ರಾಜಸ್ಥಾನದಲ್ಲಿ ಕುದುರೆ ವ್ಯಾಪಾರದ ಬೆಲೆ ಹೆಚ್ಚಾಯಿತು ಎಂದ ಸಿಎಂ!
ಜೈಪುರ್, ಜುಲೈ.30: ರಾಜಸ್ಥಾನದಲ್ಲಿ ವಿಧಾನಸಭಾ ಅಧಿವೇಶನಕ್ಕೆ ದಿನಾಂಕ ನಿಗದಿಯಾಗುತ್ತಿದ್ದಂತೆ ಕುದುರೆ ವ್ಯಾಪಾರದ ಬೆಲೆಯೂ ಕೂಡಾ ಏರಿಕೆಯಾಗುತ್ತಿದೆ ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವ್ಯಂಗ್ಯವಾಡಿದ್ದಾರೆ.
ಆಗಸ್ಟ್.14ರಂದು ರಾಜಸ್ಥಾನ ವಿಧಾನಸಭೆ ಅಧಿವೇಶನ ನಡೆಸುವುದಕ್ಕೆ ಈಗಾಗಲೇ ದಿನಾಂಕವನ್ನು ಘೋಷಿಸಲಾಗಿದೆ. ಈ ಹಿನ್ನೆಲೆ ಶಾಸಕರನ್ನು ಸೆಳೆಯಲು ನಡೆದಿರುವ ಕುದುರೆ ವ್ಯಾಪಾರಕ್ಕೆ ರೇಟ್ ಹೆಚ್ಚಾಗುತ್ತಿದೆ ಎಂದು ಅಶೋಕ್ ಗೆಹ್ಲೋಟ್ ಆರೋಪಿಸಿದ್ದಾರೆ.
ಅಧಿವೇಶನ ದಿನಾಂಕ ನಿಗದಿಗೂ ಮೊದಲು ಒಂದೊಂದು ಕುದುರೆಗೆ ಮೊದಲ ಕಂತಿನಲ್ಲಿ 10 ಕೋಟಿ ಮತ್ತು ಎರಡನೇ ಕಂತಿನಲ್ಲಿ 15 ಕೋಟಿ ಹಣದ ಆಮಿಷವೊಡ್ಡಲಾಗಿತ್ತು. ಇದೀಗ ಈ ಬೆಲೆಯು ಮಿತಿಯೇ ಇಲ್ಲದಂತೆ ಏರಿಕೆಯಾಗುತ್ತಿದೆ ಮತ್ತು ಕುದುರೆ ವ್ಯಾಪಾರ ಮಾಡುತ್ತಿರುವುದು ಯಾರು ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿಯಾಗಿದೆ ಎಂದು ಅವರು ತಿಳಿಸಿದ್ದಾರೆ.
ಬಿಜೆಪಿ ಆಜ್ಞೆಯಂತೆ ಮಾಯಾವತಿ ವರ್ತನೆ:
ಸಮಾಜವಾದಿ ಪಕ್ಷದ ಮುಖ್ಯಸ್ಥೆ ಮಾಯವತಿಯವರು ಬಿಜೆಪಿಯ ಆಜ್ಞೆಯಂತೆ ವರ್ತಿಸುತ್ತಿದ್ದಾರೆ. ಆಕೆ ಮಾಡುತ್ತಿರುವ ದೂರುಗಳ್ಯಾವೂ ಸಮರ್ಥನೀಯವಾಗಿಲ್ಲ ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಕಿಡಿ ಕಾರಿದ್ದಾರೆ. ರಾಜಸ್ಥಾನ ವಿಧಾನಸಭೆಯನ್ನು ಕರೆಸಿಕೊಳ್ಳಲು ಅಶೋಕ್ ಗೆಹ್ಲೋಟ್ ಕ್ಯಾಬಿನೆಟ್ ರಾಜ್ಯಪಾಲರಿಗೆ ನಾಲ್ಕನೇ ಪ್ರಸ್ತಾವನೆಯನ್ನು ಕಳುಹಿಸಿದ ಒಂದೆರಡು ಗಂಟೆಗಳ ನಂತರ ರಾಜ್ ಭವನ ಪ್ರಕಟಣೆ ಬಂದಿದ್ದು, ಆಗಸ್ಟ್ 14 ಅನ್ನು ಹೊಸ ದಿನಾಂಕವನ್ನು ನಿಗದಿಗೊಳಿಸಲಾಗಿದೆ.