ರಾಜಸ್ಥಾನದಲ್ಲಿ ಮಾಯಾವತಿಗೆ ಬಿಗ್ ಶಾಕ್: ಕಾಂಗ್ರೆಸ್ ಸೇರಿದ 6 ಶಾಸಕರು
ಜೈಪುರ, ಸೆಪ್ಟೆಂಬರ್ 17: ರಾಜಸ್ಥಾನದಲ್ಲಿ ಬಹುಜನ ಸಮಾಜ ಪಕ್ಷದ ನಾಯಕಿ ಮಾಯಾವತಿ ಅವರಿಗೆ ಭಾರಿ ಆಘಾತವಾಗುವಂಥ ಬೆಳವಣಿಗೆ ನಡೆದಿದೆ.
ರಾಜಸ್ಥಾನದ ಎಲ್ಲಾ ಆರೂ ಬಿಎಸ್ಪಿ ಶಾಸಕರೂ ಕಾಂಗ್ರೆಸ್ ಸೇರುವ ಮೂಲಕ ತಮ್ಮ ಅಧಿನಾಯಕಿಗೆ ಶಾಕ್ ನೀಡಿದ್ದಾರೆ.
ರಾಜಸ್ಥಾನ ಸರ್ಕಾರಕ್ಕೆ ಕಂಟಕ? ಮಾಯಾವತಿ ಆಟ ಬಲ್ಲವರ್ಯಾರು?!
ರಾಜೇಂದ್ರ ಗುಡ್ಡ್, ಜೋಗೇಂದ್ರ ಸಿಂಗ್ ಅವಾನಾ, ವಾಝಿಬ್ ಅಲಿ, ಲಖನ್ ಸಿಂಗ್ ಮೀನಾ, ಸಂದೀಪ್ ಯಾದವ್ ಮತ್ತು ದೀಪಕ್ ಖೇರಿಯಾ ಅವರು ಕಾಂಗ್ರೆಸ್ ಸೇರಿದ್ದಾರೆ.
"ನಾವು ಇಷ್ಟು ದಿನ ಹಲವು ಸವಾಲುಗಳನ್ನು ಎದುರಿಸಿದ್ದೇವೆ. ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧವೇ ಹೋರಾಡಿ ನಂತರ ಅದರೊಂದಿಗೇ ಕೈಜೋಡಿಸುವುದು ಎಂದರೆ ಮುಜುಗರದ ವಿಷಯ. ಜಾತ್ಯತೀತ ತತ್ತ್ವದಲ್ಲಿ ನಂಬುಕೆ ಇಟ್ಟು, ಅಭಿವೃದ್ಧಿಯನ್ನೇ ಮೂಲಮಂತ್ರವನ್ನಾಗಿಸಿಕೊಂಡಿರುವ ಕಾಂಗ್ರೆಸ್ ನಲ್ಲಿದ್ದುಕೊಂಡೇ ಗುರುತಿಸಿಕೊಳ್ಳುವುದಕ್ಕೆ ನಾವು ಬಯಸುತ್ತೇವೆ" ಎಂದು ಬಿಎಸ್ಪಿಗೆ ರಾಜೀನಾಮೆ ನೀಡಿರುವ ಶಾಸಕರು ಹೇಳಿದ್ದಾರೆ.
"ನಮಗೆ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆ ಇದೆ. ರಾಜಸ್ಥಾನಕ್ಕೆ ಅವರಲ್ಲದೆ ಬೇರೆ ಯಾರೂ ಮುಖ್ಯಮಂತ್ರಿಯಾಗುವುದಕ್ಕೆ ಸಾಧ್ಯವಿಲ್ಲ. ಅದನ್ನು ನಾವು ಒಪ್ಪುವುದೂ ಇಲ್ಲ" ಎಂದು ಅವರು ಹೇಳಿದ್ದಾರೆ.
ಪ್ರಜಾಪ್ರಭುತ್ವದ ಕರಾಳ ಅಧ್ಯಾಯ: ಮೈತ್ರಿ ಪತನಕ್ಕೆ ಮಾಯಾವತಿ ಪ್ರತಿಕ್ರಿಯೆ
ರಾಜ್ಯಪಾಲ ಸಿಪಿ ಜೋಶಿ ಅವರನ್ನು ಭೇಟಿ ಮಾಡಿ ರಾಜೀನಾಮೆ ಪತ್ರಗಳನ್ನು ಶಾಸಕರು ನೀಡಿದ್ದು, ಇಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರನ್ನು ಭೇಟಿಯಾಗಲಿದ್ದಾರೆ.
ರಾಜಸ್ಥಾನದಲ್ಲಿ ಕಳೆದ ವರ್ಷ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 100(200)ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಆ ನಂತರ ಅದಕ್ಕೆ 6 ಬಿಎಸ್ಪಿ ಶಾಸಕರು ಸೇರಿದಂತೆ ಪಕ್ಷೇತರ 12 ಶಾಸಕರು ಬೆಂಬಲ ನೀಡಿದ್ದರು. ಸದ್ಯಕ್ಕೆ ರಾಜಸ್ಥಾನ ವಿಧಾನಸಭೆ 112 ಶಾಸಕರನ್ನು ಹೊಂದಿದೆ.