ಮಗನಿಗಾಗಿ ಪಕ್ಷದ ಹಿತಾಸಕ್ತಿ ಬಲಿಕೊಟ್ಟ ಅಶೋಕ್ ಗೆಹ್ಲೋಟ್ ಸಂಕಷ್ಟದಲ್ಲಿ
ಜೈಪುರ, ಮೇ 28 : ತನ್ನ ಮಗನಿಗಾಗಿ ಕಾಂಗ್ರೆಸ್ ಪಕ್ಷದ ಹಿತಾಸಕ್ತಿಯನ್ನು ಬಲಿಕೊಟ್ಟಿದ್ದಾರೆಂದು ಇಬ್ಬರು ಸಚಿವರು ತಿರುಗಿಬಿದ್ದಿರುವ ಹಿನ್ನೆಲೆಯಲ್ಲಿ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಸಂಕಷ್ಟದಲ್ಲಿ ಸಿಲುಕಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ರಾಜಸ್ಥಾನದಲ್ಲಿ ಅನುಭವಿಸಿದ ಹೀನಾಯ ಸೋಲಿನ ವಿವರವಾದ ಪರಾಮರ್ಶೆ ಮಾಡಬೇಕು ಮತ್ತು ಈ ಸೋಲಿಗೆ ಕಾರಣರಾದವರನ್ನು ಹಕ್ಕುಬಾಧ್ಯರನ್ನಾಗಿ ಮಾಡಬೇಕೆಂದು ಆ ಇಬ್ಬರು ಸಚಿವರು ಪಟ್ಟು ಹಿಡಿದಿದ್ದಾರೆ. ಈಗಾಗಲೆ ಓರ್ವ ಸಚಿವರು ರಾಜೀನಾಮೆಯನ್ನು ಕೂಡ ನೀಡಿದ್ದಾರೆ.
ವ್ಯಕ್ತಿ ಚಿತ್ರ : ರಾಜಸ್ಥಾನಕ್ಕೆ ಮತ್ತೆ ರಾಜನಾದ ಅಶೋಕ್ ಗೆಹ್ಲೋಟ್
ಸೋಲಿನ ನಂತರ ಶನಿವಾರ ಕರೆಯಲಾಗಿದ್ದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ, ತಾವೇ ಸ್ವತಃ ಅಧಿಕಾರದಿಂದ ಇಳಿಯಲು ಸಿದ್ಧರಾಗಿರುವ ರಾಹುಲ್ ಗಾಂಧಿ ಅವರು, ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಹೆಸರನ್ನು ಪ್ರಸ್ತಾಪಿಸದೆ, ತಮ್ಮ ಮಗನಿಗಾಗಿ ಪಕ್ಷದ ಹಿತಾಸಕ್ತಿಯನ್ನು ಬಲಿಕೊಟ್ಟ ಮುಖ್ಯಮಂತ್ರಿಗಳನ್ನು, ಮಾಜಿ ಕೇಂದ್ರ ಸಚಿವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದರು.
2018ರ ಡಿಸೆಂಬರ್ ನಲ್ಲಿ ಪಕ್ಷೇತರರ ಬೆಂಬಲದಿಂದ ರಾಜಸ್ಥಾನದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್, ಲೋಕಸಭೆ ಚುನಾವಣೆಯಲ್ಲಿ ಎಲ್ಲ 25 ಕ್ಷೇತ್ರಗಳಲ್ಲಿಯೂ ಸೋತು ಸುಣ್ಣವಾಗಿದೆ. ಸ್ವತಃ ಕಾಂಗ್ರೆಸ್ ಅಧಿಕಾರದಲ್ಲಿದ್ದರೂ ಒಂದೂ ಸೀಟು ಗೆಲ್ಲಲು ಸಾಧ್ಯವಾಗಿಲ್ಲ. 2014ರಲ್ಲಿ ಕೂಡ ಕಾಂಗ್ರೆಸ್ ರಾಜಸ್ಥಾನದಲ್ಲಿ ವೈಟ್ ವಾಷ್ ಆಗಿತ್ತು. ಇಲ್ಲಿ ಬಿಜೆಪಿ 24 ಕ್ಷೇತ್ರಗಳಲ್ಲಿ ವಿಜಯದುಂಧುಭಿ ಮೆರೆದಿದೆ.
ರಾಷ್ಟ್ರಪತಿ ಜಾತಿಯ ಕುರಿತು ಹೇಳಿಕೆ: ರಾಜಸ್ಥಾನ ಸಿಎಂ ಗೆಹ್ಲೋಟ್ ವಿವಾದ
ಮಗ ವೈಭವ್ ಗೆಹ್ಲೋಟ್ ಅವರ ಸ್ಪರ್ಧೆಗೆ ಕಾಂಗ್ರೆಸ್ ನಲ್ಲಿ ಅಸಮಾಧಾನ ಇದ್ದರೂ, ಮಗನನ್ನು ಅಶೋಕ್ ಗೆಹ್ಲೋಟ್ ಜೋಧಪುರದಿಂದ ಚುನಾವಣೆಗೆ ನಿಲ್ಲಿಸಿದ್ದರು. ಇಡೀ ರಾಜ್ಯದಲ್ಲಿ ಪ್ರಚಾರ ಮಾಡುವ ಬದಲು ಅಶೋಕ್ ಗೆಹ್ಲೋಟ್ ಅವರು ತಮ್ಮ ಮಗನ ಜಯಕ್ಕಾಗಿ ಶ್ರಮಿಸಿದ್ದರು. ಮಗನಿಗಾಗಿ ಪಕ್ಷವನ್ನು ಬಲಿಗೊಟ್ಟರು ಎಂಬುದು ಅವರ ಮೇಲಿನ ಆರೋಪ. ಇಷ್ಟಾದರೂ ವೈಭವ್ ಅವರು ಬಿಜೆಪಿಯ ಗಜೇಂದ್ರ ಸಿಂಗ್ ಶೇಖಾವತ್ ವಿರುದ್ಧ ಎರಡೂವರೆ ಲಕ್ಷ ಮತಗಳ ಅಂತರದಿಂದ ಸೋತಿದ್ದಾರೆ.
ಕೃಷಿ ಸಚಿವ ಕಟಾರಿಯಾ ಅವರು ರಾಜೀನಾಮೆ ನೀಡಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಇದನ್ನು ಪಕ್ಷದ ಮೂಲಗಳು ಒಪ್ಪಿಲ್ಲವಾದರೂ, ಈ ಅವಮಾನಕರ ಸೋಲಿನ ಹಿನ್ನೆಲೆಯಲ್ಲಿ ಸರಕಾರದಲ್ಲಿ ಮುಂದುವರಿಯುವುದು ನೈತಿಕವಾಗಿ ಸರಿಯಲ್ಲ ಎಂದು ಅವರು ರಾಜೀನಾಮೆ ಬಿಸಾಕಿದ್ದಾರೆ ಎಂದು ತಿಳಿದುಬಂದಿದೆ. ತಾವು ಶಾಸಕರಾಗಿ ಮುಂದುವರಿಯಲಿದ್ದು, ಸರಕಾರದ ವಿರುದ್ಧ ಹೋರಾಟ ಮಾಡುವುದಾಗಿ ಹೇಳಿ ಸರಕಾರವನ್ನೇ ಮುಜುಗರಕ್ಕೆ ಸಿಲುಕಿಸಿದ್ದಾರೆ.
ಗೆಹ್ಲೋಟ್-ಪೈಲಟ್ ಜಟಾಪಟಿ; ರಾಜಸ್ತಾನ ಸಚಿವ ಪಟ್ಟಿ ಬಂತು ಮಧ್ಯರಾತ್ರಿ
ಅಶೋಕ್ ಗೆಹ್ಲೋಟ್ ಮಾತ್ರವಲ್ಲ, ಮಧ್ಯ ಪ್ರದೇಶದ ಮುಖ್ಯಮಂತ್ರಿ ಕಮಲ್ ನಾಥ್ ಮತ್ತು ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ ಅವರು ಪಕ್ಷದ ಹಿತಾಸಕ್ತಿಯನ್ನು ಬಲಿಗೊಟ್ಟು ಮಕ್ಕಳನ್ನು ಚುನಾವಣೆಯಲ್ಲಿ ನಿಲ್ಲಿಸಿದ್ದಕ್ಕೂ ರಾಹುಲ್ ಗಾಂಧಿಯಿಂದ ಕಟು ಟೀಕೆಯನ್ನು ಎದುರಿಸಿದ್ದರು. ಕಮಲ್ ನಾಥ್ ಮಗ ನಕುಲ್ ಚಿಂದವಾಡಾದಿಂದ ಜಯಿಸಿದ್ದರೆ, ಪಿ ಚಿದಂಬರಂ ಮಗ ಕಾರ್ಚಿ ಚಿದಂಬರ್ ಅವರು ಶಿವಗಂಗಾದಿಂದ ಜಯಿಸಿದ್ದಾರೆ.