಮಾರಿ ಅವರು ಜೈಪುರ್ ನ ಹಿಂದಿನ ರಾಜ ಮನೆತನಕ್ಕೆ ಸೇರಿದವರು.
ಬಾಬ್ರಿ ಮಸೀದಿ ಹಕ್ಕನ್ನು ಪ್ರತಿಪಾದಿಸಲು ದಾಖಲೆ ನೀಡಿ: ಸುಪ್ರೀಂ
ರಾಮ್ ಲಲ್ಲಾ ವಿರಾಜ್ ಮನ್ ಪರ ವಕೀಲರಾದ ಕೆ. ಪರಾಶರನ್ ಅವರನ್ನು ಸುಪ್ರೀಂ ಕೋರ್ಟ್ ಪೀಠ ಪ್ರಶ್ನೆ ಮಾಡಿತ್ತು. ಏಕೆಂದರೆ, ರಾಮನ ಜನ್ಮ ಸ್ಥಳ ಅದೇ ವ್ಯಾಪ್ತಿಗೆ ಸೇರುತ್ತದೆ ಎಂದು ಅವರ ವಾದವಾಗಿತ್ತು.
"ನಾನು ಯಾವುದೇ ಉದ್ದೇಶದಿಂದ ಇದನ್ನು ಹೇಳುತ್ತಿಲ್ಲ. ವಿವಾದಕ್ಕೆ ಗುರಿ ಆಗಿರುವ ಆ ಭೂಮಿಯ ಮಾಲೀಕತ್ವಕ್ಕೆ ನಾವೇನೂ ತಕರಾರು ಮಾಡಲ್ಲ. ಈ ಕಾನೂನು ಪ್ರಕ್ರಿಯೆಯ ಭಾಗವೂ ಆಗಲ್ಲ. ನಾನು ಹೇಳಿರುವುದು ಹೃದಯದ ಧ್ವನಿಯೇ ಹೊರತು, ಯಾವುದೇ ಉದ್ದೇಶದಿಂದ ಅಲ್ಲ" ಎಂದು ಭಾನುವಾರ ಅವರು ಹೇಳಿದ್ದಾರೆ.
ಜೈಪುರ್ ನಲ್ಲಿ ಇರುವ ಅರಮನೆ ಮ್ಯೂಸಿಯಂನ ವಿಶೇಷಾಧಿಕಾರಿ ಪ್ರಕಾರ: ಜೈಪುರದ ಪದ್ಮನಾಭ ಸಿಂಗ್ ಅವರು ರಾಮನ ಮಗ ಕುಶನ ವಂಶಜರು. ಜೈಪುರ್ ನ ರಾಜವಂಶಸ್ಥರು ರಜಪೂತ್ ನ ಕಛವಾ ಸಮುದಾಯಕ್ಕೆ ಸೇರಿದವರು. ಇತಿಹಾಸಕಾರರ ಪ್ರಕಾರ, ಇವರು ರಾಮನ ಮಗ ಕುಶನ ವಂಶಜರು. ಇತರ ಇತಿಹಾಸಕಾರರು ಖಾತ್ರಿ ಪಡಿಸುವಂತೆ, ಅಯೋಧ್ಯಾದ ಜೈಸಿಂಗ್ ಪುರ್ ಅಂದರೆ ರಾಮಜನ್ಮಭೂಮಿ ಸ್ಥಳವು ಕಛವಾಗಳಿಗೆ ಸೇರಿದ್ದು ಎನ್ನಲಾಗಿದೆ.