ವ್ಯಕ್ತಿ ಚಿತ್ರ : ರಾಜಸ್ಥಾನಕ್ಕೆ ಮತ್ತೆ ರಾಜನಾದ ಅಶೋಕ್ ಗೆಹ್ಲೋಟ್
ಜೈಪುರ, ಡಿಸೆಂಬರ್ 14: ರಾಜಸ್ಥಾನದಲ್ಲಿ ಮೂರನೇ ಬಾರಿಗೆ ಅಶೋಕ್ ಗೆಹ್ಲೋಟ್ ಅವರು ಮುಖ್ಯಮಂತ್ರಿಯಾಗುವ ಅವಕಾಶ ಗಳಿಸಿದ್ದಾರೆ. ಇಂದಿರಾಗಾಂಧಿ ಕೃಪೆಯಿಂದ ಬೆಳೆದ ಅಶೋಕ್ ಅವರು ನಿರಾಶ್ರಿತ ಶಿಬಿರದಿಂದ ವಿದ್ಯಾರ್ಥಿ ನಾಯಕನಾಗಿ ನಂತರ ಮುಖ್ಯಮಂತ್ರಿಯಾಗಿದ್ದು ಈಗ ಇತಿಹಾಸ.
ರಾಜಸ್ಥಾನದ ಮುಂದಿನ ಆಯ್ಕೆಗಾಗಿ ಅನೇಕ ಗಂಟೆಗಳ ಕಾಲ ಸಭೆ ನಡೆಸಿದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಅಂತಿಮವಾಗಿ ಶುಕ್ರವಾರದಂದು ನೂತನ ಮುಖ್ಯಮಂತ್ರಿಯಾಗಿ ಅಶೋಕ್ ಗೆಹ್ಲೋಟ್ ಅವರ ಹೆಸರನ್ನು ಘೋಷಿಸಿದ್ದಾರೆ. ಸಿಎಂ ರೇಸಿನಲ್ಲಿದ್ದ ಸಚಿನ್ ಪೈಲಟ್ ಅವರಿಗೆ ಉಪ ಮುಖ್ಯಮಂತ್ರಿಯಾಗುವಂತೆ ಸೂಚಿಸಿದ್ದಾರೆ. ಗೆಹ್ಲೋಟ್ ಅವರು ಸರ್ದಾರ್ ಪುರ ವಿಧಾನಸಭಾ ಕ್ಷೇತ್ರದಲ್ಲಿ 97081 ಮತಗಳ ಅಂತರದಿಂದ ಗೆಲುವು ಸಾಧಿಸಿದರು.
ರಾಜಸ್ಥಾನ: ಬಿದ್ದ ಕಾಂಗ್ರೆಸ್ಸಿನ ಪತಾಕೆಯನ್ನು ಹಾರಿಸಿದ 'ಪೈಲಟ್'
1951ರ ಮೇ3ರಂದು ಮಾಲಿ ಗೆಹ್ಲೋಟ್ ಕುಟುಂಬದಲ್ಲಿ ಜನಿಸಿದ ಅಶೋಕ್ ಅವರು ವಿಜ್ಞಾನ, ಕಾನೂನು ವಿಷಯದಲ್ಲಿ ಪದವಿ, ಎಕಾನಾಮಿಕ್ಸ್ ನಲ್ಲಿ ಮಾಸ್ಟರ್ ಗಳಿಸಿದ್ದಾರೆ.
1971ರಲ್ಲಿ ಈಸ್ಟ್ ಬೆಂಗಾಲದ ಅನೇಕ ನಿರಾಶ್ರಿತ ಶಿಬಿರಗಳಲ್ಲಿ ನೆಲೆಸಿದ್ದ ಅಶೋಕ್ ಅವರು 24 ಪರಗಣ ಜಿಲ್ಲೆ, ತರುಣ್ ಶಾಂತಿ ಸೇನಾ ಅಯೋಜನೆಯ ಇಂದೋರ್, ಔರಾಂಗಬಾದ್, ವಾರ್ಧಾಗಳಲ್ಲಿ ಕ್ಯಾಂಪ್ ನಲ್ಲಿದ್ದರು.ನಿರಾಶ್ರಿತ ಶಿಬಿರಗಳಲ್ಲಿ ಸಂಘಟನಾ ಚತುರತೆ ತೋರಿದ್ದ ಯುವ ಅಶೋಕ್ ಅವರನ್ನು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಗುರುತಿಸಿ, ರಾಜಕೀಯಕ್ಕೆ ಕರೆ ತಂದರು.
1974ರಲ್ಲಿ ರಾಷ್ಟ್ರೀಯ ವಿದ್ಯಾರ್ಥಿ ಯೂನಿಯನ್( ಎನ್ ಎಸ್ ಯು ಐ)ನ ರಾಜ್ಯಾಧ್ಯಕ್ಷರಾದರು. ಕಾಂಗ್ರೆಸ್ಸಿಗೆ ವಿದ್ಯಾರ್ಥಿ ಸಂಘಟನೆಯ ಬಲ ತರುವಲ್ಲಿ ಅಶೋಕ್ ಯಶಸ್ವಿಯಾದರು.
ಜೋಧಪುರದಿಂದ 1980ರಲ್ಲಿ 7ನೇ ಲೋಕಸಭೆ ಆಯ್ಕೆಯಾಗಿ ಮೊದಲ ಬಾರಿಗೆ ಸಂಸದರಾದರು. ನಂತರ ಇದೇ ಕ್ಷೇತ್ರದಿಂದ 8ನೇ, 10ನೇ, 11ನೇ ಹಾಗೂ 12ನೇ ಲೋಕಸಭೆಗೆ ಆಯ್ಕೆಯಾದರು.
1999ರಲ್ಲಿ ಸರ್ದಾಪುರ ವಿಧಾನಸಭೆ ಕ್ಷೇತ್ರದಿಂದ ಶಾಸಕರಾದರು. ರಾಜಸ್ಥಾನದ ಸಿಎಂ ಆಗಿ 1998 ರಿಂದ 2003 ಹಾಗೂ 2008ರಿಂದ 2013ರ ತನಕ ಕಾರ್ಯ ನಿರ್ವಹಿಸಿದರು. ಕೇಂದ್ರದಲ್ಲಿ ಪ್ರವಾಸೋದ್ಯಮ ಮತ್ತು ನಾಗರಿಕ ವಿಮಾನಯಾನ ರಾಜ್ಯ ಸಚಿವರಾಗಿ, ಕ್ರೀಡಾ ಖಾತೆ ರಾಜ್ಯ ಸಚಿವ, ಜವಳಿ ಖಾತೆ ರಾಜ್ಯ ಸಚಿವರಾಗಿದ್ದರು.
ದೆಹಲಿಯಿಂದ ರಾಜ್ಯ ರಾಜಕೀಯಕ್ಕೆ ಮರಳಿದ ಬಳಿಕ ಅಶೋಕ್ ಗೆಹ್ಲೋಟ್ ಅವರನ್ನು ಸಿಎಂ ಅಭ್ಯರ್ಥಿಯಾಗಿ ಬಿಂಬಿಸಲಾಯಿತು. 1998 ರಿಂದ 2003ರ ತನಕ ಹಾಗೂ 2008 ರಿಂದ 2013ರ ತನಕ ಮುಖ್ಯಮಂತ್ರಿಯಾಗಿ ಅನುಭವ ಉಳ್ಳವರು. ಜೋಧ್ ಪುರ್ ಮೂಲದ ಅಶೋಕ್ ಅವರು ಸರ್ದಾರ್ ಪುರ ಕ್ಷೇತ್ರದ ಅಭ್ಯರ್ಥಿ. ಸದ್ಯ ಕಾಂಗ್ರೆಸ್ಸಿನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಪಕ್ಷ ಸಂಘಟನೆ ಹಾಗೂ ಕಾರ್ಯಕರ್ತರ ತರಬೇತಿ ನೀಡುವಲ್ಲಿ ಪರಿಣಿತರಾಗಿದ್ದಾರೆ.