ಪಂಚಾಯತ್ ಚುನಾವಣೆಯಲ್ಲಿ ನಮ್ಮದೇ ಗೆಲುವು ಎಂದ ಬಿಜೆಪಿ
ಜೈಪುರ, ಡಿಸೆಂಬರ್ 9: ರಾಜಸ್ಥಾನದಲ್ಲಿ ನಡೆದ ಪಂಚಾಯತ್ ರಾಜ್ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಜಯಭೇರಿ ಬಾರಿಸಿರುವುದಾಗಿ ಬಿಜೆಪಿ ಹೇಳಿಕೊಂಡಿದೆ. 4,371 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ 222 ಸಮಿತಿಗಳ ಫಲಿತಾಂಶವನ್ನು ಪ್ರಕಟಿಸಲಾಗಿದೆ.
ಪಂಚಾಯತ್ ರಾಜ್ ಚುನಾವಣೆಯು ಕಾಂಗ್ರೆಸ್ ಪರವಾಗಿರುವಂತೆ ಪರಿವರ್ತಿಸಲು ಮತ್ತು ನಿಯಂತ್ರಿಸಲು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ತೋಳ್ಬಲ, ಹಣಬಲ ಮತ್ತು ಅಧಿಕಾರವನ್ನು ಬಳಸಿಕೊಂಡಿದ್ದಾರೆ ಎಂದು ರಾಜಸ್ಥಾನ ಬಿಜೆಪಿ ಘಟಕ ಆರೋಪಿಸಿದೆ. ಆದರೆ ಕಾಂಗ್ರೆಸ್ ಇಲ್ಲಿ ಸೋಲು ಅನುಭವಿಸಿದೆ ಮತ್ತು ಬಿಜೆಪಿ ಕಾರ್ಯಕರ್ತರ ಬಲ ವಿಜಯಶಾಲಿಯಾಗಿ ಹೊರಹೊಮ್ಮಿದೆ ಎಂದು ಅದು ಹೇಳಿಕೊಂಡಿದೆ.
ರಾಜಸ್ಥಾನ ಸರ್ಕಾರ ಬೆಂಬಲಿಸಲು ಇಬ್ಬರು ಶಾಸಕರಿಗೆ 10 ಕೋಟಿ ಕೊಟ್ಟ ಆರೋಪ
4,371 ಪಂಚಾಯತ್ ರಾಜ್ ಕ್ಷೇತ್ರಗಳ ಪೈಕಿ ತಾನು 1,836 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು, ಕಾಂಗ್ರೆಸ್ 1,718ರಲ್ಲಿ ಗೆದ್ದಿದೆ ಎಂದು ಬಿಜೆಪಿ ಹೇಳಿದೆ. ಹಾಗೆಯೇ ಜಿಲ್ಲಾ ಪಂಚಾಯತ್ ಚುನಾವಣೆಗಳಲ್ಲಿ ಬಿಜೆಪಿ 323 ಮತ್ತು ಕಾಂಗ್ರಸ್ 246 ಕ್ಷೇತ್ರಗಳಲ್ಲಿ ಗೆಲುವು ಕಂಡಿರುವುದಾಗಿ ಬಿಜೆಪಿ ಮುಖಂಡರು ಹೇಳಿದ್ದಾರೆ. ಇದು ಹೊಸ ಕೃಷಿ ಕಾಯ್ದೆಗಳ ಪರ ಗ್ರಾಮೀಣ ಭಾಗದ ಜನರು ನೀಡಿರುವ ತೀರ್ಪು ಎಂದು ಬಿಜೆಪಿ ಐಟಿ ಘಟಕದ ಮುಖ್ಯಸ್ಥ ಅಮಿತ್ ಮಾಳವೀಯ ಹೇಳಿಕೊಂಡಿದ್ದಾರೆ.
ರಾಜಸ್ಥಾನದ ಪಂಚಾಯತ್ ಮತ್ತು ಜಿಲ್ಲಾ ಪರಿಷದ್ ಚುನಾವಣೆಗಳಲ್ಲಿನ ಪಕ್ಷದ ಗೆಲುವು ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದ ಮೇಲೆ ಬಡವರು, ಕೃಷಿಕರು ಮತ್ತು ಕಾರ್ಮಿಕರು ಇರಿಸಿರುವ ನಂಬಿಕೆಯನ್ನು ಸಂಕೇತಿಸುತ್ತದೆ. ಕಾಂಗ್ರೆಸ್ ಆಡಳಿತದ ರಾಜ್ಯದಲ್ಲಿ ಬಿಜೆಪಿ ಮೇಲೆ ವಿಶ್ವಾಸ ಇರಿಸಿಕೊಂಡಿರುವುದಕ್ಕೆ ಮಹಿಳೆಯರು, ರೈತರು ಮತ್ತು ಇತರೆ ಗ್ರಾಮೀಣ ಮತದಾರರಿಗೆ ಧನ್ಯವಾದ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹೇಳಿದ್ದಾರೆ.