ರಾಜಸ್ತಾನದಲ್ಲಿ ಅಲುಗಾಡುತ್ತಿದೆ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರಕಾರ
ರಾಜಸ್ತಾನದಲ್ಲಿ ಅಸೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರಕಾರ ಬೀಳಬಹುದಾ? ಬಿಜೆಪಿ ನಾಯಕರ ಮಾತನ್ನು ನಂಬುವುದಾದರೆ, ಈ ಪ್ರಶ್ನೆಗೆ ಉತ್ತರ 'ಹೌದು'. ಲೋಕಸಭಾ ಚುನಾವಣೆಯಲ್ಲಿನ ಸೋಲಿನಿಂದ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಹಲವು ಶಾಸಕರು ಅಸಮಾಧಾನಗೊಂಡಿದ್ದಾರಂತೆ. ಆ ಕಾರಣಕ್ಕೆ ರಾಜಸ್ತಾನದ ರಾಜ್ಯ ಸರಕಾರ ಬೀಳಬಹುದು ಎನ್ನುತ್ತಿದ್ದಾರೆ.
ನನಗೆ ಬಂದ ಮಾಹಿತಿ ಪ್ರಕಾರ, ಬಿಎಸ್ ಪಿಯ ಶಾಸಕರು ಬೇಸರಗೊಂಡಿದ್ದಾರೆ. ಅದೇ ರೀತಿ ಕಾಂಗ್ರೆಸ್ ನ 20-25 ಶಾಸಕರು ಸಹ ಸಿಟ್ಟಾಗಿದ್ದಾರೆ. ಈ ಬಗ್ಗೆ ಹೆಚ್ಚು ಮಾತನಾಡಲು ಬಯಸುವುದಿಲ್ಲ ಎಂದು ರಾಜಸ್ತಾನ ಬಿಜೆಪಿಯ ಉಪಾಧ್ಯಕ್ಷ ಗ್ಯಾನದೇವ್ ಅಹುಜಾ ಹೇಳಿದ್ದಾರೆ.
ಮಗನಿಗಾಗಿ ಪಕ್ಷದ ಹಿತಾಸಕ್ತಿ ಬಲಿಕೊಟ್ಟ ಅಶೋಕ್ ಗೆಹ್ಲೋಟ್ ಸಂಕಷ್ಟದಲ್ಲಿ
ರಾಜ್ಯ ಕಾಂಗ್ರೆಸ್ ನ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹಾಗೂ ಉಪ ಮುಖ್ಯಮಂತ್ರಿ ಸಚಿವ್ ಪೈಲಟ್ ಅವರು ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಆಗಿದ್ದಾರೆ. ಮತ್ತೊಬ್ಬ ಬಿಜೆಪಿ ನಾಯಕ ಭವಾನಿ ಸಿಂಗ್ ರಾಜವತ್ ಮಾತನಾಡಿ, ಕಾಂಗ್ರೆಸ್ ಎಂಥ ಸ್ಥಿತಿಗೆ ಬಂದಿದೆ ಅಂದರೆ, ನಾವು ಶ್ರಮ ಹಾಕದೆ ಸರಕಾರ ತಾನಾಗಿಯೇ ಬಿದ್ದು ಹೋಗುತ್ತದೆ. ರಾಜೀನಾಮೆ ಪರ್ವ ಮುಂದುವರಿದರೆ ಬಹುಮತ ಕಳೆದುಕೊಂಡು, ಸರಕಾರ ಬೀಳುತ್ತದೆ ಎಂದಿದ್ದಾರೆ.
ರಾಜಸ್ತಾನದಲ್ಲಿ ಕಾಂಗ್ರೆಸ್ ಶೂನ್ಯ ಸಾಧನೆ, ಮಧ್ಯಪ್ರದೇಶದಲ್ಲಿ ಒಂದು ಹಾಗೂ ಛತ್ತೀಸ್ ಗಢದಲ್ಲಿ ಎರಡು ಸ್ಥಾನದಲ್ಲಿ ಜಯ ಗಳಿಸಿತ್ತು. ಇಂಥ ಹೀನಾಯ ಸೋಲಿಗೆ ಜವಾಬ್ದಾರಿ ಹೊತ್ತು ರಾಜೀನಾಮೆ ನೀಡಬೇಕು ಎಂಬುದು ಒತ್ತಾಯವಾಗಿದೆ.
ವಿಧಾನಸಭೆಯಲ್ಲಿ ಗೆದ್ದಿದ್ದನ್ನು ಲೋಕಸಭೆಯಲ್ಲಿ ಕಳೆದುಕೊಂಡ ಕಾಂಗ್ರೆಸ್
ಸೋಮವಾರದಂದು ರಾಜ್ಯಪಾಲರ ಭೇಟಿಗೆ ಬಿಎಸ್ ಪಿ ಶಾಸಕರು ಸಮಯ ಕೇಳಿ, ಆ ನಂತರ ವಾಪಸ್ ಪಡೆದಿದ್ದರು. ಆದ್ದರಿಂದ ಬಿಎಸ್ ಪಿ ಶಾಸಕರು ರಾಜಸ್ತಾನ ಸರಕಾರಕ್ಕೆ ನೀಡಿದ ಬೆಂಬಲ ವಾಪಸ್ ಪಡೆಯಬಹುದು ಎಂಬ ವದಂತಿ ಹಬ್ಬಿತ್ತು.