ರಾಜಸ್ಥಾನ ಸರ್ಕಾರಕ್ಕೆ ಗಂಡಾಂತರ, ಶಕ್ತಿ ಪ್ರದರ್ಶಿಸಿದ ಸಚಿನ್ ಪೈಲಟ್!
ಜೈಪುರ, ಜೂನ್ 13: ಲೋಕಸಭೆ ಚುನಾವಣೆಯ ನಂತರ ಆಗಲೋ, ಈಗಲೋ ಬೀಳುವಂತೆ ಕಾಣುತ್ತಿರುವ ರಾಜಸ್ಥಾನ ಸರ್ಕಾರಕ್ಕೆ ಮತ್ತೊಂದು ಗಂಡಾಂತರ ಬಂದೆರಗಿದೆ.
ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಉಪಮುಖ್ಯಮಂತ್ರಿ ಸಚಿನ್ ಪೈಲಟ್ ನಡುವಿನ ಭಿನ್ನಾಭಿಪ್ರಾಯ ಮತ್ತೆ ಬಹಿರಂಗವಾಗಿದ್ದು, ತಮ್ಮ ತಂದೆಯ ಪುಣ್ಯತಿಥಿಯನ್ನು ಪೈಲಟ್ ತಮ್ಮ ಶಕ್ತಿ ಪ್ರದರ್ಶನಕ್ಕಾಗಿ ಬಳಸಿಕೊಂಡಂತಿದೆ.
ರಾಜಸ್ಥಾನ ಕಾಂಗ್ರೆಸ್ ನಲ್ಲಿ ಬಂಡಾಯ ಸ್ಫೋಟ, ಪೈಲಟ್ ಸಿಎಂ?
ಸಚಿನ್ ಪೈಲಟ್ ಅವರ ತಂದೆ ರಾಜೇಶ್ ಪೈಲಟ್ ಅವರ ಪುಣ್ಯತಿಥಿಯನ್ನು ಬುಧವಾರ ಆಚರಿಸಲಾಗಿದ್ದು, ಈ ಕಾರ್ಯಕ್ರಮಕ್ಕೆ ಸಚಿನ್ ಪೈಲಟ್ ಅವರನ್ನೇ ಮುಖ್ಯಮಂತ್ರಿಯನ್ನಾಗಿ ಮಾಡುವಂತೆ ಬೆಂಬಲಿಸುವ 62 ಕ್ಕೂ ಹೆಚ್ಚು ಶಾಸಕರು ಭಾಗವಹಿದ್ದರು. ಇವರಲ್ಲಿ ಹದಿನೈದು ರಾಜ್ಯ ಸಚಿವರೂ ಇದ್ದಿದ್ದು ಅಚ್ಚರಿಯನ್ನುಂಟು ಮಾಡಿತ್ತು.
ಕಾರ್ಯಕ್ರಮಕ್ಕೆ ಗೆಹ್ಲೋಟ್ ಗೈರು
62 ಶಾಸಕರು ಕಾರ್ಯಕ್ರಮಕ್ಕೆ ಆಗಮಿಸಿದ್ದರೂ, ಮುಖ್ಯಮಂತ್ರಿ ಗೆಹ್ಲೋಟ್ ಮಾತ್ರ ಹಾಜರಾಗಿರಲಿಲ್ಲ. ಇದು ಮತ್ತಷ್ಟು ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿತ್ತು. ಸರ್ಕಾರಕ್ಕೆ ಬೆಂಬಲ ನೀಡಿದ್ದ ಬಿಎಸ್ಪಿಯ ನಾಲ್ವರು ಶಾಸಕರು ಮತ್ತು ನಾಲ್ವರು ಪಕ್ಷೇತರರು ಸಹ ಈ ಕಾರ್ಯಕ್ರಮದಲ್ಲಿ ಹಾಜರಿದ್ದರು.
ಮಗನ ಸೋಲಿಗೆ ಪೈಲಟ್ ಹೊಣೆ ಎಂದಿದ್ದ ಗೆಹ್ಲೋಟ್
ರಾಜಸ್ಥಾನದ ಜೋಧಪುರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ತಮ್ಮ ಪುತ್ರ ವೈಭವ್ ಗೆಹ್ಲೋಟ್ ಅವರಿಗೆ ಟಿಕೆಟ್ ಗಳಿಸಿಕೊಡುವಲ್ಲಿ ಅಶೋಕ್ ಸಫಲರಾಗಿದ್ದರು. ಆದರೆ ಆ ಕ್ಷೇತ್ರ ಪುತ್ರನಿಗೆ ಸೇಫ್ ಅಲ್ಲ ಎಂದು ಹೇಳಿದ್ದರು ಸಚಿನ್ ಪೈಲಟ್ ಜೋಧಪುರದಲ್ಲೇ ವೈಭವ್ ಚುನಾವಣೆಗೆ ನಿಲ್ಲಲಿ, ಗೆಲ್ಲಿಸಿಕೊಡುತ್ತೇನೆ ಎಂದು ಅಭಯ ನೀಡಿದ್ದರು. ಆದರೆ ವೈಭವ್ ಸೋತರು. ಆ ನಂತರ ಸೋಲಿಗೆ ಪೈಲಟ್ ಕಾರಣ ಎಂದು ಗೆಹ್ಲೋಟ್ ದೂರಿದ್ದರು. ಇದರಿಂದ ಉಭಯ ನಾಯಕರ ನಡುವಿನ ಮನಸ್ತಾಪ ಮತ್ತಷ್ಟು ಹೆಚ್ಚಿತ್ತು.
ನನ್ನ ಮಗನ ಸೋಲಿಗೆ ಪೈಲಟ್ ಕಾರಣ: ಅಶೋಕ್ ಗೆಹ್ಲೋಟ್
ಪೈಲಟ್ ಸಿಎಂ?
ಸಚಿನ್ ಪೈಲಟ್ ಯುವ ನಾಯಕರಾಗಿದ್ದು, ಕಳೆದ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲು ಅವರೇ ಕಾರಣ, ಆದ್ದರಿಂದ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕು ಎಂದು ಅವರ ಅಭಿಮಾನಿಗಳು ಈಗಾಗಲೇ ಕಾಂಗ್ರೆಸ್ ನಾಯಕರಲ್ಲಿ ಒತ್ತಡ ಹೇರುತ್ತಿದ್ದು, ಲೋಕಸಭೆ ಚುನಾವಣೆಯ ಸೋಲಿನ ಬಳಿಕ ಆ ಒತ್ತಡ ಮತ್ತಷ್ಟು ಹೆಚ್ಚಿದೆ.
ವಿಧಾನಸಭೆ ಚುನಾವಣೆಯಲ್ಲಿ ಗೆಲುವು
2018 ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಒಟ್ಟು 200 ಕ್ಷೇತ್ರಗಳ ರಾಜಸ್ಥಾ ವಿಧಾನಸಭೆಯಲ್ಲಿ 199 ಕ್ಷೇತ್ರಗಳಿಗೆ ಮತದಾನ ನಡೆದಿತ್ತು. ಇದರಲ್ಲಿ ಕಾಂಗ್ರೆಸ್ 99 ಕ್ಷೇತ್ರಗಳಲ್ಲಿ ಗೆದ್ದರೆ, ಬಿಜೆಪಿ 73 ಕ್ಷೇತ್ರಗಳಲ್ಲಷ್ಟೇ ಗೆಲ್ಲಲು ಸಮರ್ಥವಾಗಿತ್ತು. ನಂತರ ಕಾಂಗ್ರೆಸ್ ಪಕ್ಷೇತರ ಅಭ್ಯರ್ಥಿಯ ಬೆಂಬಲದೊಂದಿಗೆ ಬಹುಮತ ಸಾಬೀತುಪಡಿಸಿ ಸರ್ಕಾರ ರಚಿಸಿತ್ತು.
ಸಿಎಂ ಗಾದಿಗಾಗಿ ಮನಸ್ತಾಪ
ಮುಖ್ಯಮಂತ್ರಿ ಸ್ಥಾನಕ್ಕಾಗಿ ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ನಡುವೆ ಭಿನ್ನಾಭಿಪ್ರಾಯ ಎದ್ದಿದ್ದರೂ ಹಿರಿತನದ ಆಧಾರದ ಮೇಲೆ ಗೆಹ್ಲೋಟ್ ಅವರಿಗೇ ಸಿಎಂ ಸ್ಥಾನ ನೀಡಲಾಗಿತ್ತು. ಅದು ಪೈಲಟ್ ಮತ್ತು ಅವರ ಬೆಂಬಲಿಗರಲ್ಲಿ ಅಸಮಾಧಾನ ಉಂಟು ಮಾಡಿತ್ತು. ಇದೀಗ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ಎಲ್ಲಾ 25 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಸೋತಿರುವುದು ಗೆಹ್ಲೋಟ್ ಅವರ ವರ್ಚಸ್ಸನ್ನು ಕುಗ್ಗಿಸಿದ್ದು, ಈ ಸಂದರ್ಭವನ್ನು ಬಳಸಿಕೊಂಡು ಪೈಲಟ್ ಮುಖ್ಯಮಂತ್ರಿ ಹುದ್ದೆಗೇರಲು ಯತ್ನ ನಡೆಸಿದ್ದಾರೆ.