ಭಿಲ್ವಾರಾ ಘರ್ಷಣೆ: ಇಬ್ಬರು ಯುವಕರ ಮೇಲೆ ದಾಳಿ- ಇಂಟರ್ನೆಟ್ ಸ್ಥಗಿತ
ಭಿಲ್ವಾರ ಮೇ 5: ರಾಜಸ್ಥಾನ ಕೋಮು ಗಲಭೆಯಲ್ಲಿ ತನ್ನ ಹೆಸರನ್ನು ಮಾರೆಯಾಗಿಸುವ ಲಕ್ಷಣಗಳು ಕಾಣಿಸುತ್ತಿಲ್ಲ. ರಾಜಸ್ಥಾನದಲ್ಲಿ ಪರಿಸ್ಥಿತಿ ಹತೋಟಿಗೆ ಬರುವ ಬದಲು ಹದಗೆಡುತ್ತಿದೆ. ಜೋಧ್ಪುರ ಮತ್ತು ಕರೌಲಿಯಲ್ಲಿ ಪೊಲೀಸರು ಹಿಂಸಾಚಾರ ಮತ್ತು ಉದ್ವಿಗ್ನತೆಯನ್ನು ನಿಯಂತ್ರಿಸಿದ ಬಳಿಕ ಈಗ ಭಿಲ್ವಾರಾದಲ್ಲಿ ಗಲಭೆ ನಡೆದಿರುವುದು ಪ್ರಕರಣ ವರದಿಯಾಗಿದೆ. ಮೇ 4ರಂದು ಭಿಲ್ವಾರಾದಲ್ಲಿ ಗಲಾಟೆ ನಡೆದಿರುವುದು ತಿಳಿದು ಬಂದಿದೆ. ಇಲ್ಲೂ ಎರಡು ಸಮುದಾಯಗಳು ಮುಖಾಮುಖಿಯಾಗಿವೆ. ಉದ್ರಿಕ್ತ ಗುಂಪುಗಳನ್ನು ಚದುರಿಸಲು ಜಿಲ್ಲೆಯ 33 ಪೊಲೀಸ್ ಠಾಣೆಯ ಪೊಲೀಸರನ್ನು ಸ್ಥಳದಲ್ಲಿ ನಿಯೋಜಿಸಬೇಕಾಗಿದೆ. ಅಲ್ಲದೆ ಈ ಪ್ರದೇಶದಲ್ಲಿ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.
ಕರೌಲಿ ಹಿಂಸಾಚಾರ: ಜೀವದ ಹಂಗು ತೊರೆದು ಮಗುವನ್ನು ರಕ್ಷಿಸಿದ ಪೊಲೀಸ್ ಪೇದೆ
ಮಾಹಿತಿಯ ಪ್ರಕಾರ, ಭಿಲ್ವಾರಾ ಜಿಲ್ಲಾ ಕೇಂದ್ರದ ಬಳಿಯ ಸಂಗನೇರ್ ಉಪನಗರದಲ್ಲಿ ನಿನ್ನೆ ರಾತ್ರಿ ಈ ಗಲಾಟೆ ನಡೆದಿದೆ. ಬುಧವಾರ ರಾತ್ರಿ ಇಬ್ಬರು ಯುವಕರ ಮೇಲೆ ಹಲ್ಲೆ ನಡೆಸಿ ಅವರ ದ್ವಿಚಕ್ರ ವಾಹನಗಳು ಸುಟ್ಟು ಹಾಕಲಾಗಿದೆ. ಇದು ಜನರನ್ನು ಕೆರಳಿಸಿತು. ಸಿಟ್ಟಿಗೆದ್ದ ಜನರು ಅಲ್ಲಿಯೇ ಧರಣಿ ಕುಳಿತರು. ಈ ವೇಳೆ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದೆ. ಸದ್ಯ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಪೊಲೀಸರು ಇಡೀ ಪ್ರದೇಶದಲ್ಲಿ ರೂಟ್ ಮಾರ್ಚ್ ನಡೆಸುತ್ತಿದ್ದಾರೆ. ಅರ್ಧ ಡಜನ್ಗೂ ಹೆಚ್ಚು ಜನರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಭಿಲ್ವಾರಾ ಎಸ್ಪಿ ಆದರ್ಶ್ ಸಿಂಧು ಮತ್ತು ಜಿಲ್ಲಾಧಿಕಾರಿ ಆಶಿಶ್ ಮೋದಿ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ.
Rajasthan | An incident was reported in the Sanganer area of Bhilwara last night in which two persons were attacked by some unknown people when they were having food. Their bike was also set ablaze. We are investigating the matter: Ashish Modi, District Collector Bhilwara pic.twitter.com/lGSs7IorR9
— ANI MP/CG/Rajasthan (@ANI_MP_CG_RJ) May 5, 2022
ಬುಧವಾರ ರಾತ್ರಿ 10 ಗಂಟೆ ಸುಮಾರಿಗೆ ಭಿಲ್ವಾರಾ ಜಿಲ್ಲೆಯ ಸುಭಾಷ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಸಂಗನೇರ್ನ ಕರ್ಬಲಾ ರಸ್ತೆಯಲ್ಲಿ ಕಾರ್ಮಿಕರಾದ ಆಜಾದ್ ಮನ್ಸೂರಿ ಮತ್ತು ಸದ್ದಾಂ ಮೇವಾಟಿ ಮೇಲೆ ಹಲ್ಲೆ ನಡೆಸಲಾಗಿದೆ. ಮಾರಣಾಂತಿಕ ದಾಳಿಯ ವೇಳೆ ಹರಿತವಾದ ಆಯುಧದಿಂದ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಕ್ಕಪಕ್ಕದವರು ಅವರನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದು ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿಗಳು ಅವರ ಬೈಕ್ಗೂ ಬೆಂಕಿ ಹಚ್ಚಿದ್ದಾರೆ.
ದಾಳಿಯ ನಂತರ ಹಿಂದೂ-ಮುಸ್ಲಿಂ ಸಮುದಾಯದ ಜನರು ಮುಖಾಮುಖಿಯಾಗು ಘರ್ಷಣೆ ನಡೆದಿದೆ. ಗಾಯಗೊಂಡವರು ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ. ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಇಡೀ ಪ್ರದೇಶವನ್ನು ಕಂಟೋನ್ಮೆಂಟ್ ಆಗಿ ಪರಿವರ್ತಿಸಲಾಗಿದೆ. ಘರ್ಷಣೆ ಬಳಿಕ ಭಿಲ್ವಾರಾ ಜಿಲ್ಲೆಯ ಎಲ್ಲಾ 33 ಪೊಲೀಸ್ ಠಾಣೆಗಳ ಪೊಲೀಸರನ್ನು ಸಂಗನೇರ್ನಲ್ಲಿ ನಿಯೋಜಿಸಲಾಗಿದೆ. ಜೊತೆಗೆ ಗುರುವಾರ ಬೆಳಿಗ್ಗೆ 6 ರಿಂದ ಭಿಲ್ವಾರಾದಲ್ಲಿ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಮರುದಿನ ಬೆಳಗ್ಗೆ 6 ರವರೆಗೆ ಮೊಬೈಲ್ ಸಂಪರ್ಕ ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ಮಾತ್ರವಲ್ಲದೇ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಕೆ ವಹಿಸಿದ ಖಾಕಿ ಪಡೆ ಇಡೀ ಪ್ರದೇಶವನ್ನು ಡ್ರೋನ್ ಕ್ಯಾಮೆರಾಗಳೊಂದಿಗೆ ಮೇಲ್ವಿಚಾರಣೆ ಮಾಡುತ್ತಿದೆ.
ಘಟನೆ ಬಗ್ಗೆ ಭಿಲ್ವಾರಾ ಎಸ್ಪಿ ಆದರ್ಶ್ ಸಿಧು ಮಾಧ್ಯಮಗಳೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ. ಕಬರ್ಲಾ ರಸ್ತೆಯಲ್ಲಿ ಕುಳಿತಿದ್ದ ಆಜಾದ್ ಮತ್ತು ಸದ್ದಾಂ ಮೇಲೆ ನಡೆದ ದಾಳಿಯ ನಂತರ ಘರ್ಷಣೆ ನಡೆದಿದೆ. ದಾಳಿಗೆ ಸೂಕ್ತ ಕಾರಣ ತಿಳಿದು ಬಂದಿಲ್ಲ. ಬಹುಶಃ ಪರಸ್ಪರ ದ್ವೇಷದ ವಿಷಯವಾಗಿರಬಹುದು. ಯುವಕರ ಮೇಲೆ ಹಲ್ಲೆ ನಡೆಸಿ ದ್ವಿಚಕ್ರವಾಹನ ಸುಟ್ಟು ಹಾಕಿರುವ ಆರೋಪಿಗಳಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಭಿಲ್ವಾರಾ ಜಿಲ್ಲಾಧಿಕಾರಿ ಆಶಿಶ್ ಮೋದಿ ಹೇಳಿದ್ದಾರೆ. ಮತ್ತೊಂದೆಡೆ, ಜೋಧ್ಪುರದಲ್ಲಿ ಮೇ 6 ರ ಮಧ್ಯರಾತ್ರಿ 12 ರವರೆಗೆ ಕರ್ಫ್ಯೂ ವಿಸ್ತರಿಸಲಾಗಿದೆ. ಇಂಟರ್ನೆಟ್ ಸೇವೆಗಳು ಸಹ ಸ್ಥಗಿತಗೊಳಿಸಲಾಗಿದೆ.