ರಾಜಸ್ಥಾನ ರಾಜಕೀಯಕ್ಕೆ ಟ್ವಿಸ್ಟ್ ಕೊಟ್ಟ ಸಚಿನ್ ಪೈಲೆಟ್ ಬೆಂಬಲಿಗ
ಜೈಪುರ, ಜುಲೈ 27: ರಾಜಸ್ಥಾನ ರಾಜಕೀಯ ಬಿಕ್ಕಟ್ಟು ಗಂಟೆ ಗಂಟೆಗೂ ರೋಚಕತೆ ಪಡೆಯುತ್ತಿದೆ. ವಿಧಾನಸಭೆ ಅಧಿವೇಶನಕ್ಕೆ ಅವಕಾಶ ಕೊಡಿ ಎಂದು ಕೇಳಿದ್ದರೂ ಅನುಮತಿ ನೀಡದ ರಾಜ್ಯಪಾಲರು ಸೋಮವಾರ ಷರತ್ತು ವಿಧಿಸಿ ಒಪ್ಪಿಗೆ ಸೂಚಿಸಿದ್ದಾರೆ.
ಸಚಿನ್ ಪೈಲೆಟ್ ಸೇರಿದಂತೆ 19 ಕಾಂಗ್ರೆಸ್ ಶಾಸಕರ ಅನರ್ಹತೆ ವಿಚಾರಕ್ಕೆ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದ ಸ್ಪೀಕರ್ ಸೋಮವಾರ ಅರ್ಜಿ ವಾಪಸ್ ಪಡೆದುಕೊಂಡಿದ್ದಾರೆ.
ರಾಜಸ್ಥಾನ ಕಾಂಗ್ರೆಸ್ ಬಿಕ್ಕಟ್ಟಿಗೆ ತಿರುವು; ಸ್ಪೀಕರ್ ಅರ್ಜಿ ವಾಪಸ್
ರಾಜಸ್ಥಾನದ ರಾಜಕೀಯದಲ್ಲಿ ಮುಂದೇನಾಗಬಹುದು ಎಂಬ ಕುತೂಹಲ ಕಾಡುತ್ತಿದೆ. ಈ ಮಧ್ಯೆ ಸಚಿನ್ ಪೈಲೆಟ್ ಬಣದಲ್ಲಿರುವ ಶಾಸಕ ಹೇಮರಾಮ್ ಚೌಧರಿ ಸೋಮವಾರ ಅಚ್ಚರಿ ಹೇಳಿಕೆ ನೀಡಿದ್ದಾರೆ.
'ಅಶೋಕ್ ಗೆಹ್ಲೋಟ್ ಜೊತೆಯಲ್ಲಿರುವ 10-15 ಶಾಸಕರು ನಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ ಮತ್ತು ಅವರು ಮುಕ್ತರಾದ ಕೂಡಲೇ ಅವರು ನಮ್ಮ ಕಡೆಗೆ ಬರುತ್ತಾರೆ' ಎಂದು ಹೇಳಿದ್ದಾರೆ. 'ಗೆಹ್ಲೋಟ್ ನಿರ್ಬಂಧಗಳನ್ನು ತೆಗೆದುಹಾಕಿದರೆ, ಎಷ್ಟು ಶಾಸಕರು ಅವರು ಕಡೆ ಉಳಿದಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ' ಎಂದು ಟ್ವಿಸ್ಟ್ ನೀಡಿದ್ದಾರೆ.
ರಾಜಸ್ಥಾನ ವಿಧಾನಸಭೆ ಅಧಿವೇಶನ ಕರೆಯಲು ರಾಜ್ಯಪಾಲರ ಆದೇಶ
ಇದೆಲ್ಲದರ ನಡುವೆ ಅಶೋಕ್ ಗೆಹ್ಲೋಟ್ ಸರ್ಕಾರ ವಿಶ್ವಾಸಮತ ಸಾಬೀತು ಪಡಿಸಲಿ ಎಂಬ ಕೂಗು ಜೋರಾಗಿದೆ. ಕಾಂಗ್ರೆಸ್ ಸರ್ಕಾರಕ್ಕೆ ಅಗತ್ಯ ಶಾಸಕರ ಬಲ ಇಲ್ಲ ಎಂದು ಬಿಜೆಪಿ ದೂರಿದೆ. ಆದರೆ, ರಾಜಸ್ಥಾನ ಸಿಎಂ ಗೆಹ್ಲೋಟ್ ತಮ್ಮೊಂದಿಗೆ 104 ಶಾಸಕರಿದ್ದಾರೆ ಎಂದು ಹೇಳಿಕೊಂಡಿದ್ದಾರೆ.