ಮಾರ್ಚ್ ಒಳಗೆ ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ: ಕೇಂದ್ರ ಸಚಿವರ ಹೊಸ ಬಾಂಬ್
ಜೈಪುರ, ನವೆಂಬರ್ 26: ಮಾರ್ಚ್ ಒಳಗೆ ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ಬರಲಿದೆ ಎಂದು ಕೇಂದ್ರ ಸಚಿವ ನಾರಾಯಣ್ ರಾಣೆ ಹೊಸ ಬಾಂಬ್ ಸಿಡಿಸಿದ್ದಾರೆ. ಮುಂದಿನ ಚುನಾವಣೆ ನಡೆಯುವುದಕ್ಕೂ ಎರಡು ವರ್ಷ ಮುಂಚೆಯೇ ಬಿಜೆಪಿಯು ಮಹಾರಾಷ್ಟ್ರದಲ್ಲಿ ತನ್ನ ಸರ್ಕಾರವನ್ನು ರಚನೆ ಮಾಡಲಿದೆ ಎಂದು ಹೇಳಿದ್ದಾರೆ.
ಜೈಪುರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಕೇಂದ್ರ ಸಚಿವ ನಾರಾಯಣ್ ರಾಣೆ, "ಮಾರ್ಚ್ ಒಳಗೆ ಮಹಾರಾಷ್ಟ್ರದಲ್ಲಿ ಬಿಜೆಪಿಯು ಸರ್ಕಾರವನ್ನು ರಚನೆ ಮಾಡಲಿದೆ. ನೀವು ಬದಲಾವಣೆಯನ್ನು ಶೀಘ್ರದಲ್ಲೇ ನೋಡುತ್ತೀರಿ," ಎಂದು ತಿಳಿಸಿದ್ದಾರೆ. ಈ ಬಗ್ಗೆ ಮಾಧ್ಯಮಗಳು ಮತ್ತೆ ಪ್ರಶ್ನೆ ಮಾಡಿದಾಗ, "ಮಹಾರಾಷ್ಟ್ರದಲ್ಲಿ ಸರ್ಕಾರವನ್ನು ರಚನೆ ಮಾಡಲು, ಸರ್ಕಾರವನ್ನು ಉರುಳಿಸಲು ಎಲ್ಲಾ ತಂತ್ರವನ್ನು ರಹಸ್ಯವಾಗಿ ಇರಿಸಲಾಗಿದೆ," ಎಂದು ತಿಳಿಸಿದರು.
'ಚುನಾವಣೆ ಇಲ್ಲದಿದ್ದರೆ, ಕೇಂದ್ರ ಕೃಷಿ ಕಾಯ್ದೆ ಹಿಂಪಡೆಯುತ್ತಿರಲಿಲ್ಲ' ಎಂದ ಶರದ್ ಪವಾರ್
"ಭಾರತ ಯಾವ ವರ್ಷ ಸ್ವಾತಂತ್ರ್ಯ ಪಡೆದಿತ್ತು ಎಂದು ಉದ್ಧವ್ ಠಾಕ್ರೆ ಅವರಿಗೆ ತಿಳಿದಿಲ್ಲ. ನಾನು ಆ ಕಾರ್ಯಕ್ರಮದಲ್ಲಿ ಇದ್ದಿದ್ದರೆ ಅವರ ಕೆನ್ನೆಗೆ ಬಾರಿಸುತ್ತಿದ್ದೆ," ಎಂದು ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯ ಬಂದ ದಿನವನ್ನು ತಪ್ಪಾಗಿ ಹೇಳಿದ್ದ ಠಾಕ್ರೆ ವಿರುದ್ಧ ನಾರಾಯಣ ರಾಣೆ ಗುಡುಗಿದ್ದರು.
ಈ ವಿಚಾರದಲ್ಲಿ ನಾರಾಯಣ ರಾಣೆ ವಿರುದ್ಧ ಪ್ರಕರಣ ದಾಖಲು ಆಗಿದ್ದು ಮಾತ್ರವಲ್ಲದೇ ಅವರನ್ನು ಬಂಧನ ಮಾಡಲಾಗಿತ್ತು. ಶಿವಸೇನೆಯ ಮಾಜಿ ನಾಯಕರು ಆಗಿದ್ದ ನಾರಾಯಣ ರಾಣೆರನ್ನು ಆಗಸ್ಟ್ ತಿಂಗಳಿನಲ್ಲಿ ಬಂಧನ ಮಾಡಲಾಗಿತ್ತು. ಬಳಿಕ ಜಾಮೀನು ಮೇಲೆ ಹೊರಬಂದಿದ್ದಾರೆ.
"ಶಿವಸೇನೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರವು ಮಾರ್ಚ್ನಲ್ಲಿ ಪತನ ಆಗಲಿದೆ. ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರಲಿದೆ, ಇದರ ಬಗ್ಗೆ ರಾಜ್ಯ ಬಿಜೆಪಿ ಅಧ್ಯಕ್ಷ ಚಂದ್ರಕಾಂತ್ ಪಾಟೀಳ್ ಮಾತನಾಡಿದ್ದಾರೆ. ಇದು ಸತ್ಯವಾಗಲಿದೆ ಎಂಬ ಭರವಸೆ ನಮಗೆ ಇದೆ," ಎಂದು ತಿಳಿಸಿದರು.
ಕೋವಿಡ್ ಲಸಿಕೆ ಹಾಕಿಲ್ವ, ನಿಮಗೆ ಸಂಬಳ ಇಲ್ಲ!
ಇನ್ನು ರಾಣೆ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ, "ಈ ಮೈತ್ರಿ ಸರ್ಕಾರವು ತನ್ನ ಅವಧಿ ಪೂರ್ಣಗೊಳಿಸಲಿದೆ ಎಂದು ಹೇಳಿದ್ದಾರೆ. "ಬಿಜೆಪಿಯು ಮುಂದಿನ ದೊಡ್ಡದಾದ ಭವಿಷ್ಯವನ್ನು ಹೇಳುತ್ತಲೇ ಇರುತ್ತದೆ. ಆದರೆ ಯಾವುದೂ ಕೂಡಾ ಈಡೇರಲಾರದು. ಬಿಜೆಪಿಯನ್ನು ಯಾರೂ ಕೂಡಾ ನಂಬುವುದಿಲ್ಲ," ಎಂದು ಹೇಳಿದರು.
ಮಹಾರಾಷ್ಟ್ರದ ಸರ್ಕಾರ ಅವಧಿ ಯಾವಾಗ ಅಂತ್ಯ?
ಮಹಾರಾಷ್ಟ್ರದಲ್ಲಿ ಶಿವಸೇನಾ- ಎನ್ಸಿಪಿ- ಕಾಂಗ್ರೆಸ್ ಮೈತ್ರಿ ಸರ್ಕಾರದ ಅವಧಿ 2024 ರವರೆಗೂ ಇದೆ. ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಬಂದಾಗ ಮಿತ್ರ ಪಕ್ಷಗಳಾದ ಬಿಜೆಪಿ ಹಾಗೂ ಶಿವಸೇನೆ ಸೇರಿ ಸರ್ಕಾರ ರಚನೆ ಮಾಡುವುದು ಖಚಿತ ಆಗಿತ್ತು. ಆದರೆ ಮುಖ್ಯಮಂತ್ರಿ ಗದ್ದುಗೆಯ ವಿಚಾರದಲ್ಲಿ ಬಿಜೆಪಿ ಹಾಗೂ ಶಿವಸೇನೆ ನಡುವೆ ವೈಮನಸ್ಸು ಉಂಟಾಯಿತು. ಶಿವಸೇನೆಗೆಯೇ ಮುಖ್ಯಮಂತ್ರಿ ಸ್ಥಾನ ನೀಡುವುದಾಗಿ ಬಿಜೆಪಿ ಭರವಸೆ ನೀಡಿತ್ತು ಎಂದು ಶಿವಸೇನೆ ಹೇಳಿಕೊಂಡಿದೆ. ಇನನ್ನು ಅಜಿತ್ ಪವಾರ್ ನೇತೃತ್ವದಲ್ಲಿ ಕೆಲವು ಎನ್ಸಿಪಿ ನಾಯಕರು ಬಿಜೆಪಿಗೆ ಬೆಂಬಲ ನೀಡಲು ಮುಂದಾಗಿದ್ದರು. ಆದರೆ ಇದಕ್ಕಿಂದತೆ ತನ್ನ ಬದ್ಧ ವೈರಿಗಳಾದ ಎನ್ಸಿಪಿ ಹಾಗೂ ಕಾಂಗ್ರೆಸ್ ಜೊತೆಗೆ ಶಿವಸೇನೆ ಮೈತ್ರಿಯನ್ನು ಮಾಡಿಕೊಳ್ಳುವ ಮೂಲಕ ಅಚ್ಚರಿಯನ್ನು ಮೂಡಿಸಿತ್ತು. ಆದರೆ ಈವ ಬಿಜೆಪಿ ಸರ್ಕಾರವನ್ನು ರಚನೆ ಮಾಡಲು ಮುಂದಾದರೆ ಕಾಂಗ್ರೆಸ್, ಶಿವಸೇನೆ, ಎನ್ಸಿಪಿ ಯಾವುದಾದರೂ ಒಂದು ಪಕ್ಷದ ಬೆಂಬಲ ದೊರೆಯುವುದು ಅನಿವಾರ್ಯವಾಗಿದೆ.
ಇನ್ನು ಇತ್ತೀಚೆಗೆ ಮಾತನಾಡಿದ್ದ ಎನ್ಸಿಪಿ ನಾಯಕ ಶರದ್ ಪವಾರ್ "ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರವು ಮಹಾರಾಷ್ಟ್ರದಲ್ಲಿ ಐದು ವರ್ಷಗಳ ಅಧಿಕಾರವಧಿಯನ್ನು ಯಶಸ್ವಿಯಾಗಿ ಪೂರ್ಣ ಮಾಡಲಿದೆ. ಮಹಾರಾಷ್ಟ್ರದಲ್ಲಿ ಚುನಾವಣೆ ನಡೆದರೆ, ಕಾಂಗ್ರೆಸ್, ಎನ್ಸಿಪಿ, ಶಿವಸೇನೆ ಮೈತ್ರಿ ಕೂಟವು ಮತ್ತೆ ಅಧಿಕಾರವನ್ನು ಪಡೆಯಲಿದೆ," ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.